Tuesday, June 25, 2013

ಜಿಲ್ಲೆಯ ಅಭಿವೃದ್ಧಿಗೆ ಪರಸ್ಪರ ಸಹಕಾರ ಅಗತ್ಯ: ವೀರಪ್ಪ ಮೊಯಿಲಿ

ಮಂಗಳೂರು, ಜೂನ್. 25:- ಜಿಲ್ಲೆಯಲ್ಲಿ ಕೈಗಾರಿಕೆಗಳು ಬೆಳೆಯಲು ಜನರು ಮತ್ತು ಜಿಲ್ಲಾಡಳಿತ ಪರಸ್ಪರ ಸಹಕರಿಸಬೇಕು. ಅಭಿವೃದ್ದಿ ಸಾಧಿಸಲು ಉತ್ತಮ ಅವಕಾಶ ದಕ್ಷಿಣ ಕನ್ನಡ ಜಿಲ್ಲೆಗಿದ್ದು ಅವಕಾಶಗಳ ಸದುಪಯೋಗವಾಗಬೇಕೆಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ ವೀರಪ್ಪ ಮೊಯಿಲಿ ಹೇಳಿದರು.
 ಅವರು 24ರಂದು(ಸೋಮವಾರ) ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಮುಖ ಇಲಾಖಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ರೈಲ್ವೇ, ಬಂದರು, ರಸ್ತೆ ಹಾಗೂ ವಿಶೇಷ ಆರ್ಥಿಕ ವಲಯದ ಅಧಿಕಾರಿಗಳು ಸಭೆಯಲ್ಲಿದ್ದರು.ಹೊಣೆಯರಿತು ಅಧಿಕಾರವನ್ನು ಉಪಯೋಗಿಸಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದರಿಂದ ಎಲ್ಲರಿಗೂ ಅನುಕೂಲ. ಯೋಜನೆಗಳ ಉಪಯೋಗ ಸ್ಥಳೀಯ ಜನರಿಗೂ ದಕ್ಕಬೇಕು ಎಂದರು. ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಗಳನ್ನಾಗಿಸಬೇಕೆಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು, ಜಿಲ್ಲಾಡಳಿತ ಕೈಗಾರಿಕಾಭಿವೃದ್ಧಿಗೆ ಪೂರಕವಾಗಿದ್ದು ಸ್ಥಳೀಯ ಜನರ ಹಿತಾಸಕ್ತಿಯೂ ಜಿಲ್ಲಾಡಳಿತಕ್ಕೆ ಅಷ್ಟೇ ಮುಖ್ಯ. ಹಾಗಾಗಿ ಕಾರ್ಪೋರೆಟ್ ಕಂಪೆನಿಗಳು ತಾವು ಉಪಯೋಗಿಸುವ ಸಾರ್ವಜನಿಕ ರಸ್ತೆಗಳನ್ನು ನಿರ್ವಹಿಸುವ ಹೊಣೆಯನ್ನು ವಹಿಸಬೇಕಿದೆ. ಸ್ಥಳೀಯ ಜನರೊಂದಿಗೆ ಉತ್ತಮ ಸಂಪರ್ಕ, ಬಾಂದವ್ಯ ಹಾಗೂ ಅವಕಾಶ ಸೃಷ್ಟಿಸುವ ಹೊಣೆ ಕಂಪೆನಿಗಳದ್ದಾಗಿರಬೇಕೆಂದರು.
ಹಾಗಾಗಿ ಪರಸ್ಪರ ಸಮನ್ವಯತೆಯಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ವಿಮಾನ ನಿಲ್ದಾಣ ಪ್ರಾಧಿಕಾರದ ರನ್ ವೇ ವಿಸ್ತರಣೆಗೆ ಸಂಬಂಧಿಸಿದ ತಾಂತ್ರಿಕ ಪ್ರಸ್ತಾವನೆಯನ್ನು ಇಂದು ನಡೆಸಿದ ಸಭೆಯನ್ನು ಉಲ್ಲೇಖಿಸಿ ಸಚಿವಾಲಯಕ್ಕೆ ಸಲ್ಲಿಸಿ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಿಗೆ ಸಚಿವ ವೀರಪ್ಪ ಮೊಯಿಲಿ ಸೂಚಿಸಿದರು.ಸಭೆಯಲ್ಲಿ ಉಪಸ್ಥಿತರಿದ್ದ ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ರಾಜಕುಮಾರ್ ಕತ್ರಿ ಅವರು ರಾಜ್ಯ ಸಕರ್ಾರ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಚಿವರಿಗೆ ಹೇಳಿದರು.ವಾಣಿಜ್ಯ ಮತ್ತು ಕೈಗಾರಿಕಾ ಇಲಾಖಾ ಕಾರ್ಯದರ್ಶಿಗಳಾದ  ವಿದ್ಯಾಶಂಕರ್ ಅವರು ತಮ್ಮ ಇಲಾಖೆಯಿಂದ ಅಭಿವೃದ್ದಿಗೆ ಸಂಬಂಧಿಸಿದಂತೆ ಎಲ್ಲ ಸಹಕಾರ ನೀಡಲಾಗುವುದು. ಸಂಪರ್ಕ ವ್ಯವಸ್ಥೆ ಉತ್ತಮವಾಗಿದ್ದರೆ ಹಲವು ಸಮಸ್ಯೆಗಳು ಪರಿಹಾರವಾದಂತೆ ಎಂದರು.
ವಿಶೇಷ ಆರ್ಥಿಕ ವಲಯ ಹಾಗೂ ಎಂ ಆರ್ ಪಿ ಎಲ್ ಸಂಪರ್ಕ ರಸ್ತೆ, ಸುರತ್ಕಲ್ ವ್ಯಾಪ್ತಿಯ 15 ಕಿ.ಮೀ ರಸ್ತೆ, ಮರವೂರು-ಜೋಕಟ್ಟೆ -ಪಣಂಬೂರು ರಸ್ತೆ ರಿಪೇರಿ. ಕಳವೂರು- ಜೋಕಟ್ಟೆ ರಸ್ತೆಗಳನ್ನು ತಕ್ಷಣವೇ ಸರಿಪಡಿಸಬೇಕೆಂದು ಯುವಜನಸೇವೆ ಮತ್ತು ಮೀನುಗಾರಿಕೆ ಸಚಿವರಾದ  ಅಭಯಚಂದ್ರ ಜೈನ್ ಅವರು ಸಭೆಯಲ್ಲಿ ಸೂಚಿಸಿದರು. ಕಂಪೆನಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇದೆ ಎಂಬುದನ್ನು ಮರೆಯಬಾರದು. ಆಡಳಿತದ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆಯಾಗಬಾರದು ಎಂದೂ ಅವರು ಈ ಸಂದರ್ಭದಲ್ಲಿ ನುಡಿದರು.
ಬಿಸಿರೋಡ್, ಮಳಲಿ, ಬಜಪೆ ಮುಲ್ಕಿ ಬೈಪಾಸ್ ರಸ್ತೆಗೆ ಹೊಸ ಪ್ರಸ್ತಾವನೆಯನ್ನು ಸಿದ್ಧಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. ಮೈಸೂರು-ಸಂಪಾಜೆ-ಮಾಣಿ -ಸುಳ್ಯ- ಪುತ್ತೂರು ರಸ್ತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಿದ ಕೇಂದ್ರ ಸಚಿವರು ಕೆ ಆರ್ ಡಿ ಸಿಎಲ್ ನವರು ತಮ್ಮ ನೈಜ ಸಮಸ್ಯೆ ಹೇಳಿ ಪರಿಹಾರ ಕಂಡುಕೊಳ್ಳುವ ಮೂಲಕ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಸೂಚಿಸಿದರು.
ಮಂಗಳೂರು ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಬಗ್ಗೆ, ರಾಜ್ಯದಲ್ಲಿ ಹಾಸನ-ಸಕಲೇಶಪುರ-ಬೆಂಗಳೂರಿಗೆ ರೈಲ್ವೇ ಸಂಪರ್ಕ ಅಭಿವೃದ್ದಿಪಡಿಸುವ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು. ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣಕ್ಕೆ ಸಂಬಂಧಿಸಿದ ಯೋಜನಾ ಪ್ರಸ್ತಾವವನ್ನು ತಕ್ಷಣವೇ ತಮಗೆ ಸಲ್ಲಿಸಿ ಎಂದು ಕೇಂದ್ರ ಸಚಿವರು ಪಾಲ್ಘಾಟ್ ವಿಭಾಗದ ರೈಲ್ವೇ ಅಧಿಕಾರಿಗಳಿಗೆ ಸೂಚಿಸಿದರು.
ಉಡುಪಿ ಜಿಲ್ಲಾಧಿಕಾರಿ ಡಾ. ರೆಜು ಅವರು ಕರಾವಳಿ ಅಭಿವೃದ್ದಿ ಯೋಜನೆ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯದಲ್ಲಿ ಬಾಕಿ ಇರುವುದಾಗಿ ಕೇಂದ್ರ ಸಚಿವರ ಗಮನ ಸೆಳೆದರು. ಬಂದರು ನಗರಿಗಳನ ನಡುವೆ ಸಂಪರ್ಕವೇರ್ಪಡಿಸುವ ಚೆನ್ನೈ-ಬೆಂಗಳೂರು-ಮಂಗಳೂರು ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ವೇ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿ ಈ ಯೋಜನೆ ಇನ್ನೂ ಪ್ರಥಮ ಹಂತದಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಬಿಪಿಸಿಎಲ್ ನಿಂದ ಲೇಡಿಗೋಷನ್ ಆಸ್ಪತ್ರೆನಲ್ಲಿರುವ ಬ್ಲಡ್ ಬ್ಯಾಂಕ್ ಗೆ ಒಂದು ಕೋಟಿ ರೂ.ಗಳ ನೆರವನ್ನು ಹಸ್ತಾಂತರಿಸಲಾಯಿತು.