Thursday, February 4, 2010

ಮಾರ್ಚ್ 1 ರಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಜಾರಿ

ಮಂಗಳೂರು,ಫೆ.4:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44,276 ಬಿಪಿಎಲ್ ಕುಟುಂಬಗಳಿಗೆ,ಜಿಲ್ಲೆಯ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಸ್ಮಾರ್ಟ್ ಕಾರ್ಡ್ ಪಡೆದ ಬಿಪಿಎಲ್ ಕುಟುಂಬದ ಐವರು ಸದಸ್ಯರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಡಿ 30,000ರೂ.ಗಳವರೆಗೆ ಸಂಪೂರ್ಣ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಮಾರ್ಚ್ ಒಂದರಿಂದ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದರು.
ಈ ಸಂಬಂಧ ಇಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ ಡಿ ಜಿಲ್ಲೆಯಲ್ಲಿ ಕೈ ಗೊಂಡಿರುವ ಕಾರ್ಯಕ್ರಮಗಳನ್ನು ವಿವರಿಸಿದ ಅವರು, 2002ರಲ್ಲಿ ಗುರುತಿಸಲ್ಪಟ್ಟ ಕುಟುಂಬಗಳ ಸದಸ್ಯರಿಗೆ 2010 ಮಾರ್ಚ್ ನಿಂದ ಒಂದು ವರ್ಷ ಕಾಲ ಸಂಪೂರ್ಣ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ನೀಡುವುದಾಗಿ ಹೇಳಿದ ಅವರು, ಪ್ರತೀ ವರ್ಷ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ ಎಂದು ಹೇಳಿದರು.ಫೆಬ್ರವರಿ 8ರಿಂದ ಕಾರ್ಡ್ ವಿತರಣೆ ಆರಂಭಿಸಲಾಗುವುದು ಎಂದ ಅವರು, ವೈದ್ಯಕೀಯ ಸೌಲಭ್ಯ ಪಡೆಯಲು ಆಸ್ಪತ್ರೆಗೆ ಬರುವವರಿಗೆ ಸಾರಿಗೆ ವೆಚ್ಚವಾಗಿ 100 ರೂ. ಭತ್ಯೆಯನ್ನು ನೀಡಲಾಗುವುದು. ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದ್ದು, ಉಚಿತ ಮತ್ತು ಉತ್ತಮ ಸೇವೆಗೆ ಸಿದ್ಧತೆ ಮಾಡಲಾಗಿದೆ ಎಂದರು. 725ರೋಗಗಳಿಗೆ ಚಿಕಿತ್ಸೆ ನೀಡುವ ಅವಕಾಶವಿದ್ದು, ಅರ್ಹ ಫಲಾನುಭವಿಯ ಕುಟುಂಬವು ಸ್ಮಾರ್ಟ್ ಕಾರ್ಡ್ ಪಡೆಯುವ ಸಂದರ್ಭದಲ್ಲಿ ರೂ.30 ನೋಂದಣಿ ಶುಲ್ಕ ಪಾವತಿಸಬೇಕಾಗಿರುತ್ತದೆ ಹಾಗೂ ಕಾರ್ಡ್ ನೀಡುವ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳ ಹೆಬ್ಬೆಟ್ಟಿನ ಗುರುತನ್ನು ಮತ್ತು ಫೋಟೋಗಳನ್ನು ಪಡೆಯಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ಮಂಗಳೂರು ತಾಲೂಕಿನಲ್ಲಿ ಫೆ.8 ರಿಂದ 20 ರವರೆಗೆ ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ಲಗತ್ತಿಸಿರುವ ವೇಳಾ ಪಟ್ಟಿಯಂತೆ ಸ್ಮಾರ್ಟ್ ಕಾರ್ಡ್ ವಿತರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಇತರ ತಾಲೂಕುಗಳಲ್ಲಿ ಈ ಕಾರ್ಯಕ್ರಮ ಮುಂದುವರಿಯಲಿದೆ.
ಬಿಪಿಎಲ್ ಪಟ್ಟಿಯಿಂದ ಕೈಬಿಟ್ಟು ಹೋದ ಬಡ ಕುಟುಂಬಗಳು ವಾರ್ಷಿಕ 450 ರೂ. ಪಾವತಿಸಿ ಫ್ಯಾಮಿಲಿ ಕಾರ್ಡ್ ಪಡೆದು ಕೊಳ್ಳುವ ಬಗ್ಗೆ ವಿಮಾ ಕಂಪೆನಿ ಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದೂ ಜಿಲ್ಲಾಧಿಕಾರಿಗಳು ತಿಳಿಸಿದರು. ಕೇಂದ್ರ ಸರ್ಕಾರ ಶೇ.75 ರಷ್ಟು ಮತ್ತು ರಾಜ್ಯ ಸರ್ಕಾರ ಶೇ.25 ರಷ್ಟು ವೆಚ್ಚ ಭರಿಸುತ್ತಿದ್ದು, ಯೋಜನೆಯನ್ನು ಆನ್ ಲೈನ್ ಮೂಲಕ ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು. ವಿಮಾ ಕಂಪೆನಿಯಾದ ಮೆ.ನ್ಯಾಷನಲ್ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್ ಆಯ್ಕೆ ಮಾಡಿದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆಯಬಹುದಾಗಿದ್ದು, ವೆನ್ ಲಾಕ್ ಆಸ್ಪತ್ರೆ ಸೇರಿದಂತೆ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲೂ ಫಲಾನುಭವಿಗಳಿಗಾಗಿ ಪ್ರತ್ಯೇಕ ಸೌಲಭ್ಯ ಒದಗಿಸಲಾಗುತ್ತದೆ. ಇದಕ್ಕಾಗಿ ಜಿಲ್ಲಾ ಮಟ್ಟದ ಆರ್ ಎಸ್ ಬಿ ವೈ ಅನುಷ್ಙಾನ ಸಮಿತಿ ರಚಿಸಲಾಗಿದ್ದು, ಜಿಲ್ಲಾಧಿಕಾರಿಗಳು ಅಧ್ಯಕ್ಷರು ಮತ್ತು ಸಹಾಯಕ ಕಾರ್ಮಿಕ ಆಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಈ ಸಂಬಂಧ ಹೆಚ್ಚಿನ ಮಾಹಿತಿಗೆ ಆರ್ ಎಸ್ ಬಿ ವೈ ನ ಜಿಲ್ಲಾ ಕಿಯೋಸ್ಕ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ, ಕರ್ನಾಟಕ ಬಿಲ್ಡಿಂಗ್ ಬೆಂದೂರವೆಲ್, ಕಂಕನಾಡಿ ದೂ.ಸಂ. 0824- 2437479 ಇಲ್ಲಿ ಸಂಪರ್ಕಿಸಬಹುದು. ಟೋಲ್ ಫೀ ನಂ. 1800-425-9778 ಸಂಪರ್ಕಿಸಬಹುದಾಗಿದೆ. ಪತ್ರಿಕಾಗೋಷ್ಟಿಯಲ್ಲಿ ಹೆಚ್ಚುವರಿ ಕಾರ್ಮಿಕ ಆಯುಕ್ತ ಮತ್ತು ಆರ್ ಎಸ್ ಬಿ ವೈ ನ ಸಿಇಒ ಎಸ್.ನರಸಿಂಹಯ್ಯ, ಎನ್ ಐಸಿಯ ರೀಜನಲ್ ಮ್ಯಾನೇಜರ್ ಜಾರ್ಜ್, ಆರ್ ಎಸ್ ಬಿ ವೈ ನ ನೋಡಲ್ ಅಧಿಕಾರಿ ಅಪ್ಪಯ್ಯ ಶಿಂದಿಹಟ್ಟಿ ಉಪಸ್ಥಿತರಿದ್ದರು.