Friday, June 7, 2013

ಕಟ್ಟಡ ಕಾಮಗಾರಿ ಪ್ರದೇಶದಲ್ಲಿ ನಿಯಮಪಾಲಿಸದಿದ್ದರೆ ಲೈಸನ್ಸ್ ರದ್ದು: ಜಿಲ್ಲಾಧಿಕಾರಿ

ಮಂಗಳೂರು,ಜೂನ್.07: ನಗರದ ಆರ್ಥಿಕ ಬೆಳವಣಿಗೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತಿರುವ ಬಿಲ್ಡರ ಗಳು ಈ ಪ್ರದೇಶದ ಜನರ ಹಿತವನ್ನು ಗಮನದಲ್ಲಿರಿಸಿ ತಮ್ಮ ಕಟ್ಟಡ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಸ್ವಚ್ಛತೆ ಹಾಗೂ ಕಾನೂನು ಪಾಲಿಸದಿದ್ದರೆ ತಮ್ಮ ಖುದ್ದು ಭೇಟಿಯ ವೇಳೆ ಕಾಮಗಾರಿ ಲೈಸನ್ಸ್ ರದ್ದುಪಡಿಸುವುದು ಖಚಿತ  ಎಂದು ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಎಚ್ಚರಿಕೆ ಸಂದೇಶ ನಗರದ ಬಿಲ್ಡರ್ ಗಳಿಗೆ ರವಾನಿಸಿದ್ದಾರೆ.  ಗುರುವಾರ ಸಂಜೆ ಪಾಲಿಕೆಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಬಿಲ್ಡರ್ ಗಳು, ಸಿವಿಲ್ ಇಂಜಿನಿಯರ್ಸ್ ಹಾಗೂ ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
 ಕಟ್ಟಡ ಕಾಮಗಾರಿ ಪ್ರದೇಶದಲ್ಲಿ ದುಡಿಯುತ್ತಿರುವ ಕಾರ್ಮಿಕರು ವಲಸೆ ಕಾರ್ಮಿಕರಾಗಿದ್ದು, ಇವರಿಗೆ ಮೂಲ ಸೌಕರ್ಯಗಳನ್ನು ಒದಗಿಸದೆ ದುಡಿಸುತ್ತಿರುವುದನ್ನು ಜಿಲ್ಲಾಡಳಿತ ಗಮನಿಸಿದೆ. ಪಾಲಿಕೆಯ ಆರೋಗ್ಯ ವಿಭಾಗ ಸುಮಾರು 383 ಸೈಟ್ ಗಳ ಸಮೀಕ್ಷೆ ನಡೆಸಿದ್ದು, ಹೆಚ್ಚಿನ ಸೈಟ್ ಗಳಲ್ಲಿ ಆರೋಗ್ಯ ಹಾಗೂ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಈಗಾಗಲೇ ಪಾಲಿಕೆಯ ಆರೋಗ್ಯ ವಿಭಾಗ ನಡೆಸಿದ ಸಮೀಕ್ಷೆಯ ಪ್ರಕಾರ 13 ಸೈಟ್ ಗಳಲ್ಲಿ ಸೊಳ್ಳೆಗಳ ಉತ್ಪತ್ತಿ  ಕಂಡು ಬಂದಿದ್ದು ಎರಡನೇ ಸಮೀಕ್ಷೆಯ ಬಳಿಕವೂ ಕ್ರಮ ವಹಿಸದ ಬಿಲ್ಡರ್ ಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ಖುದ್ದಾಗಿ ತಾನು ಇಂತಹ ಸೈಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಅವರು, ಇಂದಿನ ಸಭೆಯ ಉದ್ದೇಶ ಪೂರ್ವಭಾವಿಯಾಗಿ ಎಚ್ಚರಿಕೆ ನೀಡುವುದಷ್ಟೆ ಎಂದು ಹೇಳಿದರು.
ಸೂಚನೆಯನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂದು ಹೇಳಿದ ಜಿಲ್ಲಾಧಿಕಾರಿಗಳು, ನಿಮ್ಮ ವ್ಯವಹಾರ ಹಿತದ ಜೊತೆಗೆ ಜನತೆಯ ಹಿತವನ್ನು ಗಮನದಲ್ಲಿರಿಸುವುದ ಆದ್ಯ ಕರ್ತವ್ಯ ಎಂದರು.
ಮಳೆಯಿಂದ ಮಲೇರಿಯಾ ಜಾಸ್ತಿಯಾಗುತ್ತದೆ ಎಂದ ಬಿಲ್ಡರ್ ಗಳ ವಾದವನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಸಬೂಬು ಹೇಳದೆ ಎಲ್ಲರ ಹಿತ ಕಾಯುವುದು ಮುಖ್ಯ. ಜಿಲ್ಲಾಡಳಿತ ಆ ಕರ್ತವ್ಯವನ್ನು ನಿರ್ವಹಿಸಲಿದೆ. ಪಾಲಿಕೆಯ ಆರೋಗ್ಯ ವಿಭಾಗ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಿಮ್ಮ ಕೆಲಸದವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಎಂದರು.
 ಎಲ್ಲೆಡೆ ಸ್ವಾಭಾವಿಕ ಚರಂಡಿಗಳ ಬ್ಲಾಕ್ ಮಾಡಿ, ಎಲ್ಲ ಕಟ್ಟಡ ಸಾಮಗ್ರಿಗಳನ್ನು ರಸ್ತೆಯ ಮೇಲೆ ಬೇಕಾಬಿಟ್ಟಿ ಸಾರ್ವಜನಿಕ ರಸ್ತೆಗಳಲ್ಲಿ ಡಂಪ್ ಮಾಡುವುದು ಅಕ್ಷಮ್ಯ. ಕ್ರಾಸ್ ರೋಡ್ ಗಳಲ್ಲಿ ಬಿಲ್ಡಿಂಗ್ ಮೆಟಿರಿಯಲ್ ಡಂಪ್ ಮಾಡುವುದು ಅನಾಗರೀಕ ವರ್ತನೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಇದರಿಂದ ಪಾದಾಚಾರಿಗಳಿಗೆ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದರು.
ಈ ಸಂಬಂಧ ದೂರುಗಳನ್ನು ಈಗಾಗಲೇ ಪಾಲಿಕೆ ಸ್ವೀಕರಿಸುತ್ತಿದ್ದು, ಪಾಲಿಕೆ ಅಭಿವೃದ್ಧಿ ಆಯುಕ್ತರು ಈಗಾಗಲೇ ನಾಲ್ಕಾರು ಕಡೆಗಳಲ್ಲಿ ಟಿಪ್ಪರ್ ಕಳುಹಿಸಿ ಮೆಟಿರೀಯಲ್ ತೆಗೆಸಿ ಇದರ ಖರ್ಚನ್ನು ಬಿಲ್ಡರ್ ಗಳಿಗೆ ಕಳುಹಿಸಲಾಗುತ್ತಿದೆ ಎಂದರು. ಇದೇ ವರ್ತನೆ ಮುಂದುವರಿದರೆ ದಂಡ ವಿಧಿಸದೆ ಲೈಸನ್ಸ್ ರದ್ದಿನಂತಹ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದರು.
ಆದ್ದರಿಂದ ಈ ನಿಟ್ಟಿನಲ್ಲಿ ಬಿಲ್ಡರ್ ಗಳು ಕಾರ್ಪೋರೇಟ್ ಜವಾಬ್ದಾರಿಯನ್ನು ಪ್ರದರ್ಶಿಸಬೇಕೆಂದರು.
ಪ್ರಭಾರ ಆಯುಕ್ತ ಶ್ರೀಕಾಂತ್ ರಾವ್, ಉಪ ಆಯುಕ್ತ ಅಭಿವೃದ್ಧಿ ಬಾಲಕೃಷ್ಣ ಉಪಸ್ಥಿತರಿದ್ದರು.