Monday, February 1, 2010

ಸೇನೆಯ ರಾಷ್ಟ್ರೀಯ ಭಾವೈಕ್ಯತಾ ಜಾಥಾ ಮಂಗಳೂರಿಗೆ

ಮಂಗಳೂರು, ಫೆ,1: ರಾಷ್ಟ್ರೀಯ ಭಾವೈಕ್ಯತೆ ಸಾರುವ ನಿಟ್ಟಿನಲ್ಲಿ ಭಾರತೀಯ ಸೇನಾಪಡೆ ಹಮ್ಮಿಕೊಂಡಿದ್ದ ಮೋಟರ್ ಸೈಕಲ್ ಸಾಹಸ ಯಾತ್ರೆಗೆ ಇಂದು ಮಂಗಳೂರಿನಲ್ಲಿ ಸ್ವಾಗತ ನೀಡಲಾಯಿತು.ಭಾರತೀಯ ಸೇನಾಪಡೆಯ ಆರ್ಟಿಲರಿ ರೆಜಿಮೆಂಟಿನ ಸಂಸ್ಮರಣಾ ಅಂಗವಾಗಿ ಈ ಮೋಟರ್ ಸೈಕಲ್ ಜಾಥಾವನ್ನು ಆಯೋಜಿಸಲಾಗಿದೆ. ದೇಶದ ನಾಲ್ಕು ಮೂಲೆಗಳಾದ ಚಂಡೀಗಡ, ಹೈದ್ರಾಬಾದ್, ಕೊಹಿಮ ಮತ್ತು ಪೂಂಚ್ ಪ್ರದೇಶಗಳಿಂದ ಜನವರಿ 22 ರಿಂದ ನಾಲ್ಕು ತಂಡಗಳು ಏಕ ಕಾಲದಲ್ಲಿ ಮೋಟರ್ ಸೈಕಲ್ ಜಾಥಾವನ್ನು ಆರಂಭಿಸಿದ್ದುವು. ದಕ್ಷಿಣ ಭಾರತದ ಹೈದ್ರಾಬಾದಿನಿಂದ ಹೊರಟ ಬೈಸನ್ ವಿಭಾಗದ ಗನ್ನರ್ಸ್ ಆಫ್ ಬೈಸನ್ ತಂಡ ಇಂದು ಮಂಗಳೂರಿಗೆ ತಲುಪಿದ್ದು, ಮತ್ತೆ ಗೋವಾದತ್ತ ಪ್ರಯಾಣ ಬೆಳೆಸಿತು. ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರು ಬೈಕ್ ಜಾಥಾದ ತಂಡಕ್ಕೆ ಶುಭ ಹಾರೈಸಿ ಹಸಿರು ನಿಶಾನೆ ತೋರಿಸಿ ಬೀಳ್ಕೊಟ್ಟರು. ಫೆಬ್ರವರಿ 5 ರಂದು ಎಲ್ಲಾ 4 ತಂಡಗಳು ದೇಶದ ನಾನಾ ಕಡೆಗಳಿಂದ ಸಂಗ್ರಹಿಸಿದ ಪವಿತ್ರ ಮಣ್ಣಿನೊಂದಿಗೆ ನಾಸಿಕ್ ತಲುಪಿ ಈ ಮೋಟರ್ ಸೈಕಲ್ ಸಾಹಸ ಜಾಥಾ ಸಮಾಪನಗೊಳ್ಳಲಿದೆ ಎಂದು ಬೈಕ್ ಜಾಥಾ ತಂಡದ ನಾಯಕ ಮೇಜರ್ ಎ.ಕೆ. ಸಿಂಗ್ ಮಾಹಿತಿ ನೀಡಿದರು.