Wednesday, February 6, 2013

ಮಾದಕದ್ರವ್ಯ ಜಾಲಪತ್ತೆಗೆ ಸೂಕ್ತ ಕ್ರಮ: ಜಿಲ್ಲಾಧಿಕಾರಿ


ಮಂಗಳೂರು, ಫೆಬ್ರವರಿ.06 : ನಗರದಲ್ಲಿ ಮಾದಕದ್ರವ್ಯ ಜಾಲ ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದ್ದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚಿಸಿತು.
    ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿ ಚಿವುಟಲು ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಗೆ ಈ ನಿಟ್ಟಿನಲ್ಲಿ ಎಲ್ಲ ಸಹಕಾರ ನೀಡುವುದಾಗಿ ಹೇಳಿದರಲ್ಲದೆ, ಅಬಕಾರಿ ಇಲಾಖೆ, ಮಹಾನಗರಪಾಲಿಕೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆಯ ಜೊತೆಗೆ ಕೈಜೋಡಿಸಲಿದೆ ಎಂದರು. 
ಈ ಸಂಬಂಧ ಫೆ.8ರಂದು ಪೂರ್ವಾಹ್ನ 12 ಗಂಟೆಗೆ ಜಿಲ್ಲೆಯ ಅದರಲ್ಲೂ ಪ್ರಮುಖವಾಗಿ ನಗರದ ಎಲ್ಲ ಪಿಯು ಮತ್ತು ಕಾಲೇಜು ಪ್ರಾಂಶುಪಾಲರ ಸಭೆಯನ್ನು ಕರೆದು  ತಾವು ಖುದ್ದಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡುವುದಾಗಿ ಹೇಳಿದ ಅವರು, ಸಮಸ್ಯೆಯನ್ನು ಎದುರಿಸಲು ಹಾಗೂ ನಿವಾರಿಸುವಲ್ಲಿ ಶೈಕ್ಷಣಿಕ ಸಂಸ್ಥೆಗಳ ಸಹಕಾರವನ್ನು  ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದಾಗಿ ಹೇಳಿದರು.
ನಿತ್ಯ , ನಿರಂತರ ಜಾಗೃತಿ ಕಾರ್ಯಕ್ರಮ ಮುಂದಿನ ಒಂದು ವರ್ಷ ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ಈ ಜಾಲದಿಂದ ಹೊರಗಿಡಲು ಜಿಲ್ಲಾಡಳಿತ ಸರ್ವ ಯತ್ನಗಳನ್ನು ಮಾಡಲಿದೆ. ಇದಕ್ಕೆ ಹೆತ್ತವರ ಮತ್ತು ಸರ್ಕಾರೇತರ ಸಂಘಸಂಸ್ಥೆಗಳ ಸಹಕಾರವನ್ನು ಸ್ವೀಕರಿಸಲಾಗುವುದು ಎಂದರು. ವಿದ್ಯಾರ್ಥಿಗಳು ಅದರಲ್ಲೂ ಮುಖ್ಯವಾಗಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ನಿಗಾ ಇಡುವ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆಯಾಗಿದ್ದು, ಎಲ್ಲ ಕಾಲೇಜುಗಳ ಪ್ರತಿಯೊಂದು ತರಗತಿಗಳಿಗೆ ಒಬ್ಬ ಶಿಕ್ಷಕರ ಉಸ್ತುವಾರಿ ಹಾಗೂ ಕೌನ್ಸಿಲರ್ ನೇಮಕ ಮಾಡಬೇಕೆಂದು ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್ ಸಲಹೆ ಮಾಡಿದರು.
ಈಗಾಗಲೇ ರ್ಯಾಗಿಂಗ್ ಪಿಡುಗನ್ನು ಅಂತ್ಯಗೊಳಿಸಿದ ಮಾದರಿಯಲ್ಲೇ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ  ವ್ಯಸನ ತಡೆಗೆ ಕ್ರಮಕೈಗೊಳ್ಳಬೇಕೆಂದು ಸಭೆ ನಿರ್ಧರಿಸಿತು. ಪಿಯು ಹಾಗೂ ಪದವಿ ಕಾಲೇಜುಗಳ ಶಿಕ್ಷಕರ ಹೊಣೆ ಈ ನಿಟ್ಟಿನಲ್ಲಿ ಹೆಚ್ಚಿದ್ದು, ಜಾಗೃತಿ ಮೂಡಿಸುವ, ತಂಡ ರಚಿಸುವ ವಿದ್ಯಾರ್ಥಿಗಳ ಮೇಲೆ ನಿರಂತರ ಕಣ್ಣಿಡುವ ಕೆಲಸದಿಂದ ಮಾತ್ರ ಸಮಸ್ಯೆ ಪರಿಹರಿಸಲು ಸಾಧ್ಯವಿದೆ. ಈ ಸಂಬಂಧ ಪಿಯುಸಿ ಹಾಗೂ ಪದವಿ ಕಾಲೇಜಿನ ಮುಖ್ಯಸ್ಥರು ಎಲ್ಲ ಸಹಕಾರ ನೀಡುವ ಭರವಸೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರಲ್ಲದೆ  ಹಾಸ್ಟೆಲ್ ವಾರ್ಡನ್ ಗಳ ಹೊಣೆಗಾರಿಕೆಯ ಬಗ್ಗೆಯೂ ಅವರಿಗೆ ಮನವರಿಕೆ ಮಾಡುವಂತೆ ತಿಳಿಹೇಳಲು ಜಿಲ್ಲಾಧಿಕಾರಿಗಳು ಹೇಳಿದರು.
ನಗರದ 37 ಕಾಲೇಜುಗಳಲ್ಲಿ ಈ ಸಂಬಂಧ ನಿರಂತರ ಸಭೆಗಳಾಗುತ್ತಿದ್ದರೂ ಈ ಸಭೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಡಿ ವೈ ಎಸ್ ಪಿ ರ್ಯಾಂಕಿನ ಪೊಲೀಸರು ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಡಿಸಿಪಿ ಮುತ್ತುರಾಯರು ಹೇಳಿದರು. ಈ ಸಂಬಂಧ ಪೊಲೀಸ್ ಕಮಿಷನರೇಟ್ ಈಗಾಗಲೇ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು, ಹೆತ್ತವರ, ಶಿಕ್ಷಕರ ಹಾಗೂ ಸಾರ್ವಜನಿಕರ ಸಹಕಾರ ಪೊಲೀಸ್ ಇಲಾಖೆಗೆ ಅಗತ್ಯವಿದೆ ಎಂದರು. ಸಾರ್ವಜನಿಕರು ಮಾದಕ ದ್ರವ್ಯ ಪತ್ತೆ ಜಾಲದ ಬಗ್ಗೆ ಮಾಹಿತಿ ನೀಡಲು ಇಚ್ಚಿಸಿದಲ್ಲಿ 222807 ಅಥವಾ 9480802305 ಅಥವಾ 100ಕ್ಕೆ ಕರೆ ಮಾಡಿ ಎಂದು ಸಾರ್ವಜನಿಕರಲ್ಲಿ ಕೋರಿದರು. ಮಾಹಿತಿದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂಬುದನ್ನು  ಅವರು ಸ್ಪಷ್ಟಪಡಿಸಿದರು.
ನಗರದ ಖಾಸಗಿ ಕಾಲೇಜುಗಳ ಪಾಲ್ಗೊಳ್ಳುವಿಕೆ ಖಾತರಿ ಪಡಿಸಲು  ವಿಶ್ವವಿದ್ಯಾನಿಲಯದ ರೆಜಿಸ್ಟ್ರಾರ್ ಅವರ ನೆರವು ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.