Monday, June 3, 2013

ಪಾಲಿಕೆ ಕಂಟ್ರೋಲ್ ರೂಂ ಪರಿಶೀಲಿಸಿದ ಜಿಲ್ಲಾಧಿಕಾರಿ

ಮಂಗಳೂರು, ಜೂನ್. 03 : ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ  ಸ್ಥಾಪಿಸಿದ ಕಂಟ್ರೋಲ್ ರೂಂ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಷ್ಕರಿಸಿ ಪ್ರತಿದಿನದ ದೂರು ಹಾಗೂ ಕ್ರಮಗಳ ವರದಿಯನ್ನು ಪಾಲಿಕೆ ಆಯುಕ್ತರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಎನ್ ಪ್ರಕಾಶ್ ಆದೇಶಿಸಿದರು.
ಇಂದು ಪಾಲಿಕೆ ದಿಢೀರ್ ಭೇಟಿ ನೀಡಿದ ಮಹಾನಗರಪಾಲಿಕೆ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು, ಕಂಟ್ರೋಲ್ ರೂಂ ವ್ಯವಸ್ಥೆಯನ್ನು ಸಮರ್ಪಕಗೊಳಿಸಿ ಎಂದು ತಾಕೀತು ಮಾಡಿದರು.
 ದೂರುಗಳ ದಾಖಲೀಕರಣ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ವರದಿ ಇರಬೇಕು. ಬಂದ ದೂರುಗಳನ್ನಷ್ಟೆ ದಾಖಲಿಸಿ ಸಂಬಂಧಪಟ್ಟವರಿಗೆ ನೀಡುವುದು ಕಂಟ್ರೋಲ್ ರೂಂ ಕಾರ್ಯವೈಖರಿಯಲ್ಲ ಎಂದ ಜಿಲ್ಲಾಧಿಕಾರಿಗಳು, ನೇರವಾಗಿ ಸಾರ್ವಜನಿಕರಿಂದ ತಮಗೆ ದೂರವಾಣಿ ಕರೆ ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ ಎಂದರು. ಸಂಬಂಧಪಟ್ಟ ಅಧಿಕಾರಿಗಳು ಹೊಣೆಯರಿತು ವರ್ತಿಸಿ ನಾಗರೀಕರ ದೂರುಗಳಿಗೆ ಸ್ಪಂದಿಸದಿದ್ದರೆ ಶಿಸ್ತುಕ್ರಮ ಎದುರಿಸಿ. ಸಮನ್ವಯತೆಯಿಂದ ಸಾರ್ವಜನಿಕರ ಕೆಲಸ ಮಾಡಿ ಎಂದ ಜಿಲ್ಲಾಧಿಕಾರಿಗಳು ದೂರನ್ನು ಪರಿಹರಿಸಲು ಕ್ರಮಕೈಗೊಳ್ಳಿ ಎಂದರು.
ನಗರದಲ್ಲಿ ಕಸ ವಿಲೇ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಪ್ರತಿದಿನ ತಾವೇ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸುವ ಎಚ್ಚರಿಕೆಯನ್ನೂ ನೀಡಿದರು. ಸಮರ್ಪಕ ಕಸ ವಿಲೇ ಮಾಡದ ಗುತ್ತಿಗೆದಾರರ ಗುತ್ತಿಗೆ ರದ್ದುಪಡಿಸಿ ಹೊಸ ಗುತ್ತಿಗೆದಾರರನ್ನು ನೇಮಿಸಿ. ಈ ಸಂಬಂಧ ಆರೋಗ್ಯ ಅಧಿಕಾರಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕಿದೆ ಎಂದರು.
ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವರು ಪ್ರಗತಿಪರಿಶೀಲನೆ ಹಾಗೂ ಆರೋಗ್ಯ ಸಚಿವರು ಜಿಲ್ಲೆಯ ಸ್ವಚ್ಛತೆ ಹಾಗೂ ಆರೋಗ್ಯ ಸಂಬಂಧಿ ಸಭೆಗಳನ್ನು ನಡೆಸಲಿದ್ದು ಜಾರಿ ಮಾಡಿದ ಕಾರ್ಯಕ್ರಮಗಳ ಬಗ್ಗೆಮಾಹಿತಿ ಸಿದ್ದಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆಯ ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ಕಾಮಗಾರಿ ನಿರ್ವಹಿಸಿದವರಿಗೆ ಪಾವತಿಸಲು ಹಿಂದುಮುಂದು ನೋಡದೆ ಸಮರ್ಪಕ ಕೆಲಸಕ್ಕೆ ತಕ್ಷಣವೇ ಬಿಲ್ ಸಿದ್ಧಪಡಿಸಲು 48 ಗಂಟೆಗಳ ಕಾಲಾವಕಾಶವನ್ನು ಜಿಲ್ಲಾಧಿಕಾರಿಗಳು ನೀಡಿದರು.
ಸಭೆಯಲ್ಲಿ ಪಾಲಿಕೆ ಪ್ರಭಾರ ಆಯುಕ್ತ ಶ್ರೀಕಾಂತ್ ರಾವ್, ಉಪ ಆಯುಕ್ತರು ಅಭಿವೃದ್ಧಿ ಬಿ ಎಸ್ ಬಾಲಕೃಷ್ಣ, ವಲಯ ಆಯುಕ್ತರು ಪ್ರಮೀಳ ಹಾಗೂ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.