Tuesday, February 5, 2013

ಜಿಲ್ಲೆಯಲ್ಲಿರುವ ಆಶ್ರಮಗಳ ಸಮಗ್ರ ಮಾಹಿತಿ ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ಫೆಬ್ರವರಿ.05: ನಗರದ ನಂತೂರಿನ ಆಶ್ರಯ ರಿಹ್ಯಾಬಿಲಿಟೇಷನ್ ಕೇಂದ್ರದ ಘಟನೆಯ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಇಂದು ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆ ಕರೆದು  ಜಿಲ್ಲೆಯಲ್ಲಿರುವ ಈ ಮಾದರಿಯ ಆಶ್ರಮ ಅಥವಾ ಆಶ್ರಯ ತಾಣಗಳ ಸಮಗ್ರ ಮಾಹಿತಿ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನೋಂದಣಿಯಾಗದ ಈ ರೀತಿಯ  ಅನಧಿಕೃತ ಸಂಸ್ಥೆಗಳ ಬಗ್ಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಕ್ಷಣವೇ ಈ ಸಂಬಂಧ ಒಂದು ಸಮಿತಿಯನ್ನು ರಚಿಸಿ ಇಂತಹ ಸಂಸ್ಥೆಗಳನ್ನು ಖುದ್ದಾಗಿ ವೀಕ್ಷಿಸಿ ವರದಿ ನೀಡುವಂತೆಯೂ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ರೋಗಿಗಳನ್ನು ನೋಂದಾಯಿಸಿಕೊಳ್ಳಲು ಅಗತ್ಯವಾಗಿರುವ ಸೌಕರ್ಯ ಹಾಗೂ ಕಾನೂನು ಕುರಿತು ಮಾನಸಿಕ ತಜ್ಞರಾದ ಡಾ. ಆಶೋಕ್ ಪೈ ಮತ್ತು ಡಾ. ರವೀಶ್ ತುಂಗಾ ಅವರ ಜೊತೆ ಚರ್ಚಿಸಲೂ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹೇಳಿದರು.
ಇಂತಹ ಅನಧಿಕೃತ ಸಂಸ್ಥೆಗಳ ಬಗ್ಗೆ ಮಾಹಿತಿ ದೊರೆತರೆ ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದೂ ಜಿಲ್ಲಾಧಿಕಾರಿಗಳು ಸಾರ್ವಜನಿಕರನ್ನು ಕೋರಿದ್ದಾರೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿದರ್ೇಶಕರಾದ ಶ್ರೀಮತಿ ಶಕುಂತಲಾ, ಜಿಲ್ಲಾ ಸರ್ಜನ್ ಡಾ. ಸರೋಜ, ವಿಕಲಚೇತನ ಅಧಿಕಾರಿ ಪುಟ್ಟಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ ಆರ್ ಶ್ರೀರಂಗಪ್ಪ ಉಪಸ್ಥಿತರಿದ್ದರು.
    ಇದೇ ಸಂದರ್ಭದಲ್ಲಿ ಮಾದಕ ದ್ರವ್ಯ ಜಾಲ ತಡೆಗೆ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಪಿಯುಸಿ ಕಾಲೇಜುಗಳ ಪ್ರಾಂಶುಪಾಲರು ಮತ್ತು ಅಧಿಕಾರಿಗಳ ಸಭೆಯನ್ನು ಕರೆದು, ಜಾಗೃತಿ ಹಾಗೂ ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಜಿಲ್ಲಾಧಿಕಾರಿಗಳು ಹೇಳಿದರು.