Saturday, November 24, 2012

ದುರ್ಬಲವರ್ಗದ ಅಭಿವೃದ್ಧಿಗೆ ಒತ್ತುಕೊಡಿ: ಸಚಿವ ಸಿ ಟಿ ರವಿ


ಮಂಗಳೂರು. ನವೆಂಬರ್. 24: ಪರಿಶಿಷ್ಟ ಜಾತಿ ಮತ್ತು ವರ್ಗದವರ ಅಭಿವೃದ್ಧಿಗೆ ಮೀಸಲಾಗಿರುವ ಅನುದಾನವನ್ನು ಅವರ ಅಭಿವೃದ್ಧಿಗೆ ಬಳಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ. ರವಿ ಅವರು ಹೇಳಿದರು.
ದ.ಕ.ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ಇಂದು ನಡೆದ ಕೆಡಿಪಿ ತ್ರೈ ಮಾಸಿಕ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದ ಸಚಿವರು, ಜಿಲ್ಲೆ ಯಲ್ಲಿ ಕುಡಿಯುವ ನೀರಿಗೆ ತೊಂದರೆ ಯಾಗ ದಂತೆ ಯೋಜನೆ ರೂಪಿಸಿ. ಕಿಂಡಿ ಅಣೆಕಟ್ಟುಗಳನ್ನು, ಕಿರುಜಲ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಗಿಸಿ. ಇಒಗಳು ಪಿಡಿಒಗಳ ಮುಖಾಂತರ ದುರ್ಬಲ ವರ್ಗದವರ ವಸತಿಯೋಜನೆಗಳನ್ನು ನಿಗದಿತ ಗುರಿಯೊಳಗೆ ಮುಗಿಸಲು ಸೂಚನೆ ನೀಡಿ ಎಂದು ನಿರ್ದೇಶನ ನೀಡಿದರು.
ನಿವೇಶನ ರಹಿತರ ಪಟ್ಟಿ ಮಾಡಿ, ಕೊರಗ ಕುಟುಂಬಗಳು, ಪರಿಶಿಷ್ಟ ಜಾತಿ,ವರ್ಗದ ಕುಟುಂಬಗಳ ಬಗ್ಗೆ ಸಮಗ್ರ ಮಾಹಿತಿಯನ್ನಿರಿಸಿಕೊಂಡು ನಿವೇಶನ ರಹಿತರಿಗೆ ಸೂರು ಒದಗಿಸಲು ಆದ್ಯತೆ ನೀಡಿ ಎಂದು ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಲ್ಲಿ ಕುಡಿಯುವ ನೀರಿಗೆ 48.78 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಲಾಗಿದೆ. 526 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 236 ಕಾಮಗಾರಿಗಳಿಗೆ ಟೆಂಡರ್ ಮಾಡಲಾಗಿದೆ. ಕಳೆದ ಸಾಲಿನ 244 ಕಾಮಗಾರಿಗಳು ಸಂಪೂರ್ಣಗೊಂಡಿವೆ. ರಸ್ತೆ ಕಾಮಗಾರಿಗಳಿಗಾಗಿ 582 ಲಕ್ಷ ರೂ. ಗಳ ಯೋಜನೆ ಸಿದ್ಧವಾಗಿದೆ. ತುಂಡು ಗುತ್ತಿಗೆ ಮೂಲಕ ಜನವರಿ ಅಂತ್ಯದೊಳಗೆ ಹಲವು ಕಾಮಗಾರಿಗಳನ್ನು ಮುಗಿಸಲಿರುವೆವು ಎಂದು ಜಿಲ್ಲಾ ಪಂಚಾಯತ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸತ್ಯ ನಾರಾಯಣ ಸಭೆಗೆ ಮಾಹಿತಿ ನೀಡಿದರು.
ದೂರ ಮತ್ತು ಒಳನಾಡು ಪ್ರದೇಶಾಭಿವೃದ್ಧಿಗೆ ಮಂಜೂರಾಗಿರುವ 5 ಕೋಟಿ ರೂ. 22 ಕಾಮಗಾರಿಗಳು ಅನುಮೋದನೆಗೊಂಡು ಕಾಮಗಾರಿ ಆರಂಭಗೊಂಡಿವೆ. ಸುವರ್ಣಗ್ರಾಮ ಯೋಜನೆಯಡಿ 32 ಸುವರ್ಣಗ್ರಾಮಗಳು ಮಂಜೂರಾಗಿದೆ ಎಂದರು.
ಜಿಲ್ಲೆಯ ಎಂಟನೇ ತರಗತಿಯ 19,075 ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.                                                                          
ಅಡುಗೆ ಅನಿಲದ ಮೇಲಿನ ನಿರ್ಬಂಧದಿದಾಗಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ತಯಾರಿಸಲು ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನ ಅಥವಾ ಹೆಚ್ಚುವರಿ ಸಿಲಿಂಡರ್  ನೀಡುವ ಬಗ್ಗೆ ಕೆಡಿಪಿಯಲ್ಲಿ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ತಕ್ಷಣ ಪತ್ರ ಬರೆಯಲು ಸಚಿವರು ಸೂಚಿಸಿದರು.
2012-13ನೆ ಸಾಲಿನ ಸೆಪ್ಟಂಬರ್ ತಿಂಗಳವರೆಗಿನ ಪ್ರಗತಿ ವರದಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಯೋಜನೆ ಹಾಗೂ ಕಾಮಗಾರಿಗಳ ಪ್ರಗತಿಯಲ್ಲಿ ಸಾಧನೆ ಅಸಮಾಧಾನಕರ ಎಂದ ಅವರು, ಪಡಿತರ ಚೀಟಿ ಹೆಸರು ಸೇರ್ಪಡೆ ಮತ್ತು ಹೆಸರು ತೆಗೆಯುವುದು ಸೇರಿದಂತೆ ಪಡಿತರ ಚೀಟಿ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಯಿಂದ ಮಾಹಿತಿ ಪಡೆದ ಸಿ.ಟಿ. ರವಿ, ವಿತರಣೆಯ ಬಗ್ಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವರಿಗೆ ನೇರವಾಗಿ ಮೊಬೈಲ್ನಲ್ಲಿ  ಸಂಪರ್ಕಿಸಿದರು.
ಎಂಡೋಸಂತ್ರಸ್ತರ ಕುರಿತಂತೆ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎನ್.ಎಸ್. ಚನ್ನಪ್ಪ ಗೌಡ, ದ.ಕ. ಜಿಲ್ಲೆಯಲ್ಲಿ 5223 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಪರಿಹಾರಕ್ಕೆ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಇವರ ಆರೈಕೆಗಾಗಿ ಎರಡು ಕೇರ್ ಸೆಂಟರ್ ತೆರೆಯಲಾಗಿದ್ದು, ಶೀಘ್ರದಲ್ಲೇ ಮೊಬೈಲ್ ಯುನಿಟ್ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರಿನ ಸಮಸ್ಯೆಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಮೊದಲೇ ಪೂರ್ವ ಸಿದ್ಧತೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಹುಗ್ರಾಮ ಯೋಜನೆಯಡಿ ಬಂಟ್ವಾಳದಲ್ಲಿ 8, ಮಂಗಳೂರಿನಲ್ಲಿ ಉಳಾಯಿಬೆಟ್ಟು, ಉಳ್ಳಾಲ ಹಾಗೂ ಕುಪ್ಪೆಪದವು ಒಳಗೊಂಡು 3, ಪುತ್ತೂರಿನಲ್ಲಿ 1 ಹಾಗೂ ಸುಳ್ಯದಲ್ಲಿ ಆರು, ಬೆಳ್ತಂಗಡಿಯಲ್ಲಿ ಎರಡು ಬಹುಗ್ರಾಮ ಯೋಜನೆಗಳಿಗೆ ಮಂಜೂರಾತಿ ದೊರಕಿದೆ. ಕಿನ್ನಿಗೋಳಿಯ 16.8 ಕೋಟಿರೂ.ಗಳ ಬಹುಗ್ರಾಮ ಯೋಜನೆ 2013ರ ಜನವರಿಯೊಳಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು.
ಮಾಣಿ- ಮಡಿಕೇರಿ ರಸ್ತೆಯ ಒಟ್ಟು 40 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗೆ ಸಂಬಂಧಿಸಿ ಡಿಸೆಂಬರ್ ಅಂತ್ಯಕ್ಕೆ 10 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಉಳಿದ 30 ಕಿ.ಮೀ. ಹಾಗೂ ಸಂಬಂಧಪಟ್ಟ ಇತರ ಕಾಮಗಾರಿಗಳನ್ನು ಮೇ ತಿಂಗಳೊಳಗೆ ಅಂತಿಮಗೊಳಿಸಲಾಗುವುದು ಎಂದು ಕೆಆರ್ ಡಿಸಿಎಲ್ ನ ಅಧಿಕಾರಿ ಭರವಸೆ ನೀಡಿದರು.
      ಸಭೆಯಲ್ಲಿ ವಿಧಾನ ಸಭಾ ಉಪ ಸಭಾಪತಿ ಎನ್. ಯೋಗಿಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್,ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಅಧ್ಯಕ್ಷರಾದ ಕೊರಗಪ್ಪ ನಾಯ್ಕ, ಉಪಾಧ್ಯಕ್ಷ ರಿತೇಶ್ ಶೆಟ್ಟಿ ಉಪಸ್ಥಿತರಿದ್ದರು.