Tuesday, June 18, 2013

ಜಿಲ್ಲೆಯಲ್ಲಿ ಗುಟ್ಕಾ ನಿಷೇಧ: ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಆದೇಶ

ಮಂಗಳೂರು,ಜೂನ್.18 : ಗುಟ್ಕಾ ನಿಷೇಧ ಆದೇಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ತಹಸೀಲ್ದಾರರು ಮತ್ತು ತಾಲೂಕು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ದಾಳಿ ನಡೆಸುವಂತೆ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಆದೇಶ ನೀಡಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ನಿಷೇಧವನ್ನು ಜಾರಿಗೆ ತಂದದ್ದು, ಈ ಆದೇಶದ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಸಂಬಂಧ 17ರಂದು ಸಂಜೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವ್ಯಾಪಾರಿಗಳು, ಸಗಟು ಮಾರಾಟದಾರರು ತಮ್ಮಲ್ಲಿರುವ ಸ್ಟಾಕ್ ಮುಗಿಸಲು ಕದ್ದುಮುಚ್ಚಿ ತಮ್ಮ ಖಾಯಂ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರೆ ತಕ್ಷಣವೇ ಅಂತಹುದಕ್ಕೆ ಅವಕಾಶ ನೀಡದಂತೆ ಒಂದು ಕಾರ್ಯಪಡೆ ರಚಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲೆಯಲ್ಲಿರುವ ಆಹಾರ ಸುರಕ್ಷಾ ಅಧಿಕಾರಿ ಹಾಗೂ ಡಾ ರಾಜೇಶ್ ಅವರು ಇದಕ್ಕೆ ಅಂಕಿತ ಅಧಿಕಾರಿಗಳಾಗಿರುತ್ತಾರೆ.
ಗುಟ್ಕಾ ಮತ್ತು ಪಾನ್ ಮಸಾಲಗಳು, ತಂಬಾಕು ಮತ್ತು ನಿಕೋಟಿನ್ ಘಟಕಾಂಶಗಳನ್ನು ಒಳಗೊಂಡ ಆಹಾರ ಪದಾರ್ಥಗಳು ಈ ಅಧಿಸೂಚನೆಯಡಿ ಬರುತ್ತವೆ. ತಂಬಾಕು ಮತ್ತು ನಿಕೋಟಿನ್ ಘಟಕಾಂಶಗಳನ್ನೊಳಗೊಂಡ ಗುಟ್ಕಾ ಮತ್ತು ಪಾನ್ ಮಸಾಲ ಆಹಾರ ಪದಾರ್ಥಗಳ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಕರುಳು, ಶ್ವಾಸಕೋಶ, ಹೃದಯಕ್ಕೆ ಸಂಬಂಧಿಸಿದಂತೆ ಹಾಗೂ ಕ್ಯಾನ್ಸರ್ ರೋಗಗಳಿಗೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಯುವಜನತೆ ಗುಟ್ಕಾ ಸೇವನೆಯ ಚಟಕ್ಕೆ ಬೀಳುತ್ತಿದ್ದಾರೆ. ಇದು ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದನ್ನು ಗಮನಿಸಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾ ಅಂಕಿತ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು  ಜಿಲ್ಲಾಧಿಕಾರಿಗಳು ಆದೇಶಿಸಿದರು.
ಆಯಾ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು/ಪೌರಾಯುಕ್ತರು ಹಾಗೂ ಆರೋಗ್ಯಾಧಿಕಾರಿಗಳು ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡತಕ್ಕದ್ದು ಎಂದ ಜಿಲ್ಲಾಧಿಕಾರಿಗಳು, ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆಯ ಸಹಕಾರ ಪಡೆಯಿರಿ ಎಂಬ ಸೂಚನೆಯನ್ನೂ ನೀಡಿದರು. ಗುಟ್ಕಾ ಮತ್ತು ಪಾನ್ ಮಸಾಲಗಳ ಮಾರಾಟ, ಶೇಖರಣೆ ಹಾಗೂ ವಿತರಣೆಯಲ್ಲಿ ತೊಡಗಿರುವ ವ್ಯಾಪಾರಸ್ಥರು ಪತ್ತೆಯಾದರೆ ಅವರ ವ್ಯಾಪಾರ ಪರವಾನಿಗೆಯನ್ನು ರದ್ದುಗೊಳಿಸಲು ಸೂಚಿಸಿದರು.
ನಿಯಮ ಉಲ್ಲಂಘನೆಗೆ ಗರಿಷ್ಠ 10 ಲಕ್ಷರೂ. ದಂಡ ವಿಧಿಸುವ ಅಧಿಕಾರವೂ ಇದೆ. ದಂಡದ ಹಣವನ್ನು ಜಾಗೃತಿ ಕಾರ್ಯಕ್ರಮಕ್ಕೆ ವಿನಿಯೋಗಿಸಲು ಅವಕಾಶವಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಡಿಎಚ್ಒ ಶ್ರೀರಂಗಪ್ಪ, ಡಾ ರಾಮಕೃಷ್ಣ ಹಾಗೂ ತಹಸೀಲ್ದಾರ್ ಮತ್ತು ಆಹಾರ ಸುರಕ್ಷಾ ಅಧಿಕಾರಿಗಳು ಉಪಸ್ಥಿತರಿದ್ದರು.