Friday, February 8, 2013

97,175 ಬಿಪಿಎಲ್ ಕುಟುಂಬಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಗುರಿ- ಎನ್ .ಪ್ರಕಾಶ್


ಮಂಗಳೂರು, ಫೆಬ್ರವರಿ.08:-ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಫಲಾನುಭವಿ ಕಾರ್ಮಿಕ ಕುಟುಂಬದ ಸದಸ್ಯರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಉತ್ಕೃಷ್ಟ ಯೋಜನೆಯಾಗಿದ್ದು,ಈ ಯೋಜನೆಯನ್ವಯ ದಕ್ಷಿಣಕನ್ನಡ ಜಿಲ್ಲೆಯಲ್ಲಿ 2012-13ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್  ರಾಜ್ ನೀಡಿರುವ 2002ರ ಪಟ್ಟಿಯಲ್ಲಿನ 97,175 ಬಡತನ ರೇಖೆಗಿಂತ ಕೆಳಗಿರುವ  ಕುಟುಂಬಗಳಿಗೆ ಸ್ಮಾರ್ಟ್ ಕಾರ್ಡನ್ನು,ಇನ್ನು 15 ದಿನಗಳೊಳಗೆ ವಿತರಿಸುವ ಕಾರ್ಯ ಆರಂಭವಾಗಲಿದೆಯೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ  ಎನ್.ಪ್ರಕಾಶ್ ತಿಳಿಸಿದ್ದಾರೆ.           
ಅವರು ನಿನ್ನೆ ಗುರುವಾರ ಸಂಜೆ ತಮ್ಮ ಕಚೇರಿಯಲ್ಲಿ ಈ ಬಗ್ಗೆ ನಡೆದ ಕಾರ್ಯಾನುಷ್ಠಾನ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 74,952 ಗ್ರಾಮೀಣ ಪ್ರದೇಶದ ಬಿಪಿಎಲ್ ಕುಟುಂಬಗಳು,6,552 ನಗರ ಪ್ರದೇಶದ ಬಿಪಿಎಲ್ ಕುಟುಂಬಗಳು ಹಾಗೂ 15,615 ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆ ಜಾಬ್ ಕಾರ್ಡ್  ಹೊಂದಿದವರು ಜೊತೆಗೆ ಬೀಡಿ ಕಾರ್ಮಿಕರು ರೈಲ್ವೇ ಪೋರ್ಟರ್ ಗಗಳನ್ನು ಸಹ ಈ ಬಾರಿ ನೊಂದಾಯಿಸಿಕೊಂಡು ಸ್ಮಾರ್ಟ್ ಕಾರ್ಡು ವಿತರಿ ಸಲಾಗುವು ದೆಂದರು.ಬಿಪಿಎಲ್ ಕುಟುಂಬಗಳ ನೋಂದಣಿ ಯನ್ನು ಆಶಾ ಕಾರ್ಯ ಕರ್ತೆಯರು ಅಂಗನ ವಾಡಿ ಕಾರ್ಯ ಕರ್ತೆಯರು ಗ್ರಾಮ ಲೆಕ್ಕಾಧಿಕಾರಿಗಳು ನಡೆಸಲಿದ್ದಾರೆ.ಈ ಯೋಜನೆಯಲ್ಲಿ ಸ್ಮಾರ್ಟ್ ಕಾರ್ಡ್ ಪಡೆದ ಕುಟುಂಬದ ಸದಸ್ಯರಿಗೆ ವಾರ್ಷಿಕ ರೂ.30,000/- ವರೆಗೂ ನೊಂದಾಯಿತ ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸೌಲಭ್ಯವಿದೆ.ಫಲಾನುಭವಿ ಕುಟುಂಬದ ಮುಖ್ಯಸ್ಥ ಹೆಂಡತಿ/ಗಂಡ ,ಮಕ್ಕಳು ಹಾಗೂ ಅವಲಂಭಿತರೂ ಸೇರಿದಂತೆ ಒಟ್ಟು 05 ಮಂದಿಗೆ ಈ ಸೌಲಭ್ಯ ದೊರಕಲಿದೆ.  

ಸಭೆಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಡಿ.ಜೆ ನಾಗೇಶ್, ಕಾರ್ಮಿಕಾಧಿಕಾರಿಗಳಾದ ಮಹೇಶ್, ಆನಂದ ಮೂರ್ತಿ,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವರಾಮೇಗೌಡ, ಅಪರ ಜಿಲ್ಲಾಧಿಕಾರಿ ದಯಾನಂದ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಶ್ರೀರಂಗಪ್ಪ ಮುಂತಾದವರು ಭಾಗವಹಿಸಿದ್ದರು.