Friday, August 2, 2013

ಶಿಶು ಜನನದ ಅರ್ಧ ಗಂಟೆಯಲ್ಲೇ ಸ್ತನ್ಯ ಪಾನ ಮಾಡಿಸಿ

ಮಂಗಳೂರು, ಅಗೋಸ್ತು.02 :- ಶಿಶು ಜನನದ ಅರ್ಧ ಗಂಟೆಯಲ್ಲೇ ಮಗುವಿಗೆ ತಾಯಿಯ ಕಿಣ್ವಭರಿತ ಎದೆ ಹಾಲುಣಿಸಿದರೆ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿ ಮಗು ತಾಯಿಯ ಅನುಬಂಧ ಹೆಚ್ಚಾಗಲಿದೆ ಎಂದು ತ್ರಿವೆಂಡ್ರಮ್ನ ಆಹಾರ ಮತ್ತು ಪೌಷ್ಠಿಕ ಮಂಡಳಿ ಸಹಾಯಕ ತಾಂತ್ರಿಕ ಸಲಹೆಗಾರ  ಪ್ರಭಾತ್ ತಿಳಿಸಿದ್ದಾರೆ.
ಅವರು ಇಂದು ನಗರದ ಕುಂಟಿಕಾನದಲ್ಲಿರುವ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ಆಹಾರ ಮತ್ತು ಪೌಷ್ಠಿಕ ಮಂಡಳಿ,ಮಂಗಳೂರು ಹಾಗೂ ಎಜೆ ಆಸ್ಪತ್ರೆಯ ವೈದ್ಯಕೀಯ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಹಾಗೂ ಸ್ತನ್ಯಪಾನದಿಂದ ಮಗು ತಾಯಿಯ ಬಂಧಕ್ಕೆ ಪೂರಕವೆಂಬ ವಿಷಯ ಕುರಿತ ವಿಚಾರಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಕಳೆದ ಒಂದು ದಶಕದಿಂದ ಸ್ತನ್ಯಪಾನ ವೃದ್ಧಿಯಾಗಿಲ್ಲ, ವಿಶ್ವದ 117 ರಾಷ್ಟ್ರಗಳು ಸ್ತನ್ಯಪಾನವನ್ನು ಶಿಶುಗಳಿಗೆ ನೀಡುವ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ,ಭಾರತದಲ್ಲಿ ಶೇಕಡಾ 24 ಮಕ್ಕಳಿಗೆ ಸ್ತನ್ಯಪಾನ ದೊರಕುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಪ್ರಭಾತ್ರವರು, ಮಗು ಜನನದ ಅರ್ಧ ಗಂಟೆಯೊಳಗೆ ಮಗುವಿಗೆ ಸ್ತನ್ಯಪಾನ ಮಾಡಿಸಬೇಕು ಎಂದು ತಿಳಿಸಿ 6 ತಿಂಗಳವರೆಗೂ ಸ್ತನ್ಯಪಾನವಲ್ಲದೆ ಬೇರೆ ಯಾವುದೇ ಆಹಾರವನ್ನಾಗಲೀ, ಮೇವಿನ ಹಾಲನ್ನಾಗಲೀ ಮಗುವಿಗೆ ನೀಡದೇ ಕೇವಲ ಸ್ತನ್ಯಪಾನವನ್ನು ಮಾತ್ರ ನೀಡಿದಲ್ಲಿ ಅಂತಹ ಮಕ್ಕಳ ಬುದ್ಧಿಮತ್ತೆ (ಐಕ್ಯೂ)ಹೆಚ್ಚಿ ಮಕ್ಕಳು ಹೆಚ್ಚು ಬುದ್ದಿವಂತರು ಹಾಗೂ ಆರೋಗ್ಯಪೂರ್ಣವಂತರಾಗಿರುತ್ತಾರೆಂದು  ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಗಟ್ರೂಡ್ ವೇಗಸ್ ಅವರು ಮಾತನಾಡಿ, ಗರ್ಭಾವಸ್ಥೆಯಲ್ಲೇ ಇರುವಾಗ ಮಹಿಳೆಯರಲ್ಲಿ ಸ್ತನ್ಯಪಾನದ ಮಹತ್ವ ತಿಳಿಸುವುದರಿಂದ ಶಿಶುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ನೆರವಾಗಲಿದೆ. ಮಗುವಿಗೆ 6 ತಿಂಗಳಿಗಿಂತ ಮುಂಚೆ ಯಾವುದೇ ರೀತಿಯ ಪೇಯಗಳನ್ನು ಅಥವಾ ಅಂಗಡಿಯಲ್ಲಿ ದೊರಕುವ ಪ್ಯಾಕ್ಡ್ ಆಹಾರಗಳನ್ನು ಕಡ್ಡಾಯವಾಗಿ ನೀಡಬಾರದಾಗಿ ತಿಳಿಸಿ,ಮಗುವಿಗೆ 6 ತಿಂಗಳ ನಂತರ ಆರೋಗ್ಯ ಸಹಾಯಕಿಯರ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಶಿಫಾರಸ್ಸಿನಂತೆ ಪೌಷ್ಠಿಕ ಆಹಾರವನ್ನು ಮನೆಯಲ್ಲೇ ಶುಭ್ರವಾಗಿ ತಯಾರಿಸಿ ನೀಡಬೇಕೆಂದು ಅವರು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಲ್ಎಂಇಟಿ  ಅಧ್ಯಕ್ಷರಾದ ಎ.ಜೆ ಶೆಟ್ಟಿ ವಹಿಸಿದ್ದರು. ಡಾ.ರಮೇಶ್ ಪೈ ,ಪ್ರಶಾಂತ್ ಶೆಟ್ಟಿ ಪ್ರಶಾಂತ್ ಮರಿಯಾ ಅವರುಗಳು ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ಬಳಿಕ ಸ್ತನ್ಯಪಾನದ ಬಗ್ಗೆ ತಾಂತ್ರಿಕ ಸಮಾವೇಶವನ್ನು ಆಯೋಜಿಸಲಾಗಿತ್ತು.