Saturday, August 3, 2013

ವಕ್ಫ್ ಆಸ್ತಿ ಸಂರಕ್ಷಣೆಗೆ ಸೂಕ್ತ ಕ್ರಮ: ಅನಿಲ್ ಕುಮಾರ್

ಮಂಗಳೂರು, ಆಗಸ್ಟ್,03:- ವಕ್ಫ್ ಆಸ್ತಿಗಳನ್ನು ಗುರುತಿಸಿ ಸರ್ವೇಯರ್ ಅವರಿಂದ ಸಮೀಕ್ಷೆ ಮಾಡಿಸಿ ಸಂರಕ್ಷಣೆ ಮಾಡಿ ಎಂದು ವಕ್ಫ್, ಹಜ್, ಅಲ್ಪಸಂಖ್ಯಾತರ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ  ಅನಿಲ್ ಕುಮಾರ್ ಇಂದು ನಿರ್ದೇಶನ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಬಂಧ ಪಟ್ಟ ಇಲಾಖೆ ಮತ್ತು ವಕ್ಫ್ ಬೋರ್ಡ್ ನ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮುಖ್ಯಮಂತ್ರಿಗಳು ಸಮಯಮಿತಿಯೊಳಗೆ ಸರ್ವೇ ಕಾರ್ಯ ನಡೆಸಲು ಸೂಚಿಸಿದ್ದು, ಜಿಲ್ಲೆಯಿಂದ ಈ ಸಂಬಂಧ ಸಮಯಮಿತಿಯೊಳಗೆ ಮಾಹಿತಿ ಬೇಕು ಎಂದರು.
ಬಂಟ್ವಾಳ, ಮಂಗಳೂರಿನಲ್ಲಿ ಆಸ್ತಿ ಸರ್ವೇ ಬಾಕಿ ಇದೆ ಎಂದ ಅವರು ಸಮುದಾಯಭವನ, ಹಜ್ಘರ್ ನಿರ್ಮಾಣಗಳ ಪ್ರಗತಿ ಪರಿಶೀಲಿಸಿದರು. 
ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಹಾಗೂ ಹಿಂದುಳಿದವರಿಗೆ  ಇರುವ ಹಾಸ್ಟೆಲ್,ಸೌಕರ್ಯ ಹಾಗೂ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದ ಕಾರ್ಯದರ್ಶಿಗಳು ಇಲಾಖಾಧಿಕಾರಿಗಳ ಸಮಸ್ಯೆಗಳನ್ನು ಪರಿಹರಿಸುವುದಾಗಿ ನುಡಿದರು. ಹಾಸ್ಟೆಲ್ ಗಳಲ್ಲಿ ವಾರ್ಡನ್ ಗಳ ಕೊರತೆ ಇದೆ. ಮಕ್ಕಳ ಸಂಖ್ಯೆ ಹೆಚ್ಚಿದ್ದು, ಕೆಲಸದವರ ಅನುಪಾತ ಕಡಿಮೆಯಿದೆ ಎಂದು ಅಧಿಕಾರಿಗಳು ಜಿಲ್ಲೆಯ ಸಮಸ್ಯೆಗಳನ್ನು ನಿರ್ದೇಶಕರ ಮುಂದಿಟ್ಟರು.
ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆಗಳು ಉಳಿದೆಡೆಗಳಿಗಿಂತ ಭಿನ್ನವಾಗಿದ್ದು, ಈ ಜಿಲ್ಲೆಯ ಸಮಸ್ಯೆ ಪರಿಹಾರಕ್ಕೆ ವಿಶೇಷ ಸೌಲಭ್ಯಗಳನ್ನು ರೂಪಿಸುವ ಬಗ್ಗೆ ನಿರ್ದೇಶಕರ ಗಮನ ಸೆಳೆದರು. ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಅನುದಾನ ಒದಗಿಸಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಮಾಜ ಕಲ್ಯಾಣ ಇಲಾಖಾಧಿಕಾರಿ  ಅರುಣ್ ಫುರ್ಟಾಡೋ ಅವರು ಹಾಸ್ಟೆಲ್ ಗಳಲ್ಲಿ ಇರುವ ಸಮಸ್ಯೆಗಳನ್ನು ನಿದರ್ೇಶಕರಿಗೆ ಮನನ ಮಾಡಿದರು. ಸಭೆಯಲ್ಲಿ ಆರ್ ಅಬ್ದುಲ್ ರಿಯಾಝ್ ಖಾನ್ ಅಧ್ಯಕ್ಷರು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ಜಿಲ್ಲಾ ಅಧ್ಯಕ್ಷರು ಉಸ್ಮಾನ್ ಹಾಜಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ದಯಾನಂದ ಕೆ.ಎ. ಮಂಗಳೂರು ಸಹಾಯಕ ಆಯುಕ್ತರಾದ ಸದಾಶಿವ ಪ್ರಭು, ಪುತ್ತೂರು ಸಹಾಯಕ ಆಯುಕ್ತರಾದ ಪ್ರಸನ್ನ, ಡಿಡಿಎಲ್ಆರ್ ಕುಸುಮಾಧರ ಅವರು ಸಭೆಯಲ್ಲಿದ್ದರು.