Friday, December 28, 2012

ಜೀವನಶಿಸ್ತು ವಿದ್ಯಾರ್ಥಿದೆಸೆಯಿಂದಲೇ ಆರಂಭ: ಜಿಲ್ಲಾಧಿಕಾರಿ

ಮಂಗಳೂರು, ಡಿಸೆಂಬರ್.28 :- ಜೀವನದಲ್ಲಿ ಶಿಸ್ತು ಆರಂಭವಾಗುವುದು ವಿದ್ಯಾರ್ಥಿ ದಿನಗಳಿಂದ. ವಿದ್ಯಾರ್ಥಿ ದೆಸೆಯಲ್ಲಿ ಕಲಿತದ್ದು ಜೀವನದುದ್ದಕ್ಕೂ ನಮ್ಮ ಜೊತೆ ಇರುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಹೇಳಿದರು.
ಇಂದು ಮುಲ್ಕಿಯ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ವಠಾರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ ಉದ್ಘಾಟಿಸಿ ಮಾತನಾಡುತ್ತಿದ್ದರು.
      ರೋವರ್ಸ್-ರೇಂಜರ್ಸ್ ಸಮಾಗಮ, ಸ್ಕೌಟ್ಸ್-ಗೈಡ್ಸ್ ಮೇಳ ಮತ್ತು ಕಬ್ಸ್ -ಬುಲ್ಬುಲ್ಸ್ ಉತ್ಸವ 2012-2013 ಕಾರ್ಯಕ್ರಮ ಇಲ್ಲಿ ನಡೆಯುತ್ತಿದ್ದು, ತಮ್ಮ ವಿದ್ಯಾರ್ಥಿ ಜೀವನ ಸ್ಮರಿಸಿದ ಅವರು, ಅಂದು ಕಲಿತದ್ದು ಶಾಶ್ವತ ಎಂದರು. ಶಿಸ್ತು, ಸೇವೆ ಮತ್ತು ಮೌಲ್ಯಗಳನ್ನು ಸ್ಕೌಟ್ಸ್ ಕಲಿಸುತ್ತದೆ. ಜೀವನವನ್ನು ಧೈರ್ಯವಾಗಿ ಎದುರಿಸುವುದನ್ನು ಕಲಿಸುತ್ತದೆ ಎಂದ ಅವರು, ಎಲ್ಲ ಮಕ್ಕಳು ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಇಂತಹ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಶಾಸಕ  ಕೆ. ಅಭಯಚಂದ್ರ ಜೈನ್ ಅವರು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವುದರಿಂದ ಜೀವನದಲ್ಲಿ ಎತ್ತರಕ್ಕೇರಲು ಸಾಧ್ಯ. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳು ನಮ್ಮ ಜೀವನವನ್ನು ಅರಳಿಸುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ನ ಉತ್ತಮ ವಿದ್ಯಾರ್ಥಿಯಾಗಿದ್ದ ಡಾ. ವಿ. ಎಸ್ ಆಚಾರ್ಯ ಅವರು ಅತ್ಯುತ್ತಮ  ರಾಜಕೀಯ ಪಟುವಾಗಿದ್ದರು; ಅವರ ಪತ್ನಿ ಇಂದೂ ಈ ಸ್ಕೌಟ್ಸ್ ಜೊತೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂದರು. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಅವರು, ಶಿಸ್ತು ಮತ್ತೆ ಸೇವೆ ಪದಗಳು ಇಂದು ತಮ್ಮ ನೈಜ ಮೌಲ್ಯವನ್ನು ಕಳೆದುಕೊಂಡಿದ್ದು, ವಿದ್ಯಾರ್ಥಿಗಳಿಂದ ಮಾತ್ರ ಇದರ ಮೌಲ್ಯವನ್ನು ಮತ್ತೆ ಎತ್ತಿ ಹಿಡಿಯಲು ಸಾಧ್ಯ. ಇಂತಹ ಅವಕಾಶಗಳನ್ನು ಬಳಸಿಕೊಂಡು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದರಿಂದ ಉತ್ತಮ ಜೀವನ ನಮ್ಮದಾಗಲಿದೆ ಎಂದರು. ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆಯ ಸಂಚಾಲಕರಾದ  ಹರೀಶ್ಚಂದ್ರ ವಿ ಕೋಟ್ಯಾನ್ ಅತಿಥಿಗಳಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ ನ ಜಿಲ್ಲಾ ಮುಖ್ಯ ಆಯುಕ್ತರಾದ  ಎನ್ ಜಿ ಮೋಹನ್, ಜಿಲ್ಲಾ ಆಯುಕ್ತರಾದ ರಾಮಶೇಷ ಶೆಟ್ಟಿ, ವಾಸುದೇವ ಬೋಳೂರು, ಎಂ ಪ್ರಭಾಕರ್ ಭಟ್ ವೇದಿಕೆಯಲ್ಲಿದ್ದರು. ಸರ್ವೋತ್ತಮ್ ಅಂಚನ್ ವಂದಿಸಿದರು.