Monday, June 17, 2013

'ಮನಪಾ ರಾಜ್ಯಕ್ಕೆ ಮಾದರಿ ಆಗಬೇಕು'

ಮಂಗಳೂರು ಜೂನ್ 17 :ಮಂಗಳೂರು ಮಹಾನಗರಪಾಲಿಕೆಯನ್ನು ರಾಜ್ಯಕ್ಕೆ ಮಾದರಿಯನ್ನಾಗಿ ಮಾಡುವ ಗುರಿ ತಮ್ಮ ಮುಂದಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ  ಹೇಳಿದರು.
ರಾಜ್ಯದ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಹಾಗೂ ರಸ್ತೆ, ಸಂಚಾರ ವ್ಯವಸ್ಥೆಯನ್ನು ಅಭಿವೃದ್ದಿ ಪಡಿಸಲು ಅರ್ಬನ್ ಲ್ಯಾಂಡ್ ಟ್ರಾನ್ಸ್ ಪೋರ್ಟ ಅಥಾರಿಟಿಯನ್ನು ಸ್ಥಾಪಿಸಲಾಗಿದೆ. ಈ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಗಳು ಸದಸ್ಯರಾಗಿರುವರು. ನಗರಗಳ ಸುಸ್ಥಿರ ಅಭಿವೃದ್ಧಿಯ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯಗಳಲ್ಲಿ ಸ್ಥಾಪಿಸಲ್ಪಟ್ಟಿರುವ ಈ ಅಥಾರಿಟಿಯಡಿ 60 ಕೋಟಿ ರೂ. ಗಳಷ್ಟು ತುರ್ತುಅಗತ್ಯಕ್ಕೆ ಅನುದಾನವಿರುತ್ತದೆ.
ನಮ್ಮ ಅಗತ್ಯಗಳು ಹಾಗೂ ಯೋಜನೆಗಳು ಸಮಗ್ರವಾಗಿದ್ದು, ಸಲ್ಲಿಸಿಅನುಮೋದನೆ ಪಡೆದರೆ ನಗರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಚಿವರು ಹೇಳಿದರು. ಈಗಾಗಲೇ ಗ್ರೇಟರ್ ಮಂಗಳೂರು ಸರ್ವೇಯಡಿ ಮಂಗಳೂರು ಮಹಾನಗರಪಾಲಿಕೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಪಾಲಿಕೆ ಪ್ರಗತಿಪರಿಶೀಲನೆ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಭಿವೃದ್ಧಿಗೆ ತೆರಿಗೆ ಹೆಚ್ಚಳ ಅನಿವಾರ್ಯವಾಗಿದ್ದು, ತೆರಿಗೆಯ ಭಾರವನ್ನು ಜನಸಾಮಾನ್ಯರ ಮೇಲೆ ಹೇರದೆ ಕೈಗಾರಿಕೆಗಳಿಗೆ ವಿಧಿಸುವ ಬಗ್ಗೆ ಚಿಂತಿಸಲಾಗುವುದು ಎಂದ ಸಚಿವರು, ನರ್ಮ ಯೋಜನೆಯಲ್ಲಿ ಸೇರ್ಪಡೆಗೊಳಿಸಲು ಈಗ ಜನಸಂಖ್ಯೆ ಮಾನದಂಡವಾಗಿಲ್ಲದ ಕಾರಣ ಈ ಯೋಜನೆಯಡಿ ಮಂಗಳೂರನ್ನು ಸೇರ್ಪಡೆಗೊಳಿಸಲು ಚಿಂತಿಸಿದೆ ಎಂದು ಸಚಿವರು ಹೇಳಿದರು. ಸಿಬ್ಬಂದಿ ಕೊರತೆ ಎಲ್ಲ ಇಲಾಖೆಗಳಲ್ಲೂ ಹಾಗೂ ರಾಜ್ಯದಾದ್ಯಂತ ಇದ್ದು, ಪಾಲಿಕೆ ಹಾಗೂ ಮೂಡಾ ಕಚೇರಿಗಳಲ್ಲಿ ಪಾರದರ್ಶಕಗೊಳಿಸಲು ವ್ಯವಸ್ಥೆಯನ್ನು ಗಣಕೀಕೃತ ಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಪಾಲಿಕೆಯಲ್ಲಿ ಅಂತರ್ ವರ್ಗಾವಣೆ ನೀತಿಯನ್ನು ಜಾರಿಗೆ ತರಲಾಗುವುದು ಎಂದ ಸಚಿವರು, ಮಹಾನಗರಪಾಲಿಕೆ ಮತ್ತು ಮೂಡಾ ಜನರ ಹಾಗೂ ನಗರಾಭಿವೃದ್ದಿಗೆ ಪೂರಕವಾಗಿ ಕಾರ್ಯೋನ್ಮುಖಗೊಳಿಸುವುದು ತಮ್ಮ ಉದ್ದೇಶ ಎಂದರು. ಇದಕ್ಕೆಂದ ಪರಸ್ಪರರ ನಡುವೆ ಕೊಂಡಿಯಾಗಿ ಕೆಲಸ ಮಾಡಲು ಪಾಲಿಕೆಯಲ್ಲಿ ಒಂದು ಅಭಿವೃದ್ಧಿ ಅಧಿಕಾರಿಯ ಹುದ್ದೆಯನ್ನು ಭರ್ತಿ ಮಾಡಲಾಗುವುದೂ ಎಂದು ಅವರು ನುಡಿದರು.
ಮಹಾನಗರಪಾಲಿಕೆಯಡಿ ಇರುವ ಕಟ್ಟಡಗಳ ಬಾಡಿಗೆ, ಜಾಹೀರಾತು ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಯಾಕೆ ಸಾಧಿಸಿಲ್ಲ; ಎಲ್ಲ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಮಾಡಿ. ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ಮಾಡಲಿರುವುದರಿಂದ ಪಿಪಿಟಿ ಪ್ರಸೆಂಟೇಷನ್ ನಲ್ಲಿ ಕಂಪಾರಿಟಿವ್ ಅಧ್ಯಯನ ವರದಿ ಇರಲಿ ಎಂದು ಅವರಿಂದು ಮಂಗಳೂರು ಮಹಾನಗರಪಾಲಿಕೆಯಲ್ಲಿ ಪಾಲಿಕೆ ಪ್ರಗತಿಪರಿಶೀಲನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಹೇಳಿದರು.
ಸಾಂಕ್ರಾಮಿಕ ರೋಗ ತಡೆಗೆ ಕೈಗೊಂಡ ಕ್ರಮ ಹಾಗೂ ಕಟ್ಟಡ ನಿಯಮ ಉಲ್ಲಂಘನೆ ಬಗ್ಗೆ ಸವಿವರ ವರದಿ ನೀಡಲು ಸೂಚಿಸಿದರು.
ಪಾಲಿಕೆಯಲ್ಲಿ ಆದಾಯ ತೆರಿಗೆ 2013 ಮತ್ತು 14 ರ ಸಾಲಿನಲ್ಲಿ 1152.38ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದ್ದು, 3136.44 ಲಕ್ಷ ಸಂಗ್ರಹ ಬಾಕಿ ಇದೆ. ಜಾಹೀರಾತು ತೆರಿಗೆ ಸಂಗ್ರಹ ಹಾಗೂ ಅನಧಿಕೃತ ಜಾಹೀರಾತು ಫಲಕಗಳ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿ ಎಂದು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಉದ್ದಿಮೆ ಪರವಾನಿಗೆಯಡಿ 13-14ರ ಸಾಲಿನಲ್ಲಿ 23644 ಪರವಾನಿಗೆ ನೀಡಲಾಗಿದೆ. ಒಟ್ಟು 138.53 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 271  ಹೊಸದಾಗಿ ಪರವಾನಿಗೆ ನೀಡಲಾಗಿದೆ. 57 ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಘನತ್ಯಾಜ್ಯ ವಿಲೇಗೆ ಸಂಬಂಧಿಸಿದಂತೆ ಪಾಲಿಕೆಯ 60 ವಾರ್ಡುಗಳಲ್ಲಿ 47 ವಾರ್ಡುಗಳನ್ನು ಗುತ್ತಿಗೆ ಆಧಾರದಲ್ಲಿ 8 ಪ್ಯಾಕೇಜುಗಳನ್ನಾಗಿ ವಿಂಗಡಿಸಿ ಟೆಂಡರು ಕರೆದು ಗುತ್ತಿಗೆ ನೀಡಲಾಗಿದೆ. ಘನತ್ಯಾಜ್ಯ ವಿಲೇವಾರಿಗಾಗಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪಚ್ಚನಾಡಿ ಪ್ರದೇಶದಲ್ಲಿ 77.93 ಎಕರೆ ಜಮೀನಿನಲ್ಲಿ ಕುಡ್ಸೆಂಪ್ ಯೋಜನೆಯಡಿಯಲ್ಲಿ ಕಾಂಪೋಸ್ಟ್ ಸ್ಥಾವರ ಹಾಗೂ ಸೆನಿಟರಿ ಲ್ಯಾಂಡ್ಫಿಲ್ ಸ್ಥಾವರ ನಿರ್ಮಿಸಿದ್ದು ಪಾಲಿಕೆ ನಿರ್ವಹಿಸುತ್ತಿದೆ.ಮನೆಮನೆಯಿಂದ ತ್ಯಾಜ್ಯ ಸಂಗ್ರಹಣೆ, ವಿಂಗಡಣೆ, ಶೇಖರಣೆ, ಸಾಗಾಣಿಕೆಯನ್ನು ಮಂಗಳೂರನ್ನು 2 ವಲಯಗಳನ್ನಾಗಿ ಮಾಡಿ ಹಾಗೂ ಕಾಂಪೋಸ್ಟ್ ಸ್ಥಾವರ ಮತ್ತು ಲ್ಯಾಂಡ್ ಫಿಲ್ ಘಟಕದ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲು ಒಟ್ಟು 3 ಪ್ಯಾಕೇಜುಗಳಿಗೆ 7 ವರ್ಷಗಳ ಅವಧಿಗೆ ನಿರ್ವಹಿಸಲು ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಸರಕಾರದ ಅನುಮೋದನೆ ಪಡೆಯಲಾಗಿರುತ್ತದೆ.
ಆದರೂ ನಗರ ಶುಚಿತ್ವದೆಡೆ ನೀಡಿದ ಗಮನ ಸಾಲದು ಎಂದು ಶಾಸಕರು ಗಮನಸೆಳೆದಾಗ, ಕಾರಣ ಕೇಳಿದ ಸಚಿವರು, 47 ವಾರ್ಡುಗಳನ್ನು ನೈರ್ಮಲ್ಯಕ್ಕಾಗಿ ಗುತ್ತಿಗೆ ನೀಡಲಾಗಿದ್ದು, 13 ವಾರ್ಡುಗಳನ್ನು ಪೌರಕಾರ್ಮಿಕರಿಂದಲೇ ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ಮಳೆಗಾಲದ ಮುಂಚೆ ವಿವಿಧ ಕಾರಣಗಳಿಂದ ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ಎಲ್ಲರಿಗೂ ಮಾಹಿತಿ ಇದ್ದು, ಈ ನಿಟ್ಟಿನಲ್ಲಿ ಮಹಾನಗರಪಾಲಿಕೆಯ ಆರೋಗ್ಯ ವಿಭಾಗ ಹೆಚ್ಚಿನ ಅಸ್ಥೆ ವಹಿಸಿ ಕಾರ್ಯನಿರ್ವಹಿಸಬೇಕಿದೆ ಎಂದು ಸಚಿವರು ನುಡಿದರು.
ಮಲೇರಿಯಾ ಹಾಗೂ ಡೆಂಗ್ಯು ನಿಯಂತ್ರಿಸುವಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ ಯಶಸ್ಸು ಸಾಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 13ನೇ ಫೈನಾನ್ಸ್ ನಡಿ %64 ರಷ್ಟು ಪ್ರಗತಿ ದಾಖಲಿಸಿದೆ. ರೈಲ್ವೇ ಕಾಮಗಾರಿಗಳಡಿಯಲ್ಲಿ ಮಹಾಕಾಳಿಪಡ್ಪಿನಲ್ಲಿ 14.29 ಕೋಟಿಗಳಿಗೆ ಯೋಜನೆ ತಯಾರಿಸಿದ್ದು, ಅನುಮೋದನೆಗಾಗಿ ರೈಲ್ವೇಯವರಿಗೆ ಸಲ್ಲಿಸಲಾಗಿದೆ. ಜೆಪ್ಪು ಕುಡುಪಾಡಿ ರಸ್ತೆ ಕೆಳಸೇತುವೆಗೆ ಅಂದಾಜು ಪಟ್ಟಿ ರೂ. 3.62 ಕೋಟಿಗಳಿಗೆ ತಯಾರಿಸಿದ್ದು, ರೈಲ್ವೇ ಇಲಾಖೆಗೆ ಹಣ ಪಾವತಿಸಲು ಸಕರ್ಾರವನ್ನು ವಿನಂತಿಸಲಾಗಿದೆ. ಪಡೀಲ್ ಬಜಾಲ್ ರಸ್ತೆ ಕೆಳಸೇತುವೆಗೆ ರೈಲ್ವೇ ಇಲಾಖೆಯಲ್ಲಿ 50:50 ಅನುಪಾತದಲ್ಲಿ ರೂ. 5.16 ಕೋಟಿ ಗಳಿಗೆ ಅನುಮೋದನೆಯಾಗಿದ್ದು, ಪಾಲಿಕೆಯು ರೂ. %50 ಮೊತ್ತ ಅಂದರೆ 2.58 ಕೋಟಿ ಗಳನ್ನು ರೈಲ್ವೇಗೆ ಪಾವತಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸೂಪರಿಂಟೆಂಡೆಂಟ್ ಇಂಜಿನಿಯರ್ ಸಭೆಯಲ್ಲಿ ಮಾಹಿತಿ ನೀಡಿದರು.
ವಾಜಪೇಯಿ ನಗರ ವಸತಿ ಯೋಜನೆಯಡಿ ಪ್ರಗತಿ ಸಮಾಧಾನಕರವಾಗಿಲ್ಲ ಎಂದ ಸಚಿವರು, ಮುಂದಿನ ದಿನಗಳಲ್ಲಿ ಅರ್ಹರಿಗೆ ಯೋಜನೆಗಳನ್ನು ತಲುಪಿಸುವಂತಹ ಕೆಲಸವಾಗಬೇಕೆಂದರು. ಈ ಸಂಬಂಧ ಅಧಿಕಾರಿ ಮಾಹಿತಿ ನೀಡಿ, ಸಮಿತಿಯಲ್ಲಿ 704 ಅರ್ಜಿಗಳಲ್ಲಿ 163 ಅರ್ಜಿಗಳು ಸ್ವೀಕೃತವಾಗಿದ್ದು, 20 ಜನರಿಗೆ ಮಾತ್ರ ರೂ. 75,000 ದಂತೆ ಸಹಾಯಧನ ಲಭ್ಯವಾಗಿದೆ ಎಂದರು. ಸಾಲ ಮಂಜೂರಾತಿಗಾಗಿ ಬ್ಯಾಂಕಿನಲ್ಲಿ 211 ಅರ್ಜಿಗಳು ಬಾಕಿ ಇವೆ ಎಂದರು.
ನಿವೇಶನ ಕೋರಿ ಒಟ್ಟು 3612 ಬಂದಿರುವ ಒಟ್ಟು ಅರ್ಜಿಗಳು, ತಹಸೀಲ್ದಾರರ ಕಚೇರಿಯಿಂದ ಗುರುತಿಸಲಾದ ಅರ್ಹ ಫಲಾನುಭವಿಗಳ ಸಂಖ್ಯೆ 918. ದಕ್ಷಿಣ ವಿಧಾನಸಭಾ ಕ್ಷೇತ್ರ 699, ಉತ್ತರ ವಿಧಾನಸಭಾ ಕ್ಷೇತ್ರ 219. ಆಶ್ರಯ ಸಮಿತಿಯಲ್ಲಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾದ ಸಂಖ್ಯೆ 85.
ಪರಿಶಿಷ್ಟ ಪಂಗಡ ಮತ್ತು ವರ್ಗಗಳ ಅಭಿವೃದ್ಧಿಗಾಗಿ ಪ.ಜಾ/ಪ.ವ ಕಾಲನಿಗಳಲ್ಲಿ ರೂ. 98.35 ಲಕ್ಷ ವೆಚ್ಚದಲ್ಲಿ 3 ಅಂಬೇಡ್ಕರ್ ಭವನಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದೆ.
ಸಮಸ್ಯೆ ಬಂದಾಗ ತಾತ್ಕಾಲಿಕ ಪರಿಹಾರವನ್ನು ರೂಪಿಸದೆ 25 ವರ್ಷ ಭವಿಷ್ಯವನ್ನು ಗಮನದಲ್ಲಿರಿಸಿ ಯೋಜನೆ ರೂಪಿಸಿ. ದೂರದೃಷ್ಟಿಯೊಂದಿಗೆ ಯೋಜನೆಗಳು ರೂಪಿಸಲ್ಪಟ್ಟಾಗ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಸಚಿವರು ಹೇಳಿದರು.
ಪಾಲಿಕೆ ಹಾಗೂ ಮೂಡಾಕ್ಕೆ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಿದ್ದು, ಸಮಗ್ರ ನಿರ್ಧಾರ ಕೈಗೊಳ್ಳಲು ಅನುಕೂಲವಾಗಲಿದೆ. ಅಭಿವೃದ್ಧಿಯತ್ತ ಅಧಿಕಾರಿಗಳ ಚಿತ್ತವಿರಲಿ ಎಂದು ಸಚಿವರು ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ  ರಮಾನಾಥ ರೈ, ಶಾಸಕರಾದ  ಜೆ ಆರ್ ಲೋಬೋ,  ಮೊಯ್ದಿನ್ ಬಾವಾ, ಜಿಲ್ಲಾಧಿಕಾರಿ ಎನ್ ಪ್ರಕಾಶ್, ಪಾಲಿಕೆ ಆಯುಕ್ತರಾದ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.