Thursday, February 25, 2010

24 ಗ್ರಾಮ ಪಂಚಾಯತ್ ಕಟ್ಟಡಗಳಿಗೆ ತಲಾ 16.50 ಲಕ್ಷ ರೂ. ಬಿಡುಗಡೆ

ಮಂಗಳೂರು,ಫೆ.25:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಗ್ರಾಮಪಂಚಾಯಿತಿಗಳಿಗೆ ತಲಾ 15ಲಕ್ಷ ರೂ.ವೆಚ್ಚದಲ್ಲಿ ಗ್ರಾಮಪಂಚಾಯಿತಿ ಕಟ್ಟಡ ನಿರ್ಮಿಸಲು ಹಾಗೂ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸೇವಾ ಕೇಂದ್ರ ನಿರ್ಮಾಣ ಮಾಡಲು 1.50ಲಕ್ಷದಂತೆ ಒಟ್ಟು 16.50ಲಕ್ಷ ರೂ.ಗಳಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ 22ನೇ ಸಾಮಾನ್ಯ ಸಭೆಯಲ್ಲಿ ಈ ಮಾಹಿತಿಯನ್ನು ನೀಡಲಾಯಿತಲ್ಲದೆ, ರಾಜ್ಯದ 103 ಗ್ರಾಮಪಂಚಾಯಿತಿಗಳಿಗೆ ಒಟ್ಟು 17 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಮ್ತಾಡಿ,ಸರಪಾಡಿ,ಕರಿಯಂಗಳ, ಪಜೀರು,ಅಲಿಕೆ- ಬೆಳ್ತಂಗಡಿಯ ಆಳದಂಗಡಿ,ಅರಸಿನಮಕ್ಕಿ,ಚಾರ್ಮಾಡಿ,ತಣ್ಣೀರುಪಂತ,ಹೊಸಂಗಡಿ. ಪುತ್ತೂರಿನ ಕನಿಯೂರು,ಬೆಟ್ಟಂಪಾಡಿ,ಬನ್ನೂರು,ಇಟ್ಟೂರು, ಆರ್ಯಾಪು. ಸುಳ್ಯದ ನೆಲ್ಲೂರು ಕೆಮ್ಮಾಜೆ,ಎಡಮಂಗಲ,ಅರಂತೋಡು ಆಲೆಟ್ಟಿ, ಅಜ್ಜಾವರ. ಮಂಗಳೂರಿನ ಕುಪ್ಪೆಪದವು,ಪಡುಮಾರ್ನಾಡು,ಪಾವೂರು,ಗುರುಪುರದಲ್ಲಿ ಗ್ರಾಮಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿದ್ದು,ಕರ್ನಾಟಕ ಭೂಸೇನಾ ನಿಗಮದ ಮುಖಾಂತರ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿದ್ಯುತ್ ವ್ಯತ್ಯಯ,50:54 ಅನುದಾನ,ಕುಡಿಯುವ ನೀರಿನ ಸಮಸ್ಯೆ, ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆ,ಅಕ್ರಮ ಮರಳುಗಾರಿಕೆ,ಕೊರಗರಿಗೆ ರಾಜ್ಯ ಸರ್ಕಾರ ನೀಡಿರುವ 5ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ತಲುಪಿಸುವ ಬಗ್ಗೆ ಸವಿವರ ಚರ್ಚೆಯಾಗಿ, ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರ ವಿತರಣೆಗೆ ಸಂಬಂಧಿಸಿದಂತೆ ಹೊಸ ನೀತಿ ಅಳವಡಿಸಲು ಮತ್ತು ಅಕ್ರಮ ಮರಳುಗಾರಿಕೆ ತಡೆಗೆ ಜಿಲ್ಲಾ ಪಂಚಾಯಿತಿ ನಿರ್ಣಯ ಅಂಗೀಕರಿಸಿತು.
ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆಯಲ್ಲಿ ಗ್ರಾಮೀಣರಿಗೆ ಅನ್ಯಾಯವಾಗುತ್ತಿದೆ ಎಂಬ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, 389 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಿಂದ 509 ಮೆಗಾವ್ಯಾಟ್ ಗಳಷ್ಟು ಹೆಚ್ಚು ವಿದ್ಯುತ್ ಪಡೆದು ಜನರಿಗೆ ವಿದ್ಯುತ್ ವಿತರಿಸಲು ಕ್ರಮಕೈಗೊಳ್ಳ ಲಾಗಿದೆ ಎಂದು ಉತ್ತರಿಸಿದರು.
ಜಿಲ್ಲೆಯಲ್ಲಿರುವ ಜಲ ವಿದ್ಯುತ್ ಯೋಜನೆ ಗಳಿಂದ 90 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಯಾಗುತ್ತಿದ್ದು, ಜೂನ್ ನಿಂದ ಅಕ್ಟೋಬರ್ ವರೆಗೆ ಮಾತ್ರ ಈ ಯೋಜನೆ ಗಳಿಂದ ವಿದ್ಯುತ್ ಪೂರೈಕೆ ಯಾಗುತ್ತದೆ ಎಂದರು. ಗ್ರಾಮೀಣ ಸಂಪರ್ಕ ಯೋಜನೆಯಡಿ 2008-09 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಮಂಗಳೂರಿನ ರಸ್ತೆ, ಸೇತುವೆ ಮತ್ತು ಕಿರುಸೇತುವೆ ಕಾಮಗಾರಿಗೆ 235 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಸ್ಥಾಯಿಸಮಿತಿ ಸದಸ್ಯರಾದ ವೆಂಕಟದಂಬೇಕೋಡಿ, ರಾಜಶ್ರೀ ಹೆಗಡೆ, ಸದಾನಂದ ಮಲ್ಲಿ ಉಪಸ್ಥಿತರಿದ್ದರು.