ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ

ಕೃಷಿಕರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆ ಇಲ್ಲ ಎಂದ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯಕ್ ಅವರು, 36,000 ಹೆಕ್ಟೇರ್ ಭತ್ತ ಬೆಳೆಯುವ ಗುರಿಯಡಿ 32,000 ಹೆ. ಭತ್ತ ಬೆಳೆಯಲಾಗಿದ್ದು, ಶೇಕಡ 97 ಸಾಧನೆ ದಾಖಲಿಸುವುದಾಗಿ ಹೇಳಿದರು. ಜಿಲ್ಲೆಯಲ್ಲಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಸುಫಲ 15:15:15 ಮತ್ತು ಇಫ್ಕೊದ 10:26:26 2,400 ಟನ್ ರಸಗೊಬ್ಬರದ ಬೇಡಿಕೆ ಇದೆ ಎಂದರು. ಸುವರ್ಣಭೂಮಿ ಯೋಜನೆಯಡಿ 709 ಅರ್ಜಿಗಳು ಸ್ವೀಕೃತವಾಗಿದ್ದು 600 ಅರ್ಜಿಗಳು ಅರ್ಹ ಎಂದು ಪರಿಗಣಿಸಲ್ಪಟ್ಟಿದೆ. 597 ರೈತರ ಖಾತೆಗೆ 17,95,293 ರೂ. ಹಣ ವರ್ಗಾವಣೆಯಾಗಿದೆ. ಉಳಿದವರಿಗೆ ಶೀಘ್ರವೇ ಪಾವತಿ ಮಾಡಲಾಗುವುದು ಎಂದ ಅವರು, ಕ್ಷೇತ್ರ ಮಟ್ಟದಲ್ಲಿ ಸಿಬ್ಬಂದಿ ಕೊರತೆಯಿರುವುದಾಗಿ ಹೇಳಿದರು. ರೈತ ಸಲಕರಣೆಗೆ ಸಬ್ಸಿಡಿ ನೀಡುವ ಭೌತಿಕ ಮತ್ತು ಆರ್ಥಿಕ ಗುರಿಯನ್ನು ಸಾಧಿಸಿ ಎಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಕೇರಳ ಪ್ಯಾಕೇಜ್ ಬಗ್ಗೆ ಕೃಷಿ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದ್ದು ಅದರ ಪ್ರತಿಯನ್ನು ಪಡೆದರು.
ಅಂಗನವಾಡಿಗಳಲ್ಲಿ ಆಹಾರ ಮತ್ತು ಕಟ್ಟಡಗಳ ಬಗ್ಗೆ ಮಾಹಿತಿ ಪಡೆದ ಕಾರ್ಯದರ್ಶಿಗಳು, 9,759 ಭಾಗ್ಯಲಕ್ಷ್ಮಿ ಫಲಾನುಭವಿಗಳಲ್ಲಿ 4000 ಫಲಾನುಭವಿಗಳಿಗೆ ಬಾಂಡ್ ನೀಡಲು ಬಾಕಿ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ವಿದ್ಯಾಂಗ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ್ ಅವರು ಹೇಳಿದರು ಹಾಗೂ ಜಿಲ್ಲೆಯ ಪ್ರಗತಿ ವರದಿ ನೀಡಿದರು. ತೋಟಗಾರಿಕೆ ಇಲಾಖೆಯ ಸಾಧನೆ ಸಾಲದು ಎಂದ ಕಾರ್ಯದರ್ಶಿಗಳು, ಕಳೆದ ಬಾರಿಯೂ ಇಲಾಖೆಯ ಪ್ರಗತಿ ಕುರಿತು ಸಾಕಷ್ಟು ಚರ್ಚೆಯಾದುದನ್ನು ಜ್ಞಾಪಿಸಿದರು. ಗುರಿ ಮತ್ತು ಸಾಧನೆಯಲ್ಲಿರುವ ವ್ಯತ್ಯಾಸಕ್ಕೆ ಕಾರಣ ಕೇಳಿದರು. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮುಂದಿನ ವರ್ಷ ಮುಗಿಯಲಿದ್ದು ಹೆಚ್ಚಿನ ಫಲಾನುಭವಿಗಳನ್ನು ಗುರುತಿಸಿ ರೈತರಿಗೆ ನೆರವಾಗಿ ಎಂದರು.
ಜೇನು ಕೃಷಿಕರಿಗೆ ನೆರವಾಗಿ; ಇಲಾಖೆಗೊಂದು ವಿಷನ್ ಇರಲಿ ಎಂದರು. ತೋಟಗಾರಿಕಾ ಇಲಾಖೆಯಿಂದ ತುಂಬೆ ಫಾರ್ಮ್ ನಲ್ಲಿ ನೀರಾ ಘಟಕಕ್ಕೆ, ಕದ್ರಿ ಪಾಕ್ರ್ ಅಭಿವೃದ್ಧಿಗೆ ಮಂಜೂರಾತಿಗೆ ಯೋಜನೆ ಸಲ್ಲಿಸಿದೆ ಎಂದು ಇಲಾಖೆಯ ಪ್ರಭಾರ ಉಪನಿರ್ದೇಶಕರು ಮಾಹಿತಿ ನೀಡಿದರಲ್ಲದೆ ಹಳದಿ ರೋಗಕ್ಕೆ ಪ್ಯಾಕೇಜ್ ನೀಡಿರುವ ಬಗ್ಗೆಯೂ ಹೇಳಿದರು.

ಪಡಿತರ ಇಲಾಖೆ ಗೊಂದಲ ನಿವಾರಿಸಿ ಸೂಕ್ತ ಕ್ರಮಕೈಗೊಳ್ಳಲು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದ ಕಾರ್ಯದರ್ಶಿಗಳು, ನರೇಗಾದ ಪ್ರಗತಿ ಬಗ್ಗೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಿಂದ ಮಾಹಿತಿ ಪಡೆದರು. ಮೀನುಗಾರರ ಡ್ರೆಜ್ಜಿಂಗ್ ಬೇಡಿಕೆಯನ್ನು ಇಲಾಖಾ ಉಪನಿರ್ದೇಶಕರು ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದರು. ಪಾಲಿಕೆಯ ಪ್ರಗತಿಯನ್ನು ಡಾ ಕೆ ಎನ್ ವಿಜಯಪ್ರಕಾಶ್ ವಿವರಿಸಿದರು.
ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಿಂದ ಕುಡಿಯುವ ನೀರು ಒದಗಿಸಲು ಕೈಗೊಂಡ ಬಗ್ಗೆ ಮಾಹಿತಿ ಕೇಳಿದಾಗ, ಕಳೆದ ಸಾಲಿನಲ್ಲಿ 746 ಕಾಮಗಾರಿಗಳಲ್ಲಿ 202 ಮಾತ್ರ ಸಂಪೂರ್ಣಗೊಂಡಿದ್ದು, ಅನುದಾನವೂ ಖರ್ಚಾಗಿಲ್ಲದಿರುವುದನ್ನು ಗಮನಿಸಿದ ಉಸ್ತುವಾರಿ ಕಾರ್ಯದರ್ಶಿಗಳು ಭೌತಿಕ ಮತ್ತು ಆರ್ಥಿಕ ಗುರಿ ಸಂಪೂರ್ಣಗೊಳಿಸದಿದ್ದರೆ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದರು. ಮಾಹಿತಿ ನೀಡಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಳವೂರು ನೀರಾವರಿ ಯೋಜನೆ ಪೂರ್ಣಗೊಳಿಸಲು ನಿರ್ಧರಿಸಿದ್ದರಿಂದ ಉಳಿದ ಯೋಜನೆಗಳ ಅನುಷ್ಠಾನ ವಿಳಂಬವಾಯಿತು ಎಂದರು.
ಪ್ರತೀ ಎರಡು ತಿಂಗಳಿಗೊಮ್ಮೆ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ. ತಾನು ನೇರವಾಗಿ ಎಲ್ಲರಿಗೂ ಲಭ್ಯವಿದ್ದು ಅಧಿಕಾರಿಗಳು ಸಮಸ್ಯೆ ಪರಿಹರಿಸಿಕೊಳ್ಳಬಹುದು. ಕಾಮಗಾರಿ ವಿಳಂಬ ಹಾಗೂ ಸಾಧನೆ ಕೊರತೆಗೆ ಕಾರಣ ನೀಡಬೇಡಿ ಎಂದೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ ಎಸ್ ರಾಮ್ ಪ್ರಸಾದ್ ಹೇಳಿದರು. ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.