Saturday, June 8, 2013

ಶಿಕ್ಷಣದಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ: ರಮಾನಾಥ ರೈ

ಮಂಗಳೂರು, ಜೂನ್.08: ಶಿಕ್ಷಣದಿಂದ ಮಾತ್ರವೇ ಸಾಮಾಜಿಕ ಬದಲಾವಣೆ ಸಾಧ್ಯವಾಗಿದ್ದು, ಅಕ್ಷರ ಜ್ಞಾನದಿಂದ ಮಾತ್ರವೇ ಶೋಷಣೆ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುವುದು ಎಂದು ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ.
          ಇಂದು ನಗರದ ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ನೂತನ ಸಭಾಂಗಣ ಹಾಗೂ ಆಡಳಿತ ಭವನ ಉದ್ಘಾಟಿಸಿ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರವು ಸರ್ವ ಶಿಕ್ಷ ಅಭಿಯಾನದ ಮೂಲಕ ಶಾಲೆಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಪ್ರೌಢ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದೆ.ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿರುವ ದಕ್ಷಿಣ ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವುದ ಒಟ್ಟಿಗೆ  ಶಿಕ್ಷಣಕ್ಕೆ ಹೊಣೆಗಾರಿಕೆಯ ಸಹಭಾಗಿತ್ವ ನೀಡಿರುವ ಜಿಲ್ಲೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಶಾಸಕ ಜೆ.ಆರ್. ಲೋಬೋ ಅವರು ಮಕ್ಕಳ ಹಕ್ಕುಗಳು ಮೊಟಕುಗೊಳ್ಳುತ್ತಿರುವ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯೊಂದಿಗೆ ಗ್ರಾಮೀಣ ಪ್ರದೇಶಗಳಿಗೆ ಒತ್ತು ನೀಡುತ್ತಾ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ಧಾರಿ ಶಿಕ್ಷಕರ ಮೇಲಿದೆ. ಮಕ್ಕಳನ್ನು ಕೇವಲ ಯಂತ್ರಮಾನವರನ್ನಾಗಿ  ಬೆಳೆಸದೆ, ಸಮಾಜವನ್ನು ಎದುರಿಸುವ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಅವರಲ್ಲಿ ಆಸಕ್ತಿ ಮೂಡಿಸಿ ಅವರು ಪಾಲ್ಗೊಳ್ಳುವಂತೆ ಪೋಷಕರು ಹಾಗೂ ಶಿಕ್ಷಕರು ಪ್ರೋತ್ಸಾಹಿಸಬೇಕೆಂದರು.
 ಡಿಎಸ್ಇಆರ್ ಟಿ  ಬೆಂಗಳೂರು ಇದರ ನಿರ್ದೇಶಕ ರಾಮರಾವ್ ಎಚ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.
 ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಪಾಲಿಕೆ ಸದಸ್ಯ ಎ.ಸಿ. ವಿನಯರಾಜ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಸಹ ನಿರ್ದೇಶಕಿ ಹಾಗೂ ಪ್ರಾಂಶುಪಾಲೆ ಫಿಲೋಮಿನಾ ಲೋಬೋ ಸ್ವಾಗತಿಸಿದರು. ಉಪನ್ಯಾಸಕ ಸಿಪ್ರಿಯಾನ್ ವಂದಿಸಿದರು.

 ಸಮಾರಂಭದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವರು ಗುಟ್ಕಾ ನಿಷೇಧವೆಂದರೆ ಅಡಿಕೆ ನಿಷೇಧವಲ್ಲ,ಗುಟ್ಕಾ ನಿಷೇಧ ಗುಜರಾತ್ ಸೇರಿದಂತೆ ದೇಶದ 20 ರಾಜ್ಯಗಳಲ್ಲಿ ಈಗಾಗಾಲೇ ಜಾರಿಯಲ್ಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ತೊಂದರೆಯಾಗದು.  ಇದೀಗ ಆಮದು ಸುಂಕ ಹೆಚ್ಚಳ ಮಾಡುವ ಮೂಲಕ ಅಡಿಕೆ ಬೆಲೆ ಏರಿಕೆಯಾಗಿದೆ. ರೈತರಿಗೆ ತೊಂದರೆ ಆದಲ್ಲಿ ಅವರ ನೆರವಿಗೆ ಬರುವ ವಿಶ್ವಾಸದೊಂದಿಗೆ ಸರಕಾರ ಗುಟ್ಕಾ ನಿಷೇಧಕ್ಕೆ ಮುಂದಾಗಿದೆ. ರೈತರ ಹಿತವನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದರು.
ಶೀಘ್ರದಲ್ಲೇ ಸ್ಥಳೀಯಾಡಳಿತ ಸಂಸ್ಥೆಗಳ ಮೇಯರ್ ಹಾಗೂ ಅಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗುವುದು. ಆ ಬಳಿಕ ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಇತರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಲಿದೆ .ಇತರ ಇಲಾಖೆಗಳಿಗಿಂತ ಹಿಂದುಳಿದಿರುವ ಅರಣ್ಯ ಮತ್ತು ಪರಿಸರ ಇಲಾಖೆಯನ್ನು ಪರಿಸರ ಸ್ನೇಹಿಯಾಗಿಸುವ ಜೊತೆಗೆ ಜನಸ್ನೇಹಿಯಾಗಿಸುವ ಮೂಲಕ ನಿರ್ದಿಷ್ಠ ರೂಪವನ್ನು ನೀಡುವ ಪ್ರಯತ್ನ ತಮ್ಮ ಅವಧಿಯಲ್ಲಿ ಆಗಲಿದೆ  ಎಂದು ಸಚಿವರು  ಪ್ರಶ್ನೆಯೊಂದಕ್ಕೆ ಉತ್ತರಿಸಿದರು.