Wednesday, February 6, 2013

ಸರ್ಕಾರಿ ಆಸ್ಪತ್ರೆಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ

ಮಂಗಳೂರು, ಫೆಬ್ರವರಿ.06:-ಇಂದಿನ ದಿನಗಳಲ್ಲಿ ಮಾನವ ಹಾಗೂ ಪಶುಗಳಿಗೆ ರೋಗಗಳು ಕೇವಲ ಪರಿಸರ ವೈಪ್ಯರೀತಿಯಿಂದ ಬರುತ್ತಿಲ್ಲ.ಬದಲಾಗಿ ಮಾನವನ ಅಸಡ್ಡೆ,ನಿರ್ಲಕ್ಷ್ಯಗಳಿಂದಾಗಿ ಬಹುತೇಕ ರೋಗಗಳು ಸಾಂಕ್ರಾಮಿಕವಾಗಿ ಹರಡುತ್ತಿವೆ.ಇಂತಹ ನಿರ್ಲಕ್ಷತೆಗೆ ಮುಖ್ಯ ಉದಾಹರಣೆ ಎಂದರೆ ವೈದ್ಯಕೀಯ ತ್ಯಾಜ್ಯ.
       ಇಂದು ಗಲ್ಲಿಗಲ್ಲಿಯಲ್ಲಿ ಕ್ಲಿನಿಕ್ ಗಳು,ನರ್ಸಿಂಗ್ ಹೋಂಗಳು, ಪಂಚತಾರಾ ಬಹುಚಿಕಿತ್ಸಾ ಸೌಲಭ್ಯಗಳುಳ್ಳ ಬೃಹತ್ ಆಸ್ಪತ್ರೆಗಳು,ಸರ್ಕಾರಿ  ಆಸ್ಪತ್ರೆಗಳು ಎಡತಾಕಿದೆಡೆಯಲ್ಲಿ ನಮಗೆ ಕಾಣ ಸಿಗುತ್ತವೆ. ಆದರೆ ಇಲ್ಲಿ ಉತ್ಪತ್ತಿಯಾಗುವ  ದ್ರವ ಮತ್ತು ಒಣ ತ್ಯಾಜ್ಯಗಳ ಸಮರ್ಪಕ ನಿರ್ವಹಣೆಯಿಲ್ಲದೆ ಇಂದು ಅನೇಕ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ.  ದ್ರವತ್ಯಾಜ್ಯ ಮಾನವನ ಕೊಳೆತ ಅಂಗಾಂಗಗಳು,ಮಲಿನ ರಕ್ತ,ಕೀವು ಇತ್ಯಾದಿಯಾದರೆ,ಒಣತ್ಯಾಜ್ಯದಲ್ಲಿ ಬಳಸಿ ಬಿಸಾಡಿದ ಇಂಜೆಕ್ಷನ್ ಸೂಜಿಗಳು,ಬ್ಯಾಂಡೇಜ್ ಗಳು ,ರೋಗಿ ಮಲಮೂತ್ರ ,ರಕ್ತ ಸಿಕ್ತ ಬಟ್ಟೆಗಳು ಇತ್ಯಾದಿಯಾಗಿವೆ. ಇವುಗಳನ್ನು ಸಮರ್ಪಕವಾಗಿ ವಿಲೇ ಮಾಡಲು ಆಸ್ಪತ್ರೆ,ಕ್ಲಿನಿಕ್ ನರ್ಸಿಂಗ್ ಹೋಂಗಳಲ್ಲಿ ಸೂಕ್ತವಾದ ತ್ಯಾಜ್ಯ ವಿಲೇವಾರಿ  ಘಟಕಗಳಿಲ್ಲ. ಇವುಗಳನ್ನು ರಸ್ತೆ ಬದಿಯ ನಗರ/ಪುರಸಭೆಗಳ ಕಸದ ತೊಟ್ಟಿಗಳಲ್ಲೆ ಅಥವಾ ರಸ್ತೆ ಬದಿ ಅನಧಿಕೃತ ಕಸದ ರಾಶಿಗೋ ಎಸೆಯುತ್ತಾ ಇದನ್ನು ನಾಯಿಗಳು,ಕಾಗೆ,ಹಂದಿ ಇನ್ನಿತರೆ ಪ್ರಾಣಿಗಳು ತಿನ್ನುವ ಆಸೆಗೆ ರಸ್ತೆಯಲ್ಲೆಲ್ಲ ಎಳೆದಾಡುತ್ತವೆ. ಇದರಿಂದ ಸೋಂಕುಳ್ಳ ವಸ್ತುಗಳು,ದ್ರವತ್ಯಾಜ್ಯ ಆರೋಗ್ಯವಂತ ಮನುಷ್ಯನ ಸಂಪರ್ಕಕ್ಕೆ ಬಂದು ಅವನಿಗೂ ಸೋಂಕು ಉಂಟಾಗುತ್ತಿದೆ.ಇದೊಂದು ಸಾಮಾಜಿಕ ಸಮಸ್ಯೆಯಾಗಿದೆ.

ಆದ್ದರಿಂದ ಇದನ್ನು ನಿವಾರಿಸುವ ಸಲುವಾಗಿ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ,ಅನುದಾನಿತ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 2 ಜಿಲ್ಲಾ ಆಸ್ಪತ್ರೆಗಳು,4 ತಾಲೂಕು ಮಟ್ಟದ ಆಸ್ಪತ್ರೆಗಳು,63 ಪ್ರಾಥಮಿಕ ಆರೋಗ್ಯ ಕೇಂದ್ರಗಳು 7 ಸಮುದಾಯ ಆರೋಗ್ಯ ಕೇಂದ್ರಗಳಿದ್ದು ಇಲ್ಲಿ ಉತ್ಪತ್ತಿಯಾಗುವ ದ್ರವ ಮತ್ತು ಒಣ ವೈದ್ಯಕೀಯ ತ್ಯಾಜ್ಯವನ್ನು ವಿಲೇ ಮಾಡಲು ಮೂಲ್ಕಿಯ ರಾಮ್ ಕೀ ಸಂಸ್ಥೆಗೆ ವಹಿಸಲಾಗಿದೆ. ಈ ಸಂಸ್ಥೆಯವರು ಪ್ರತೀದಿನ ಈ ಎಲ್ಲಾ ಆಸ್ಪತ್ರೆಗಳಿಗೆ ತೆರಳಿ ಇಲ್ಲೆ ಸಂಗ್ರಹವಾಗುವ ದ್ರವ /ಒಣ ವ್ಯದ್ಯಕೀಯ ತ್ಯಾಜ್ಯವನ್ನು ಬೇರ್ಪಡಿಸಿ ತೆಗೆದುಕೊಂಡು ಹೋಗಿ ತಮ್ಮ ಸಂಸ್ಥೆಯಲ್ಲಿ ಸಂಸ್ಕರಿಸುತ್ತಾರೆ. ದ್ರವರೂಪಿ ತ್ಯಾಜ್ಯ ಅದರಲ್ಲಿ ಸೋಂಕುಳ್ಳ ತ್ಯಾಜ್ಯವನ್ನು ಆಳವಾದ ಗುಂಡಿಗಳನ್ನು ತೆಗೆದು ಅದರಲ್ಲಿ ಹೂಳುತ್ತಾರೆ. ಜಿಲ್ಲೆಯಲ್ಲಿರುವ ಆರೋಗ್ಯ ಸಂಸ್ಥೆಗಳಿಂದ ಪ್ರತೀ ನಿತ್ಯ 2600 ಕೆಜಿ ಹಾಗೂ ಅಧಿಕ ಬಯೋ ಮೆಡಿಕಲ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ 1900 ಕೆಜಿಗಳಷ್ಟು ಖಾಸಗಿ  ವೈದ್ಯಕೀಯ ಸಂಸ್ಥೆಗಳಿಂದಲೂ ಹಾಗೂ 700 ಕೆಜಿಯಷ್ಟು ಸರ್ಕಾರಿ ಆರೋಗ್ಯ ಸಂಸ್ಥೆಗಳಿಂದ ಉತ್ಪಾದನೆ ಆಗುತ್ತಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಶ್ರೀರಂಗಪ್ಪ ತಿಳಿಸಿರುತ್ತಾರೆ. ರಾಜ್ಯದಲ್ಲಿ ದಕ್ಷಿಣಕನ್ನಡ ಜಿಲ್ಲೆ ಬಯೋ ಮೆಡಿಕಲ್ ವೇಸ್ಟ್ ವಿಲೇವಾರಿಯಲ್ಲಿ ಮಾದರಿಯಾಗಿದೆ ಎಂದು ಅವರು ತಿಳಿಸಿರುತ್ತಾರೆ.