Friday, June 7, 2013

ಜನಪರವಾಗಿ ಕರ್ತವ್ಯ ನಿರ್ವಹಿಸಿ: ಸಚಿವ ಖಾದರ್

ಮಂಗಳೂರು, ಜೂನ್.0 7: ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ರಸ್ತೆ ಹಾಗೂ ಪ್ರಾಕೃತಿಕ ವಿಕೋಪದಲ್ಲಿ ಸಂಭವಿಸಿದ ಹಾನಿಗೆ ತುರ್ತು ಪರಿಹಾರ ನೀಡುವುದು ಇಂಜಿನಿಯರ್ ವಿಭಾಗದ ಹೊಣೆ ಎಂದು ಆರೋಗ್ಯ ಸಚಿವ  ಯು ಟಿ ಖಾದರ್ ಹೇಳಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ನೀರು, ನೈರ್ಮಲ್ಯ ಹಾಗೂ ರಸ್ತೆಗಳಿಗೆ ಆದ್ಯತೆ ನೀಡಿ. ನಮ್ಮ ಗ್ರಾಮ ನಮ್ಮ ರಸ್ತೆಯಡಿ ರಸ್ತೆಗಳಿಗಾಗಿ ಬಿಡುಗಡೆಯಾದ ಅನುದಾನವನ್ನು ಸದ್ಬಳಕೆ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಿ. ಮಳೆಗಾಲದಲ್ಲಿ ರಸ್ತೆ ಇಲ್ಲದೆ ಗ್ರಾಮೀಣರು ಒದ್ದಾಡಬಾರದು. ಅವರಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಿ ಎಂದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಸಿ. ಯೋಜನೆಗಳನ್ನು ಅರ್ದಂಬರ್ಧ ಮಾಡಿ ಕೈಬಿಡದೆ ಸಂಪೂರ್ಣಗೊಳಿಸಿ. ಯಾವುದಕ್ಕೂ ಜನ ಇಲ್ಲ ಎಂಬ ಸಬೂಬು ನೀಡದೆ ವಿವಿಧ ಕಾಮಗಾರಿಗಳನ್ನು ಒಂದೇ ಏಜೆನ್ಸಿಗೆ ನೀಡುವ ಮೂಲಕವಾದರೂ ಕೆಲಸ ಮಾಡಿಸಿ ಎಂದು ಮಂಗಳೂರು ಹಾಗೂ ಬಂಟ್ವಾಳ ವ್ಯಾಪ್ತಿಯ ಕಾಮಗಾರಿಗಳ ಮಾಹಿತಿ ಪಡೆದು ಸಂಪೂರ್ಣಗೊಳಿಸಲು ಸಮಯಮಿತಿ ನಿಗದಿ ಪಡಿಸಿದರು. ಸಭೆಯಲ್ಲಿ ಇಂಜಿನಿಯರ್ ವಿಭಾಗದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.