Monday, August 12, 2013

ಶಾಲೆ ಬಿಟ್ಟ ಮಕ್ಕಳನ್ನು ಕೂಡಲೇ ಶಾಲೆಗೆ ಸೇರುವಂತೆ ಪ್ರೇರೇಪಿಸಿ-ಅಪರ ಜಿಲ್ಲಾಧಿಕಾರಿ

ಮಂಗಳೂರು ಆಗಸ್ಟ್ 12 :ಶಾಲೆಗಳಲ್ಲಿ 14 ವರ್ಷದ ಕೆಳಗಿನ ಮಕ್ಕಳು ಶಾಲೆ ಬಿಟ್ಟಿದ್ದರೆ,ಅವರನ್ನು ಹುಡುಕಿ ಕೂಡಲೇ ಶಾಲೆಗೆ ಸೇರುವಂತೆ ಪ್ರೇರೇಪಿಸಿ, ಶಾಲೆಗೆ ಬರುವಂತೆ ಮಾಡಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿಗಳಾದ  ದಯಾನಂದ ಅವರು ಸೂಚಿಸಿದ್ದಾರೆ. ಅವರು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್  ಹಾಲ್ ನಲ್ಲಿ ಚೈಲ್ಡ್ ಲೈನ್ ಎಡ್ವೈಸರಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮಾನಸಿಕ ಅಸ್ವಸ್ಥತೆಯ ಮಕ್ಕಳು ಮತ್ತು ಅಲ್ಕೋಹಾಲ್ ಉಪಯೋಗಿಸುತ್ತಿರುವ ಮಕ್ಕಳ  ವಾಸ್ತವ್ಯಕ್ಕೆ ಬೇಕಾದ ವ್ಯವಸ್ಥೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಭಿಕ್ಷೆ ಬೇಡುತ್ತಿರುವ ಮಕ್ಕಳ ರಕ್ಷಣೆ ಮಾಡುವುದು ಮತ್ತು ಅವರಿಗೆ ವಸತಿ ಕಲ್ಪಿಸುವ ವಿಚಾರ ಇಂದಿನ ಅಗತ್ಯವೆಂದು ಹೇಳಿದರು. ಸರಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಬಾಲ್ಯ ವಿವಾಹ ಮತ್ತು ಲೈಂಗಿಕ  ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕಿದೆ.  ಮಕ್ಕಳ ರಕ್ಷಣೆ ಬಗ್ಗೆ ಹೆದ್ದಾರಿ ಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ತಿಳಿಸಿದರು.ಎಲ್ಲಾ ಶಾಲೆಗಳಲ್ಲಿ ಮಕ್ಕಳ ರಕ್ಷಣೆ ಬಗ್ಗೆ ಸಂದೇಶಗಳ ಬೋರ್ಡುಗಳನ್ನು ಅಳವಡಿಸುವಂತೆ ಚರ್ಚಿಸಲಾಯಿತು.ಮಕ್ಕಳ ಬಗ್ಗೆ ಏನಾದರೂ ದೂರುಗಳಿದ್ದಲ್ಲಿ ದಿನದ 24 ಗಂಟೆಯೂ  1098 ದೂರವಾಣಿಗೆ ಕರೆ ಮಾಡಿ ತಿಳಿಸಬಹುದಾಗಿದೆ.
ಮಕ್ಕಳ ರಕ್ಷಣಾ ಘಟಕದ ವತಿಯಿಂದ ನಡೆದ ಸಭೆಯಲ್ಲಿ ಮಕ್ಕಳ  ಹಕ್ಕುಗಳ ಬಗ್ಗೆ ,ಮಕ್ಕಳ ರಕ್ಷಣೆ, ಮಕ್ಕಳ ಸೌಲಭ್ಯ, ಮಕ್ಕಳ ಆರೋಗ್ಯ,ಮಕ್ಕಳ ಪಾಲ್ಗೊಳ್ಳುವಿಕೆ, ಅಂಕಿ ಅಂಶಗಳ ಬಗ್ಗೆ ಚರ್ಚಿಸಲಾಯಿತು. ಎಲ್ಲಾ ತಾಲೂಕುಗಳಲ್ಲಿ ನಡೆಯುತ್ತಿರುವ ಸಭೆಗಳಲ್ಲಿ ಶಾಲೆಗಳ ಪ್ರತಿನಿಧಿಗಳನ್ನು ಗುಂಪು ಚರ್ಚೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬಹುದಾದ ಬಗ್ಗೆ ಚರ್ಚೆ ನಡೆಯಿತು.
 ಸಭೆಯಲ್ಲಿ ಶ್ರೀಮತಿ ಆಶಾನಾಯ್ಕ್,ಅಧ್ಯಕ್ಷರು ,ಚೈಲ್ಡ್ ವೆಲ್ಫೇರ್ ಕಮಿಟಿ, ಶ್ರೀಮತಿ ಗ್ರೇಸಿ ಗೊನ್ಸಾಲೀಸ್, ಮುಂತಾದವರು ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ  ಡಾ.ಸೋಫಿಯಾ ಎನ್.ಫೆರ್ನಾಂಡೀಸ್ ,ಚೈಲ್ಡ್ ಲೈನ್ ಡೈರೆಕ್ಟರ್ ಎಲ್ಲರನ್ನು ಸ್ವಾಗತಿಸಿದರು.