Monday, June 7, 2010

ಜೂ.10 ,11 ರಂದು ಲೋಕೋಪಯೋಗಿ ಇಲಾಖೆಯಿಂದ ವಿಚಾರ ಸಂಕಿರಣ

ಮಂಗಳೂರು,ಜೂ.7:ಸರ್ಕಾರದ ಕಾಮಗಾರಿಗಳಲ್ಲಿ ಗುಣಮಟ್ಟ ಖಾತರೀಕರಣ ಹಾಗೂ ಉನ್ನತೀಕರಣದ ಸಾಮಗ್ರಿಗಳ ಬಗ್ಗೆ ವಸ್ತುಪ್ರದರ್ಶನ ಮತ್ತು ವಿಚಾರ ಸಂಕಿರಣವನ್ನು ಜೂ.10 ಮತ್ತು 11 ರಂದು ನಗರಗದ ಟಿವಿ ರಮಣ ಪೈ ಕನ್ವೆಂಶನ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ.
ಈ ಸಂಬಂಧ ಲೋಕೋ ಪಯೋಗಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಮಗಾರಿ ಗುಣ ಭರವಸೆ ಕಾರ್ಯಪಡೆಯ ಅಧ್ಯಕ್ಷರಾದ ಡಾ.ಪಿ. ಮಹದೇವಪ್ಪ ಅವರು ಸರ್ಕಾರ ಕಾಮಗಾರಿ ಗುಣ ಭರವಸೆ ಕಾರ್ಯಪಡೆಯ ಉದ್ದೇಶವನ್ನು ವಿವರಿಸಿದರು. ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ವಿವಿಧ ಪ್ರಕಾರಗಳನ್ನು ಪರಿಶೀಲಿಸಿ ಕಾಮಗಾರಿ ನಿರ್ವಹಿಸುವಾಗ ಕಾಮಗಾರಿ ಗುಣಮಟ್ಟ ಕಾಪಾಡಲು ಮತ್ತು ಹೆಚ್ಚಿಸಲು ಕಾರ್ಯಪಡೆ ರಚಿಸಿದ್ದು, ಈ ಮೂಲಕ ಇಲಾಖೆಗಳು ನಿರ್ವಹಿಸಿದ ಕಾಮಗಾರಿಗಳು ದೀರ್ಘ ಬಾಳಿಕೆ ಬರುವಂತೆ ಮಾಡಲಾಗುವುದು. ಈ ಸಂಬಂಧ ಇಲಾಖೆಯ ಇಂಜಿನಿಯರ್ ಗಳ ತಾಂತ್ರಿಕ ಪರಿಣತಿ ಹೆಚ್ಚಿಸಲು ವಿಭಾಗ ಮಟ್ಟದಲ್ಲಿ ಪ್ರಥಮವಾಗಿ ಮಂಗಳೂರು ಸೇರಿದಂತೆ ತುಮಕೂರು, ಮೈಸೂರು, ಶಿವಮೊಗ್ಗ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗಗಳಲ್ಲಿ ನಡೆಸಲಾಗುವುದು. ಮಂಗಳೂರಿನಲ್ಲಿ ಉಡುಪಿ, ದಕ್ಷಿಣ ಕನ್ನಡ, ಕಾರವಾರ, ಮಡಿಕೇರಿ ವ್ಯಾಪ್ತಿಯ 300 ಜನ ಹಿರಿಯ ಮತ್ತು ಕಿರಿಯ ಇಂಜಿನಿಯರ್ ಗಳು ಪಾಲ್ಗೊಳ್ಳಲಿರುವರು. ಕಾರ್ಯಾಗಾರದಲ್ಲಿ 10 ತಾಂತ್ರಿಕ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.
ಕಾರ್ಯಾಗಾರವನ್ನು ಲೋಕೋಪಯೋಗಿ ಸಚಿವರಾದ ಸಿ.ಎಂ. ಉದಾಸಿ ಅವರು ಉದ್ಘಾಟಿಸುವರು.ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರು ಉಪಸ್ಥಿತರಿರುವರು. ಕಾರ್ಯಪಡೆಯ ಅಧ್ಯಕ್ಷ ಡಾ. ಸಿ.ಎಸ್. ವಿಶ್ವನಾಥ್ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮೇಯರ್ ರಜನಿ ದುಗ್ಗಣ್ಣ, ಶಾಸಕರಾದ ಎನ್. ಯೋಗೀಶ್ ಭಟ್, ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಪಾಲ್ಗೊಳ್ಳುವರು. 11ರಂದು ಸಂಜೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಗೃಹ ಸಚಿವ ವಿ.ಎಸ್. ಆಚಾರ್ಯ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ್ ಶೆಟ್ಟಿಯವರು ಭಾಗವಹಿಸುವರು. ಪತ್ರಿಕಾಗೋಷ್ಠಿಯಲ್ಲಿ ಸದಸ್ಯ ಕಾರ್ಯದರ್ಶಿ ಐ.ರವೀಂದ್ರ ನಾಥ್, ಎಸ್. ಇ. ಬಾಲಕೃಷ್ಣ ಅವರು ಉಪಸ್ಥಿತರಿದ್ದರು.