Saturday, August 31, 2013

ಸೆ.4ರಿಂದ 6ರವರೆಗೆಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಉತ್ಸವ

ಮಂಗಳೂರು,ಆಗಸ್ಟ್.31: ಮಂಗಳೂರು ವಿಶ್ವವಿದ್ಯಾನಿಲಯವು ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಉತ್ಸವನ್ನು ಸೆ.4ರಿಂದ 6ರವರೆಗೆ ಆಯೋಜಿಸಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ಹೇಳಿದ್ದಾರೆ.
ಇಂದು ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಉತ್ಸವದ ಕುರಿತು ಮಾಹಿತಿ ನೀಡಿದರು.

   ಸೆಪ್ಟೆಂಬರ್ 4ರಂದು ಪೂರ್ವಾಹ್ನ 10 ಗಂಟೆಗೆ ಪದ್ಮಶ್ರೀ ಡಾ.ಬಿ.ಜಯಶ್ರೀ ಅವರು ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡುವರು. ಸೆ.6ರಂದು ಅಪರಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ನಿವೃತ್ತ ಏರ್ ಮಾರ್ಷಲ್ ಮಡಿಕೇರಿಯ ಕೆ.ಸಿ.ಕಾರ್ಯಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
    ಮಂಗಳೂರು ವಿಶ್ವ ವಿದ್ಯಾನಿಲಯ ಅಧೀನದ 67 ಕಾಲೇಜುಗಳ ಸುಮಾರು 1600 ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಮೂರು ದಿನಗಳ ಈ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಲಿದೆ. ವಿವಿಯ 5 ಸಭಾಂಗಣದಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರತಿ ಸ್ಪರ್ಧೆಯನ್ನು ಆಯೋಜಿಸುವಲ್ಲಿ ಪ್ರಾಧ್ಯಾಪಕರನ್ನೊಳಗೊಂಡ ತಂಡಗಳನ್ನು ಈಗಾಗಲೇ ರಚಿಸಲಾಗಿದೆ. ಫಲಿತಾಂಶ ನಿರ್ಧರಿಸಲು ಪರಿಣತ ತೀರ್ಪುಗಾರರನ್ನು ನಿಯೋಜಿಸಲಾಗಿದೆ ಎಂದು ಕುಲಪತಿಗಳು ಮಾಹಿತಿ ನೀಡಿದರು. ಉತ್ತಮ ಸಾಧನೆ ತೋರುವ ತಂಡ ಅಂತರ್ ವಿಶ್ವ ವಿದ್ಯಾನಿಲಯ ಮಟ್ಟ ಮತ್ತು ತದನಂತರ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲಿದೆ. ಮೊದಲನೇ ದಿನ ಸಮೂಹ ಗಾಯನ, ಮಿಮಿಕ್ರಿ, ರಂಗೋಲಿ,  ಜಾನಪದ ಗೀತೆ, ಕ್ಲಾಸಿಕಲ್ ಇನ್ಸ್ಟ್ರುಮೆಂಟಲ್ ಮುಂತಾದ ಸ್ಪರ್ಧೆಗಳು ನಡೆದರೆ,2ನೇ ದಿನ ಜಾನಪದ ನೃತ್ಯ, ಕ್ಲಾಸಿಕಲ್ ಡ್ಯಾನ್ಸ್, ಕ್ವಿಜ್, ಸ್ಕಿಟ್,  ಡಿಬೇಟ್ ಮತ್ತಿತತ ಸ್ಪರ್ಧೆಗಳು ನಡೆಯಲಿವೆ.  ಎಂದು ಕುಲಪತಿಗಳು ವಿವರಿಸಿದರು.
           ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ಪಿ.ಶಿವರಾಂ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ.ಪಿ.ಎಲ್.ಧರ್ಮ, ಮಂಗಳೂರು ವಿವಿ ಕಾಲೇಜಿ ಉಪ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.