Tuesday, December 18, 2012

'ಮಗುವಿಗೆ ಪೌಷ್ಠಿಕ ಆಹಾರ ಸದೃಢ ಸಮಾಜಕ್ಕೆ ಆಧಾರ'

ಮಂಗಳೂರು, ಡಿಸೆಂಬರ್.18: ಆರೋಗ್ಯವಂತ ಶಿಶು ಸಮಾಜದ ಸಂಪತ್ತು. ಬೆಳೆಯುವ ಈ ಸಿರಿಗಳನ್ನು ಮೊಳಕೆಯಲ್ಲೇ ಜೋಪಾನ ಮಾಡಿ ಸದೃಢವಾಗಿ ಬೆಳೆಸುವುದು ಸಾಮಾಜಿಕ ಜವಾಬ್ದಾರಿ ಜೊತೆಗೆ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಕೂಡ ಆಗಿದೆ.
       ಮಾನವ ಶರೀರದ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಠಿಕ ಆಹಾರ ಬಹು ಮುಖ್ಯವಾಗಿದ್ದು, ಪೋಷಕಾಂಶಗಳ ಕೊರತೆ ಅಂಗವಿಹೀನತೆಯನ್ನು ಉಂಟು ಮಾಡುತ್ತದೆ. ಸರಿಯಾದ ಪ್ರಮಾಣದಲ್ಲಿ ಪೌಷ್ಠಿಕ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ ಶರೀರವು ಸಾಮಾನ್ಯವಾದ ರೀತಿಯಲ್ಲಿ ಬೆಳವಳಿಗೆಯಾಗುವುದಿಲ್ಲ. ಇದರಿಂದ ಮಗು ಜನಿಸಿದಾಗ ಕಡಿಮೆ ತೂಕವನ್ನು  ಹೊಂದಿರುತ್ತದೆ ಹಾಗೂ ಮಗು ಬೆಳೆಯುತ್ತಾ ವಯಸ್ಸಿಗೆ ತಕ್ಕ ತೂಕವನ್ನು ಹೊಂದಿರದಿಲ್ಲದಿರುವುದು ಅಪೌಷ್ಠಿಕತೆಯ ಮುಖ್ಯ ಲಕ್ಷಣ. ಮಾಂಸಖಂಡಗಳು ಬಲಹೀನವಾಗಿ ಮಗು ತೆಳ್ಳಗಾಗುತ್ತದೆ ಅಥವಾ ಮಾಂಸ ಮೂಳೆಗೆ ಅಂಟಿಕೊಂಡಿರುತ್ತದೆ. ಹೊಟ್ಟೆಯು ದಪ್ಪವಾಗಿ ಎದ್ದು ಕಾಣುತ್ತದೆ. ಮಗುವಿಗೆ ಯಾವ ಚಟುವಟಿಕೆಯಲ್ಲೂ ಆಸಕ್ತಿ ಇರುವುದಿಲ್ಲ. ವಯಸ್ಸಿಗೆ ತಕ್ಕ ಬೆಳವಣಿಗೆ ಇರುವುದಿಲ್ಲ. ಕೂದಲು ಕಂದು ಬಣ್ಣಕ್ಕೆ ತಿರುಗಿರುತ್ತದೆ. ತೀವ್ರ ಬಲಹೀನತೆ, ಪಾದ ಹಾಗೂ ಮುಖದಲ್ಲಿ ಊತ, ಅತಿಸಾರ ಭೇದಿ ಕಾಣಿಸಿಕೊಳ್ಳುತ್ತಿರುತ್ತದೆ.
ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗು ರಕ್ತಹೀನತೆಯಿಂದ ಬಳಲುತ್ತಿದ್ದು ರೋಗ ನಿರೋಧಕ ಶಕ್ತಿ ಕುಂಠಿತವಾಗಿರುತ್ತದೆ. ಅತಿಸಾರ, ವಾಂತಿ, ನ್ಯುಮೊನಿಯಾ ಸೋಂಕುಗಳು ಮಗುವಿನಲ್ಲಿ ಪದೇ ಪದೇ ಕಾಣಿಸಿಕೊಳ್ಳಬಹುದು. ಬಡತನ, ಆರೋಗ್ಯ ಶಿಕ್ಷಣ ಕೊರತೆ, ಲಿಂಗ ತಾರತಮ್ಯ, ಬಾಲ್ಯ ವಿವಾಹ ಹಾಗೂ ಎಳೆಯ ವಯಸ್ಸಿನಲ್ಲಿ ಗರ್ಭಧಾರಣೆ, ಸಮರ್ಪಕವಾಗಿ ಎದೆಹಾಲು ಉಣಿಸದೇ ಇರುವುದು, ಪೂರಕ ಪೌಷ್ಠಿಕ ಆಹಾರವನ್ನು ನೀಡದೇ ಇರುವುದು, ಸ್ವಚ್ಛತೆ ಅನುಸರಿಸದಿರುವುದು, ಮಗು ಹುಟ್ಟಿದ ಅರ್ಧಗಂಟೆಯೊಳಗೆ ಮೊದಲ ಎದೆಹಾಲನ್ನು ಕುಡಿಸದೇ ಇರುವುದು. ಪೂರಕ ಪೌಷ್ಠಿಕ ಆಹಾರವನ್ನು ಮಗುವಿಗೆ 6 ತಿಂಗಳಾದ ನಂತರ ತಕ್ಷಣ ಪ್ರಾರಂಭಿಸದೇ ಇರುವುದು  ಮುಖ್ಯ ಕಾರಣಗಳಾಗಿರುತ್ತದೆ.
   ಮಗು ಹುಟ್ಟಿದ ಅರ್ಧ ಗಂಟೆ ಯೊಳಗೆ ಮೊದಲ ಎದೆ ಹಾಲನ್ನು ಕುಡಿ ಸುವು ದರಿಂದ ಹಾಲಿ ನಲ್ಲಿ ರುವ ಕೊಲೆ ಸ್ಟ್ರಮ್ ನಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಆರು ತಿಂಗಳು ಎದೆಹಾಲು ನೀಡುವುದರಿಂದ ಯಾವುದೇ ಸೋಂಕು ಬಾರದಂತೆ ತಡೆಯಬಹುದು. ಆರು ತಿಂಗಳ ನಂತರ ಎದೆ ಹಾಲಿನ ಜೊತೆಗೆ ಪೂರಕ ಆಹಾರವಾದ ಬೇಳೆಯ ತಿಳಿ, ಹಣ್ಣಿನ ರಸ, ಚೆನ್ನಾಗಿ ಬೇಯಿಸಿದ ತರಕಾರಿ, ಇವುಗಳನ್ನು ನೀಡಬಹುದು. ಪೂರಕ ಆಹಾರದೊಂದಿಗೆ ಮಗುವಿವೆ 2 ವರ್ಷಗಳು ತುಂಬುವವರೆಗೆ ಎದೆಹಾಲು ಉಣಿಸುವುದು ಕಡ್ಡಾಯ. 5 ವರ್ಷಗಳು ತುಂಬುವವರೆಗೆ ಪ್ರತಿ ತಿಂಗಳು ತೂಕ ಮಾಡಿಸಿ ಮಗುವಿನ ತೂಕ ಹೆಚ್ಚಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.
ಅಪೌಷ್ಠಿಕತೆ ನಿವಾರಣೆಗೆ ಸರ್ಕಾರ ಸಮಗ್ರ ಪರಿಹಾರಕ್ರಮಗಳನ್ನು ಕೈಗೊಂಡಿದ್ದು, ಅಪೌಷ್ಠಿಕತೆಯನ್ನು ತೀವ್ರವಾಗಿ ಅನುಭವಿಸುತ್ತಿರುವ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪೌಷ್ಟಿಕ ಪುನರ್ವಸತಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ತೀವ್ರ ಅಪೌಷ್ಠಿಕ ಮಕ್ಕಳಿಗೆ ಪ್ರತಿ ದಿನ ರೂ. 6.90 ಮೌಲ್ಯದ ಪೂರಕಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ. ತುರ್ತು ಚಿಕಿತ್ಸೆಯ ಅಗತ್ಯವಿರುವ ಮಕ್ಕಳಿಗೆ ಬಾಲ ಸಂಜೀವಿ ಯೋಜನೆಯಡಿ ರಾಜ್ಯದ 15 ಆಸ್ಪತ್ರೆಗಳ ಮೂಲಕ ಗುರುತಿಸಿರುವ 18 ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.
ತೀವ್ರ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 4 ದಿನ ಮೊಟ್ಟೆ ಹಾಗೂ 2 ದಿನ 200 ಎಂ ಎಲ್ ಹಾಲನ್ನು, ಮೊಟ್ಟೆ ತಿನ್ನದ ಮಕ್ಕಳಿಗೆ ವಾರದಲ್ಲಿ 6 ದಿನ ಹಾಲನ್ನು ನೀಡಲಾಗುತ್ತದೆ. ತೀವೃ ಅಪೌಷ್ಠಿಕ ಮಕ್ಕಳ ವೈದ್ಯಕೀಯ ವೆಚ್ಚ ಯೋಜನೆಯಡಿ ಔಷಧಿ ಹಾಗೂ ಚಿಕಿತ್ಸೆಗೆ ಪ್ರತಿವರ್ಷ ಮಗುವಿಗೆ ರೂ. 750 ಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಹೆಚ್ಚಿನ ಮಾರ್ಗದರ್ಶನ ಪಡೆದುಕೊಳ್ಳ ಬಹುದು.