Tuesday, May 21, 2013

'ಆದ್ಯತೆ ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ'

ಮಂಗಳೂರು, ಮೇ 21: ಜಿಲ್ಲೆಯಲ್ಲಿ ಕುಡಿಯುವ ನೀರು, ಅಂಗವಿಕಲರ ಅಭಿವೃದ್ಧಿ ಮತ್ತು ಎಂಡೋಪೀಡಿತರ ಪ್ರದೇಶದಲ್ಲಿ ಮೂಲಸೌಕರ್ಯ ಒದಗಿಸಲು ವಿಶೇಷ ಗಮನಹರಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೊರಗಪ್ಪ ನಾಯಕ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ) ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಗ್ರಾಮೀಣ ಪ್ರದೇಶಗಳ ಜನರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಜಲಸೇವಾ ನಿಯಂತ್ರಣದಂತಹ ಕ್ರಮ ಕೈಗೊಳ್ಳಲಾಗಿದ್ದರೂ, ಬೋರ್ವೆಲ್ ಕೊರೆಸುವಲ್ಲಿ ಹಾಗೂ ಕೊರೆಸಿದ ಬೋರ್ ವೆಲ್ ಗೆ ವಿದ್ಯುತ್ ಸಂಪರ್ಕ ಕೊಡಿಸಲು ಇನ್ನಷ್ಟು ಆಸಕ್ತಿಯಿಂದ ಕಾರ್ಯೋನ್ಮುಖವಾಗಬೇಕೆಂದರು.
ಬೆಳ್ತಂಗಡಿ ಮತ್ತು ಮಂಗಳೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಇಲ್ಲಿ ತುರ್ತಾಗಿ ಟ್ಯಾಂಕರ್ ಮೂಲಕವಾದರೂ ನೀರು ವಿತರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಿದೆ ಎಂದರು.
ಬೆಳ್ತಂಗಡಿಯ 60 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ಇಳಂತಿಲದಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು, ಟ್ಯಾಂಕರ್ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಕ್ರಿಯಾ ಯೋಜನೆಯಡಿ 18 ಬೋರ್ವೆಲ್ಗಳನ್ನು ಕೊರೆಯಲಾಗುತ್ತಿದೆ ಎಂದು ಬೆಳ್ತಂಗಡಿಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿದರು.
          ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ 19 ಲಕ್ಷ ರೂ. ಪುತ್ತೂರಿಗೆ 5.10 ಲಕ್ಷ ರೂ., ಮಂಗಳೂರಿಗೆ 6.40 ಲಕ್ಷ ರೂ. ಕುಡಿಯುವ ನೀರಿಗೆ ತುರ್ತು ಅನುದಾನ ನೀಡಲಾಗಿದೆ. ಅನುದಾನದಡಿ ಬಂಟ್ವಾಳದಲ್ಲಿ 26 ಬೋರ್ ವೆಲ್, ಪುತ್ತೂರಿನಲ್ಲಿ 9 ಬೋರ್ ವೆಲ್, ಸುಳ್ಯದಲ್ಲಿ 11, ಮಂಗಳೂರಿನಲ್ಲಿ 14 ಬೋರ್  ಕೊರೆದು ನೀರು ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಬೆಳ್ತಂಗಡಿ, ಮಂಗಳೂರು ಸೇರಿದಂತೆ ನೀರಿನ ಸಮಸ್ಯೆ ಇರುವಲ್ಲಿ ಭೂ ವಿಜ್ಞಾನಿಗಳ ಸಹಕಾರ ಪಡೆದು ತುರ್ತಾಗಿ ಬೋರ್ ವೆಲ್ ಗಳನ್ನು ಕೊರೆಯಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಧ್ಯಕ್ಷ ಕೊರಗಪ್ಪ ನಾಯ್ಕ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡುತ್ತಾ, ಅಪೌಷ್ಟಿಕ ಮಕ್ಕಳ ಸಂಖ್ಯೆ 662ರಿಂದ 650ಕ್ಕೆ ಇಳಿದಿದೆ. ಬೆಳ್ತಂಗಡಿಯಲ್ಲಿ 178 ಮಕ್ಕಳು, ಪುತ್ತೂರಿನಲ್ಲಿ 123, ಮಂಗಳೂರು ಗ್ರಾಮಾಂತರದಲ್ಲಿ 103 ಮಕ್ಕಳನ್ನು ಗುರುತಿಸಲಾಗಿದ್ದು, ಜೂನ್ ತಿಂಗಳಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಹೃದಯ ಸಂಬಂಧಿ ಕಾಯಿಲೆ ಇರುವ ಮಕ್ಕಳನ್ನು ಬಾಲಸಂಜೀವಿನಿಯಡಿ ಅಥವಾ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸೇರಿಸಲು ಕ್ರಮಕೈಗೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದರು.
1615 ಅಂಗನವಾಡಿಗಳಲ್ಲಿ 1,488 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, 127 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಬಾಕಿ ಇದೆ. 41 ಕಡೆ ಕಂಬದ ಸಮಸ್ಯೆ ಇದ್ದರೆ ಉಳಿದೆಡೆಯಲ್ಲಿ ಸ್ವಂತ ಅಂಗನವಾಡಿ ಕಟ್ಟಡಗಳಿಲ್ಲದೆ, ದುರಸ್ತಿಯಲ್ಲಿರುವೆಡೆ ವಿದ್ಯುತ್ ಸಂಪರ್ಕ ನೀಡಲಾಗಿಲ್ಲ. ಮುಂದಿನ ಕೆಡಿಪಿ ಸಭೆಯ ವೇಳೆಗೆ ಈ ವಿದ್ಯುತ್ ಸಂಪರ್ಕ ಸಂಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಶಾಲಾ ಕಟ್ಟಡಗಳ ಬಗ್ಗೆ, ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ನೀಡಿದ ಸರ್ವಶಿಕ್ಷಣ ಅಭಿಯಾನದ ಅಧಿಕಾರಿಗಳು, 13-14ನೇ ಸಾಲಿನಲ್ಲಿ 130 ಹೊಸ ಮಕ್ಕಳನ್ನು ಗುರುತಿಸಲಾಗಿದೆ. 63 ಮಕ್ಕಳಿಗೆ ಕಳೆದ ಸಾಲಿನಲ್ಲಿ ಟೆಂಟ್ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. 21 ಮಕ್ಕಳು ವಲಸೆ ಹೋಗಿದ್ದಾರೆ ಎಂದರು.
ಎರಡಕ್ಕಿಂತ ಹೆಚ್ಚಿನೆಡೆ ಪಿಡಿಒಗಳಿಗೆ ಕೆಲಸದ ಹೊಣೆ ಬೇಡ ಎಂದು ಸ್ಪಷ್ಟಪಡಿಸಿದ ಜಿಲ್ಲಾಪಂಚಾಯತ್ ಅಧ್ಯಕ್ಷರು, ಪಂಚಾಯತ್ ಕಾರ್ಯದರ್ಶಿ ಮತ್ತು ಪಿಡಿಒಗಳನ್ನು ನೇಮಿಸುವಾಗ ಹೆಚ್ಚಿನ ಅಸ್ಥೆ ವಹಿಸಿ ಅವರು ಕರ್ತವ್ಯ ನಿರ್ವಹಣೆಗೆ ಅನುಕೂಲವಾಗಿರಲಿ ಎಂದರು.
ಕಲ್ಗಣಿ ಗುತ್ತಿಗೆದಾರರಿಗೆ ಪಂಚಾಯಿತಿಯಿಂದ ಎನ್ ಒ ಸಿ ನೀಡುವಂತೆ ನಿರ್ಣಯ ತೆಗೆದುಕೊಳ್ಳಲು ಸಭೆ ನಿರ್ಧರಿಸಿತು. ಗಣಿಗಾರಿಕೆಯಿಂದ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂರ್ಣ ಹಾಳಾಗುತ್ತಿದ್ದು, 16 ಟನ್ ಗಿಂತ ಹೆಚ್ಚು ಭಾರ ಸಾಗಿಸುವ ವಾಹನಗಳ ವಿರುದ್ಧ ಕ್ರಮಕೈಗೊಳ್ಳುವಂತಾಗಬೇಕೆಂದು ಸಭೆ ನಿರ್ಣಯಿಸಿತು.
ಜನ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಅರ್ಜಿ ಬಂದಿಲ್ಲವೆಂಬ ಕಾರಣ ನೀಡಬಾರದೆಂದ ಅಧ್ಯಕ್ಷರು, ಅಂಗವಿಕಲರಿಗೆ, ಎಂಡೋ ಪೀಡಿತ ಪ್ರದೇಶಗಳಾದ ಕೊಕ್ಕಡ, ಚಿಬಿದ್ರೆ ಗಳಿಗೆ ಮೂಲಸೌಕರ್ಯ ಒದಗಿಸಿ. ಸಮಾಜ ಕಲ್ಯಾಣ ಇಲಾಖೆ ಹಾಗೂ ಐಟಿಡಿಪಿ ಇಲಾಖೆಯವರು, ಪರಿಶಿಷ್ಟ ಜಾತಿಯವರು ಸಂಗ್ರಹಿಸುವ ಸೀಗೆಪುಡಿ, ಜೇನು ಹಾಗೂ ಬುಟ್ಟಿಗಳಿಗೆ ಮಾರುಕಟ್ಟೆ ಒದಗಿಸುವ ಯತ್ನ ಮಾಡಬೇಕೆಂದರು. ಕಲ್ಲೇರಿಯಾದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ   ಆಶಾ ತಿಮ್ಮಪ್ಪ ಗೌಡ, ಉಪ ಕಾರ್ಯದರ್ಶಿ ಟಿ.ಎಂ. ಶಶಿಧರ್, ಮುಖ್ಯ ಯೋಜನಾಧಿಕಾರಿ ನಝೀರ್, ಯೋಜನಾ ನಿರ್ದೇಶಕರಾದ ಸೀತಮ್ಮ ಉಪಸ್ಥಿತರಿದ್ದರು.