Wednesday, June 9, 2010

ಕಾನೂನು ಉಲ್ಲಂಘಕರಿಗೆ ಬೆಂಬಲ ಬೇಡ;ಸಚಿವ ಸುರೇಶ್ ಕುಮಾರ್

ಮಂಗಳೂರು,ಜೂ.9:ಮಂಗಳೂರು ಮಹಾನಗರಪಾಲಿಕೆ ಇತರರಿಗೆ ಮಾದರಿಯಾಗಬೇಕಿದ್ದು, ನಿಯಮಗಳನ್ನು ಪಾಲಿಸಿ ನಗರ ಬೆಳೆಯಬೇಕು. ಕಾನೂನು ಉಲ್ಲಂಘಿಸುವವರಿಗೆ ಬೆಂಬಲ ನೀಡದೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ನಗರಾಭಿವೃದ್ಧಿ,ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಸ್.ಸುರೇಶ್ ಕುಮಾರ್ ಹೇಳಿದರು.

ಅವರಿಂದು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಮಹಾ ನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತ ನಾಡುತ್ತಿದ್ದರು. ನಗರಪಾಲಿಕೆ ತನ್ನ ವ್ಯಾಪ್ತಿಯಲ್ಲಿರುವ ಅಧಿಕಾರವನ್ನು ಬಳಸಿಕೊಂಡು ಟ್ರೇಡ್ ಲೈಸನ್ಸ್ ನೀಡಿಕೆ ಬಗ್ಗೆ ಎಚ್ಚರಿಕೆ ವಹಿಸಿದರೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು. ವಾಣಿಜ್ಯ ಕಟ್ಟಡಗಳು ಸೇರಿದಂತೆ ಬೃಹತ್ತ್ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ನಿಗದಿತ ಪ್ರದೇಶದಲ್ಲಿ ಕಟ್ಟಡದ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಫಲಕಗಳನ್ನು ಹಾಕಲು ಸಲಹೆ ಮಾಡಿದ ಸಚಿವರು, ಪಾರ್ಕಿಂಗ್ ಸ್ಥಳ ದುರುಪ ಯೋಗದ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಪಾರ್ಕಿಂಗ್ ಪಾಲಿಸಿ ಕುರಿತು ಬೈ ಲಾ ಮಾಡುವ ಬಗ್ಗೆ ಹೇಳಿದ ಅವರು ನಗರದಲ್ಲಿ ರಸ್ತೆಯನ್ನು ಪಾರ್ಕಿಂಗ್ ಪ್ಲೇಸ್ ಆಗಿ ಪರಿವರ್ತಿ ಸುತ್ತಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 112 (ಸಿ) ಕಾನೂನು ಪಾಲಿಕೆಯ ಕರ್ತವ್ಯ ನಿರ್ವಹಣೆಗೆ ಪೂರಕವಾಗಿದ್ದು, ಅದರ ದುರು ಪಯೋಗವಾಗ ಬಾರದೆಂದು ಸ್ಪಷ್ಟ ಪಡಿಸಿದ ಸಚಿವರು, ನಗರ ಪಾಲಿಕೆ ಉತ್ತಮ ಕೆಲಸಗಳಿಂದ ಪ್ರಚಾರ ಪಡೆಯಬೇಕೇ ವಿನ: ಇಂಜಿನಿಯರ್ ಗಳ ಹೊಡೆದಾಟದ ಮೂಲಕ ಅಲ್ಲ ಎಂಬ ಎಚ್ಚರಿಕೆಯನ್ನು ರವಾನಿಸಿದರಲ್ಲದೆ, ವಿಚಾರಣಾ ವರದಿಯನ್ನು 15 ದಿವಸಗಳೊಳಗೆ ನೀಡಬೇಕೆಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಪಾಲಿಕೆಯು ಕೈಗೊಳ್ಳುತ್ತಿರು ಜನಸ್ನೇಹಿ ಯೋಜನೆಗಳ ಬಗ್ಗೆ ಜನರ ಫೀಡ್ ಬ್ಯಾಕ್ ಪಡೆಯಬೇಕೆಂದು ಸಲಹೆ ಮಾಡಿದ ಸಚಿವರು, ಪಾಲಿಕೆಯ ಉತ್ತಮ ಕೆಲಸಗಳಿಗೆ ಅಭಿನಂದನೆ ಸಲ್ಲಿಸಲು ಮರೆಯಲಿಲ್ಲ. ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಸಮವಸ್ತ್ರ, ಪೌರ ಕಾರ್ಮಿಕರಿಗೆ ಗ್ರೂಪ್ ಇನ್ಷೂರೆನ್ಸ್ ಮಾಡಿಸಲು, ಎಲ್ಲ ಉದ್ದಿಮೆದಾರರ ಸಮೀಕ್ಷೆ ನಡೆಸಿ, ತೆರಿಗೆ ಸಂಗ್ರಹಿ ಸಬೇಕೆಂದು ತಾಕೀತು ಮಾಡಿದರು. ನೀರಿನ ತೆರಿಗೆ ಪಾವತಿ ಬಗ್ಗೆ ವನ್ ಟೈಮ್ ಸೆಟಲ್ ಮೆಂಟ್ ಮಾಡ ಬೇಕೆಂದ ಅವರು,ನಗರದಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದರು. ಪಾಲಿಕೆಯ ಸದಸ್ಯರಿಗೆ ಗೌರವಧನ ಹೆಚ್ಚಳದ ಮತ್ತು ಪಾಲಿಕೆಗೆ ಅವಶ್ಯವಿರುವ ಸಿಬಂದಿಗಳ ಕೊರತೆಯನ್ನು ನೀಗಿಸುವ ಭರವಸೆಯನ್ನು ಸಭೆಯಲ್ಲಿ ಸಚಿವರು ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಯೋಗೀಶ್ ಭಟ್ ಅವರು ಸಲಹೆ ನೀಡಿ, ನಗರ ಯೋಜನೆ, ರಿಂಗ್ ರೋಡ್ ಹಾಗೂ ಎನ್ ಎಂ ಪಿ ಟಿ ಯಂತಹ ಬೃಹತ್ತ ಉದ್ದಿಮೆಗಳಿಂದ ನಗರದ ಅಭಿವೃದ್ಧಿಗೆ ಕೊಡುಗೆಯನ್ನು ಪಡೆಯಬೇಕೆಂದು ಸಲಹೆ ಮಾಡಿದರು.
ಸಭೆಯಲ್ಲಿ ಪಾಲನಾ ವರದಿ ಮಂಡಿಸಿದ ಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್ ಅವರು, ಮಂಗಳೂರಿನಲ್ಲಿ ವಾಹನ ನಿಲುಗಡೆ ದೊಡ್ಡ ಸಮಸ್ಯೆಯಾಗಿದ್ದು, ಅನಧಿಕೃತ ನಿರ್ಮಾಣ ತಡೆಗೆ ಕ್ರಮ. ನಿಲುಗಡೆಗೆ ಕಾದಿರಿಸಿದ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿರುವುದಕ್ಕೆ ಕೆ.ಎಂ.ಸಿ ಕಾಯಿದೆಯನ್ವಯ ಸೂಕ್ತ ಕ್ರಮ; ಮೂಡಾದ ಸಹಯೋಗದೊಂದಿಗೆ ಹಂಪನಕಟ್ಟೆಯಲ್ಲಿ ಮನಾಪಕ್ಕೆ ಸೇರಿದ ಸುಮಾರು 1.55 ಎಕರೆ ಜಾಗದಲ್ಲಿ 500 ಕಾರು ತಂಗುದಾಣಕ್ಕೆ ಅವಕಾಶವಿರುವ ಬಹು ಅಂತಸ್ತು ಕಾರು ತಂಗುದಾಣ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುವುದಾಗಿ ಮಾಹಿತಿ ನೀಡಿದರು.ನಗರದ ಬಹುಮುಖ್ಯ ಸಮಸ್ಯೆಯಾದ ಘನ ತಾಜ್ಯ ವಿಲೆವರಿಗಾಗಿ ಪಚ್ಚನಾಡಿಯಲ್ಲಿ 77.93 ಎಕ್ರೆ ಜಮೀನನ್ನು ಖರೀದಿಸಲಾಗಿದೆ.ಕುಡ್ಸೆಂಪ್ ಯೋಜನೆಯಡಿ 9.39 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಯಾನಿಟರಿ ಲ್ಯಾಂಡ್ ಫಿಲ್ ಮಾಡಲಾಗಿದೆ. ತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ತಡೆಗಟ್ಟಲು ತುರ್ತಾಗಿ ಮಣ್ಣಿನ ಹೊದಿಕೆ ಹೊದಿಸಿ ನೀರು ಸಿಂಪಡನೆಗೆ ವ್ಯವಸ್ಥೆ ಮಾಡಲಾಗಿದೆ. ವೈಜ್ಞಾನಿಕ ಮಣ್ಣಿನ ಹೊದಿಕೆಗೆ 2.50 ಕೋಟಿ ರೂ. ಅಂದಾಜು ಪಟ್ಟಿ ಸಿದ್ಧಪಡಿಸಿದೆ. 12ನೇ ಹಣಕಾಸು ಯೋಜನೆಯಡಿ ಈಗಾಗಲೇ ಟೆಂಡರ್ ಕರೆದು ರೂ. ಒಂದು ಕೋಟಿ ಅಂದಾಜು ವೆಚ್ಚದಲ್ಲಿ ಹೆಚ್ಚುವರಿ ಕಾಂಪೋಸ್ಟ್ ಕಾಂಕ್ರೀಟ್ ಅಂಗಳ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಶಾಲಾ-ಕಾಲೇಜುಗಳಲ್ಲಿ ಘನ ತಾಜ್ಯ ವಿಲೇವರಿ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಲಾಗಿದೆ. 31.3.10 ರವರೆಗೆ ಜಾಹೀರಾತು ಶುಲ್ಕವಾಗಿ 75.76 ಲಕ್ಷ ಶುಲ್ಕ ವಸೂಲು ಮಾಡಲಾಗಿದೆ. ಉದ್ದಿಮೆ ಪರವಾನಿಗೆಯಡಿ ರೂ. 77 ಲಕ್ಷ ವಸೂಲು ಮಾಡಲಾಗಿದೆ. ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸರ್ವೇ ನಡೆಸಿ ಉದ್ದಿಮೆ ಪರವಾನಿಗೆಗಳನ್ನು ನವೀಕರಿಸುವ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಸಚಿವರಿಗೆ ತಿಳಿಸಿದರು.ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ಲ್ಯಾಬ್ ಸ್ಥಾಪಿಸುವ ಬಗ್ಗೆ ಈಗಾಗಲೇ ಟೆಂಡರ್ ಕರೆದಿದ್ದು ಯಾರೂ ಭಾಗವಹಿಸದ ಕಾರಣ ಮರು ಟೆಂಡರ್ ಕರೆಯಲು ಕ್ರಮವಹಿಸಲಾಗಿದೆ ಎಂದರು. ನಗರಪಾಲಿಕೆ ಒಟ್ಟು 126 ಎಂ ಎಲ್ ಡಿ ನೀರು ಸರಬರಾಜು ಮಾಡುತ್ತಿದ್ದು,12 ಎಂ ಎಲ್ ಡಿ ನೀರನ್ನು ಉಳ್ಳಾಲ ಮತ್ತು ಮುಲ್ಕಿಗೆ ನೀಡಲಾಗುತ್ತಿದೆ. ಒಳಚರಂಡಿ ವ್ಯವಸ್ಥೆಯನ್ನು ಶೇಕಡ 75 ರಷ್ಟು ಕುಡ್ಸೆಂಪ್ ಯೋಜನೆಯಡಿ ಅಳವಡಿಸಲಾಗುತ್ತಿದ್ದು, 369 ಕಿ.ಮೀ ಒಳಚರಂಡಿ ವ್ಯವಸ್ಥೆಯಲ್ಲಿ 267.3 ಕಿ.ಮೀ. ಮುಕ್ತಾಯಗೊಂಡಿದೆ. ಒಳಚರಂಡಿ ವ್ಯವಸ್ಥೆಗೆ 214.47 ಕೋಟಿ ಗುತ್ತಿಗೆ ಮೊತ್ತ ನೀಡಿದ್ದು, 142.2 ಕೋಟಿ ಖರ್ಚಾಗಿರುತ್ತದೆ. 2010ರೊಳಗೆ ಕಾಮಗಾರಿ ಮುಗಿಯಲಿದೆ ಎಂಬ ಮಾಹಿತಿ ನೀಡಿದರು. ವಿದ್ಯುತ್ ಉಳಿಸಲು ಹಾಗೂ ಬೀದಿ ದೀಪಗಳ ನಿರ್ವಹಣೆಗೆ ಕಂಪ್ಯೂಟರೈಸ್ಡ್ ರಿಮೋಟ್ ಕಂಟ್ರೋಲ್ ಸ್ಟ್ರೀಟ್ ಲೈಟ್ ಮಾನಿಟರಿಂಗ್ ಸಿಸ್ಟಮ್ ಅನ್ನು ಪಿ ವಿ ಎಸ್ ನಿಂದ ಲೇಡಿಹಿಲ್ ವೃತ್ತದವರೆಗೆ ಪ್ರಾಯೋಗಿಕವಾಗಿ ಅಳವಡಿಸಲು ಕ್ರಮ ಜರುಗಿಸಲಾಗಿದೆ. ತುಂಬೆ ಕಿಂಡಿ ಅಣೆಕಟ್ಟಿಗೆ 7 ಕೋಟಿ ರೂ.ಗಳನ್ನು ಮನಾಪದಿಂದ ಪಾವತಿಸಲಾಗಿದೆ.ನಗರ ಪಾಲಿಕೆ ವ್ಯಾಪ್ತಿಯ ಕೊಳಚೆ ಪ್ರದೇಶಗಳ ಅಭಿವೃದ್ದಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮನಾಪದ ವಿನೂತನ ಯೋಜನೆಯಡಿ ದೈಹಿಕ ಅಶಕ್ತರು ಹಾಗೂ ಹಿರಿಯ ನಾಗರೀಕರಿಗೆ ಅರ್ಜಿ ಸಲ್ಲಿಸಲು ಆಶಾ ಚಾವಡಿ, ದೈಹಿಕ ಅಶಕ್ತರು ಹಾಗೂ ಹಿರಿಯ ನಾಗರೀಕರಿಗೆ ವಿಶೇಷವಾದ ಅರ್ಜಿ ಸ್ವೀಕಾರ ಕೇಂದ್ರವನ್ನು ತೆರೆಯಲಾಗುವುದು. ಜನರ ದೂರು ದುಮ್ಮಾನ ಪರಿಹರಿಸಲು 24 ಗಂಟೆ ಸಹಾಯ ವಾಣಿಯಲ್ಲದೆ ಎನ್ ಎಸ್ ಎಸ್, ರೋಟರಿ ಕ್ಲಬ್ ಮತ್ತು ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಲೇರಿಯಾ ನಿರ್ಮೂಲನೆ, ಸ್ವಚ್ಛತಾ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮೊದಲ ಹಂತದ ಕಾಮಗಾರಿಗಳ ಪೂರ್ಣಗೊ ಳಿಸುವಿಕೆಗೆ ಹಾಗೂ ಪಾದಚಾರಿ ಸ್ನೇಹಿ ಮೂಲಭೂತ ಸೌಕರ್ಯ ಗಳಾದ ಚರಂಡಿ, ಫುಟ್ ಪಾತ್ ನಿರ್ಮಾಣಕ್ಕೆ ಎರಡನೇ ಹಂತದಡಿ ಇನ್ನು 100 ಕೋಟಿ ರೂ. ಅನುದಾನದ ಅಗತ್ಯವನ್ನು ಶಾಸಕರು ಸಭೆ ಯಲ್ಲಿಟ್ಟರು.ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಅವರು ಸಭೆಯಲ್ಲಿ ನಗರಾಭಿವೃದ್ಧಿಗೆ ಪೂರಕ ಮಾಹಿತಿ ನೀಡಿದರಲ್ಲದೆ, ಯೋಜನೆಗಳನ್ನು ರೂಪಿಸುವಾಗ ಭವಿಷ್ಯವನ್ನು ಗಮನದಲ್ಲಿರಿಸಿ ಹಾಗೂ ಕಾನೂನು ಪಾಲಿಸಿ ಎಂದು ಮಾರ್ಗದರ್ಶನ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಕಾನೂನು ಪಾಲನೆ ಸಂದರ್ಭದಲ್ಲಿ ನಾಗರೀಕರಿಗೆ ಸಮಯವಕಾಶ ಹಾಗೂ ಮಾಹಿತಿ ನೀಡಿ ಎಂದರು. ಜಿಲ್ಲಾಧಿಕಾರಿ ಪೊನ್ನುರಾಜ್ ಅವರು ನಗರಾಭಿವೃದ್ಧಿ ಸಚಿವರಿಗೆ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಪೂರಕ ಮಾಹಿತಿಗಳನ್ನು ನೀಡಿದರು. ಮೇಯರ್ ರಜನಿ ದುಗ್ಗಣ್ಣ, ಉಪಮೇಯರ್ ರಾಜೇಂದ್ರ ಕುಮಾರ್ ಪಾಲಿಕೆ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಬಳಿಕ ಸಚಿವರು ಜ್ಯೋತಿಯಲ್ಲಿ ನಿರ್ಮಿಸಲಾದ ಸುಸ್ಜಜ್ಜಿತ ಬಸ್ ನಿಲ್ದಾಣ ವೀಕ್ಷಿಸಿದರು.