Wednesday, August 7, 2013

ಪ್ರವಾಸೋದ್ಯಮ ಅಭಿವೃದ್ಧಿಗೆ ಮುನ್ನುಡಿ

ಮಂಗಳೂರು, ಆಗಸ್ಟ್,07:- ಗೋವಾ ಹಾಗೂ ಕೇರಳ ರಾಜ್ಯಗಳಲ್ಲಿ ಸಿ ಆರ್ ಝಡ್ ಪ್ರದೇಶ ವ್ಯಾಪ್ತಿಯ 200 ಮೀಟರ್ ನಿಂದ ದೂರ ಇರುವ ಪ್ರದೇಶಗಳಲ್ಲಿ ತಾತ್ಕಾಲಿಕ ನಿರ್ಮಾಣಕ್ಕೆ ಸೆಪ್ಟೆಂಬರ್ ನಿಂದ ಮೇ ತಿಂಗಳವರೆಗೆ ಅವಕಾಶ ಮಾಡಿಕೊಟ್ಟು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗಿದೆ. ಅದೇ ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅವಕಾಶ ಮಾಡಿಕೊಡುವಂತೆ ನೀತಿ ನಿರೂಪಿಸಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸುವ ಬಗ್ಗೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ನಿರ್ಧರಿಸಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದು, ಸಿ ಆರ್ ಝಡ್ ನಿಯಮಾವಳಿ ಯೊಳಗೆ ಸಣ್ಣ ತಿದ್ದುಪಡಿ ತರುವುದರಿಂದ ಬಹಳ ಅನಕೂಲವಾಗಲಿದೆ ಎಂದು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ವಿವಿಧ ಸಂಘಟನೆಗಳ ಮುಖ್ಯಸ್ಥರು ಅಭಿಪ್ರಾಯಪಟ್ಟರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರು, ಪ್ರವಾಸೋದ್ಯಮ ಸಚಿವರಾದ  ಆರ್ ವಿ ದೇಶಪಾಂಡೆ ಅವರು ರಾಜ್ಯವನ್ನು ಪ್ರವಾಸೋದ್ಯಮದಲ್ಲಿ ಮುಂಚೂಣಿಗೆ ತರಲು ಉತ್ಸುಕರಾಗಿದ್ದು, ಈ ಸಂಬಂಧ ರಾಜ್ಯ ಮಟ್ಟದಲ್ಲಿ ಸಭೆ ಕರೆದಿದ್ದು, ನಮ್ಮಿಂದ ನಿರ್ದಿಷ್ಟ ಮತ್ತು ಸಮಗ್ರ ಪ್ರಸ್ತಾವನೆಗಳು ಸಲ್ಲಿಕೆಯಾದರೆ ಫಲಪ್ರದವಾಗಲು ಸಾಧ್ಯ ಎಂದರು.
ಸಭೆಯಲ್ಲಿ ಪ್ರಸ್ತಾಪವಾದಂತೆ ಅತಿ ಮುಖ್ಯವಾಗಿ ಪ್ರವಾಸಿಗರ ಅನುಕೂಲಕ್ಕೆ ಸಣ್ಣ ಸ್ಥಳಗಳ ನಕ್ಷೆಯೊಂದಿಗೆ ಮಾಹಿತಿ ಕೈಪಿಡಿ ಹಾಗೂ ನಗರದ ಪ್ರಮುಖ ಪ್ರದೇಶಗಳಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸುವ ಬಗ್ಗೆಯೂ ಪ್ರವಾಸೋದ್ಯಮ ಇಲಾಖೆಗೆ ಸೂಕ್ತ ನಿರ್ದೇಶನಗಳನ್ನು ಜಿಲ್ಲಾಧಿಕಾರಿಗಳು ನೀಡಿದರು.
ಪ್ರವಾಸೋದ್ಯಮದಲ್ಲಿ ಸ್ಥಳೀಯರ ಸಹಭಾಗಿತ್ವ, ಜಿಲ್ಲೆಗಳ ಹೊಟೆಲ್ ಗಳವರ ಸಹಕಾರ ತೆಗೆದುಕೊಳ್ಳುವ ಬಗ್ಗೆಯೂ ಸಭೆ ಚರ್ಚಿಸಿತು.
ಇದರ ಜೊತೆಗೆ ವಿಮಾನನಿಲ್ದಾಣ, ಕೆ ಎಸ್ ಆರ್ ಟಿಸಿ, ರೈಲು ನಿಲ್ದಾಣಗಳಲ್ಲಿ ಸಣ್ಣ ಮಾಹಿತಿ ಕೈಪಿಡಿಗಳನ್ನು ಪ್ರವಾಸಿಗರಿಗೆ ಲಭ್ಯವಾಗಿಸುವ ಸಲಹೆಯನ್ನು ಸಭೆ ಪರಿಗಣಿಸಿತು. ಸಭೆಯಲ್ಲಿ ಉಪಸ್ಥಿತರಿದ್ದ ಬಂದರು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿ, ಪ್ರವಾಸಕ್ಕೆ ಸಂಬಂಧಿಸಿದಂತೆ ಬೋಟಿಂಗ್ ನಡೆಸುವವರು ಬಂದರು ಇಲಾಖೆಯಿಂದ ಅಗತ್ಯ ಪರವಾನಿಗೆ ಪಡೆಯುವುದು ಅಗತ್ಯ ಎಂದರು. ಸಿ ಆರ್ ಝಡ್ ಅಧಿಕಾರಿ ಮಹೇಶ್ ಅವರು ಸಿ ಆರ್ ಝಡ್ ಕಾನೂನನ್ನು ಪ್ರವಾಸೋದ್ಯಮದಲ್ಲಿ ನಿರತರಾಗಿರುವವರಿಗೆ ತಿಳಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.