Thursday, November 8, 2012

ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯ- ವನಿತಾ ತೊರವಿ


ಮಂಗಳೂರು, ನವೆಂಬರ್.08 :ಬಡತನ,ಅನಕ್ಷರತೆ,ಬಹುಸಂತಾನ ಇವೇ ಮೊದಲಾದ ಕಾರಣಗಳಿಂದ ಮಹಿಳೆಯರನ್ನು ಬಲವಂತವಾಗಿ ವೇಶ್ಯಾವಾಟಿಕೆಯಂತಹ ಅನೇಕ ಕೆಲಸಗಳಿಗೆ ದೂಡುತ್ತಿರುವುದು ಹಾಗೂ ಹೆಣ್ಣು ಮಕ್ಕಳನ್ನು ಮೋಸ ಮಾಡಿ ಅವರನ್ನು ಮಾರಾಟ ಮಾಡುತ್ತಿರುವುದು ಸೇರಿದಂತೆ ಮಹಿಳೆಯರು ಮಕ್ಕಳ ಶೋಷಣೆ ತಪ್ಪಿಸಲು ಸರ್ಕಾರದೊಂದಿಗೆ ಸಾರ್ವಜನಿಕರು ಸ್ಪಂದಿಸಿದರೆ ಮಾತ್ರ ಸಾಧ್ಯ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಸದಸ್ಯರಾದ ಶ್ರೀಮತಿ ವನಿತಾ ತೊರವಿ ತಿಳಿಸಿದ್ದಾರೆ.
              ಅವರು ನಿನ್ನೆ ಜಿಲ್ಲಾ ಬಾಲ ಭವನದಲ್ಲಿ ಆಯೋಜಿಸಿದ್ದ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ನಿವಾರಣೆ ಬಗ್ಗೆ ಜಿಲ್ಲಾ/ತಾಲೂಕು ಸಮಿತಿ ಸದಸ್ಯರು ಹಾಗೂ ಗ್ರಮಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ 3 ತಂಡಗಳ 6 ದಿನಗಳ ತರಬೇತಿಯಲ್ಲಿ ಪಾಲ್ಗೊಂಡಿದ್ದವರಿಗೆ ದೃಢೀಕರಣ ಪತ್ರ ವಿತರಿಸಿ ಮಾತನಾಡಿದರು.
         ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಕ್ಕಳ ಸಾಗಾಟ ದಿನೇದಿನೇ ಹೆಚ್ಚಾಗುತ್ತಿದ್ದು ಇದು ಸರ್ಕಾರ ಹಾಗೂ ಸಮಾಜ ಕಳವಳಪಡುವಂತಾಗಿದೆ ಎಂದ ಅವರು ಒಂದು ವರದಿ ಪ್ರಕಾರ ದೇಶದಲ್ಲಿ ವರ್ಷವೊಂದಕ್ಕೆ 9 ಸಾವಿರ ಮಕ್ಕಳು ಕಾಣೆಯಾಗುತ್ತಿದ್ದಾರೆ.5 ಲಕ್ಷಕ್ಕೂ ಹೆಚ್ಚು ಮಕ್ಕಳು ಹದಿಹರೆಯದ ಮನ್ನವೇ ವೇಶ್ಯಾ ವೃತ್ತಿಗೆ ಬಲವಂತವಾಗಿ ನೂಕಲ್ಪಡುತ್ತಿದ್ದಾರೆ. ಇವರಲ್ಲಿ ಶೇಕಡಾ 40 ರಷು ಮಕ್ಕಳು 12 ರಿಂದ 17 ವರ್ಷದೊಳಗಿನವರಾಗಿರುವುದು ದುರ್ದೈವದ ಸಂಗತಿ ಎಂದರು.
ತಮ್ಮ ನೆರೆಹೊರೆಯಲ್ಲಿ ಹೆಣ್ಣು ಮಕ್ಕಳಿಗೆ ಶೋಷಣೆಯಾಗುತ್ತಿದ್ದರೆ ,ಬಾಲಕಾರ್ಮಿಕರು ಕಂಡು ಬಂದಲ್ಲಿ ಮಹಿಳಾ ಸಹಾಯವಾಣಿಗಾಗಲೀ ಯಾ ಮಕ್ಕಳ ರಕ್ಷಣಾ ಸಮಿತಿಗೆ ತಿಳಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಇನ್ನು ಕೆಲವೇ ದಿನಗಳಲ್ಲಿ ಮಕ್ಕಳ ರಕ್ಷಣೆ ಕುರಿತು ವೆಬ್ ಸೈಟ್ ಆರಂಭಿಸಲಾಗುವುದು ಎಂದು ತಿಳಿಸಿ,ಮಕ್ಕಳ ರಕ್ಷಣೆಗೆ ಜಿಲ್ಲೆಯಲ್ಲಿ 41 ರಕ್ಷಣಾ ಗೃಹಗಳಿದ್ದು,ಇನ್ನೂ 11 ರಕ್ಷಣಾ ಗೃಹಗಳನ್ನು ಆರಂಭಿಸುವುದಾಗಿ ಅವರು ತಿಳಿಸಿದರು.
        ಸಭೆಯಲ್ಲಿ ಜಿಲ್ಲಾ ಮಹಿಳಾ ಮಕ್ಕಳ ರಕ್ಷಣಾ ಸಮಿತಿಯ ಶ್ರೀಮತಿ ಆಶಾ ನಾಯಕ್,ಲಾವಣ್ಯ ಶೆಟ್ಟಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶಕುಂತಳಾ ಮುಂತಾದವರು ಹಾಜರಿದ್ದರು.

  'ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಹಾನಿ ತಪ್ಪಿಸಿ'