Tuesday, June 15, 2010

ದ.ಕ : 235 ಹೆಕ್ಟೇರ್ ವಿಸ್ತೀರ್ಣದಲ್ಲಿ ಭತ್ತ ನಾಟಿ

ಮಂಗಳೂರು,ಜೂ.15:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35,000 ಹೆಕ್ಟೇರ್ ಭತ್ತ ಕೃಷಿ ಪ್ರದೇಶ ವಿಸ್ತೀರ್ಣವಿದ್ದು, ಪ್ರಸಕ್ತ ಮುಂಗಾರು ಹಂಗಾಮಿನ ಆರಂಭದಲ್ಲಿ 235 ಹೆಕ್ಟೇರ್ ವ್ಯಾಪ್ತಿಯಲ್ಲಿ ಭತ್ತ ನಾಟಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಪದ್ಮಯ ನಾಯ್ಕ್ ತಿಳಿಸಿದ್ದಾರೆ.

ಕಳೆದ ಸಾಲಿನಲ್ಲಿ 32,583 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದು ಪ್ರಸಕ್ತ ಸಾಲಿನಲ್ಲೂ ಭತ್ತದ ಕೃಷಿ ಈ ವ್ಯಾಪ್ತಿಯಲ್ಲಿ ಬೆಳೆಯ ಬಹುದು ಎಂದು ಅಂದಾಜಿ ಸಲಾಗಿದೆ. ಮಂಗಳೂರಿನಲ್ಲಿ 12,500 ಗುರಿ ಇದ್ದು, ಇಂದಿನವರೆಗೆ 126 ಹೆ., ಬಂಟ್ವಾಳದಲ್ಲಿ 9,600 ಎಕರೆಯಲ್ಲಿ ಭತ್ತ ಕೃಷಿ ಬೆಳೆಯುವ ಗುರಿ ಇದ್ದು, 28ಹೆ. ಇಂದಿನವರೆಗೆ ಸಾಧನೆಯಾಗಿದೆ. ಬೆಳ್ತಂಗಡಿಯಲ್ಲಿ 8,510 ವ್ಯಾಪ್ತಿ ಪ್ರದೇಶವಿದ್ದು, 63 ಹೆಕ್ಟೇರ್ ನಲ್ಲಿ ಬೆಳೆಯಲಾಗಿದೆ. ಪುತ್ತೂರು ಗುರಿ 3,900 ರಲ್ಲಿ 12 ಹೆಕ್ಟೇರ್ ನಲ್ಲಿ ನಾಟಿಯಾಗಿದೆ. ಸುಳ್ಯದಲ್ಲಿ 490 ಹೆಕ್ಟೇರ್ ವಿಸ್ತೀರ್ಣವಿದ್ದು, 6 ಹೆಕ್ಟೇರ್ ನಲ್ಲಿ ಬೆಳೆಯ ಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ರೈತರು ಸಸಿಮಡಿ ತಯಾರಿ ನಡೆಸಿದ್ದು, ಕೆಲವು ಕಡೆ ನಾಟಿ ಪ್ರಗತಿಯಲ್ಲಿದೆ. ಜುಲೈ ಅಂತ್ಯದಿಂದ ಆಗಸ್ಟ್ ಪ್ರಥಮ ವಾರದವರೆಗೂ ನಾಟಿ ಕಾರ್ಯ ಪ್ರಗತಿ ಯಲ್ಲಿರುತ್ತದೆ. ಈಗಾಗಲೇ ಸಬ್ಸಿಡಿಯಡಿ 294.35 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತರಿಗೆ ಒದಗಿಸಿದ್ದು, ಬಿತ್ತನೆ ಬೀಜದ ಕೊರತೆಯಿಲ್ಲ ಎಂದಿರುವ ಅವರು, ಜಿಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ತಾಲೂಕು ಸಹಾಯಕ ನಿರ್ದೇಶಕರ ಕಚೇರಿಗಳನ್ನು ರೈತರು ಬಿತ್ತನೆ ಬೀಜಕ್ಕಾಗಿ ಸಂಪರ್ಕಿಸಬಹುದು ಎಂದಿದ್ದಾರೆ. ಮುಖ್ಯ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (ಅಕ್ಕಿ) ಸಹಾಯ ಧನದಡಿ ಬಿತ್ತನೆ ಬೀಜ ಲಭ್ಯವಿದೆ.
ರೈತರಿಗೆ ಸಲಹೆ: ರೈತರು ಮುಖ್ಯ ಗದ್ದೆ ತಯಾರಿಗೆ ಕಳೆ ಸಸ್ಯಗಳನ್ನು ಪೂರ್ತಿಯಾಗಿ ಮಣ್ಣಿಗೆ ಸೇರುವಂತೆ ನೋಡಿ ಕೊಳ್ಳುವುದರಿಂದ ಕಳೆಯ ಬಾಧೆಯನ್ನು ತಡೆಯಬಹುದು. ಕೊಟ್ಟಿಗೆ ಗೊಬ್ಬರ ಸೇರಿಸುವುದಾದಲ್ಲಿ ಕೊನೆಯ ಉಳುಮೆಗೆ ಮೊದಲು ಸೇರಿಸಬೇಕು. ಕಾಂಪೋಸ್ಟ್ ಬಳಕೆ ಉತ್ತಮ. ಬಿತ್ತನೆ ಬೀಜವನ್ನು ಸಸಿ ಮಾಡಿ ಮಾಡುವ ಮೊದಲು ಕಾರ್ಬನ್ ಡೈಝಿಮ್ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಳಸಿದ್ದಲ್ಲಿ ಶಿಲೀಂಧ್ರ ರೋಗಗಳಿಂದ ರಕ್ಷಣೆ ಪಡೆಯಬಹುದಾಗಿದೆ.
ಸಸಿಮಡಿಯಾದ 21 ದಿನಗಳಲ್ಲಿ ನಾಟಿಗೆ ಭತ್ತದ ಸಸಿಗಳನ್ನು ಕಿತ್ತು ನಾಟಿ ಮಾಡಬೇಕು; ಪ್ರತೀ ಗುಣಿಗೆ 2ರಿಂದ 3ಸಸಿಗಳನ್ನು ತೇಲಿಸಿ ನಾಟಿ ಮಾಡಬೇಕು;ಮುಖ್ಯ ಗದ್ದೆಗೆ ಅರಳಿದ ಚಿಪ್ಪು ಸುಣ್ಣವನ್ನು ಎಕರೆಗೆ 200 ಕೆ ಜಿಯಂತೆ ಬಳಸಬಹುದು ಎಂದು ಸಲಹೆ ನೀಡಿರುವ ಅವರು, ಶಿಲಾರಂಜಕವನ್ನು ಬಳಕೆ ಮಾಡುವುದಾದಲ್ಲಿ ಸುಣ್ಣದ ಬಳಕೆ ಅವಶ್ಯವಿಲ್ಲ ಎಂದಿದ್ದಾರೆ.ಕೂಲಿಯಾಳುಗಳ ಕೊರತೆ ಎದುರಿಸುತ್ತಿರುವ ಈ ದಿನಗಳಲ್ಲಿ ಪವರ್ ಟಿಲ್ಲರ್, ಕಳೆತೆಗೆಯುವ ಯಂತ್ರ, ಸಿಂಪಡಣಾ ಯಂತ್ರಗಳನ್ನು ಬಳಸಲು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಕೃಷಿ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಿದರೆ ಈ ಸವಲತ್ತುಗಳಿಗೆ ಅನುದಾನ ಒದಗಿಸಿದಾಗ ನೆರವು ಶೀಘ್ರವಾಗಿ ಬಳಸಲು ಸಾಧ್ಯವಿದೆ.