Friday, April 9, 2010

ಸಾಗರ ಮೀನುಗಾರಿಕೆ ನೀತಿ ಪರಿಷ್ಕರಣೆ:ಸಚಿವ ಆನಂದ ಅಸ್ನೋಟಿಕರ್

ಮಂಗಳೂರು,ಏ.9:ರಾಜ್ಯ 300 ಕಿ.ಮೀ ಉದ್ದದ ಕರಾವಳಿ ತೀರ ಪ್ರದೇಶವನ್ನು 3 ಜಿಲ್ಲೆಗಳಲ್ಲಿ ಹೊಂದಿದ್ದು, ಸಾಂಪ್ರದಾಯಿಕ ಮೀನುಗಾರಿಕೆಯ ಪ್ರದೇಶಗಳಲ್ಲಿ ಇತರ ಚಟುವಟಿಕೆಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಆನಂದ ಅಸ್ನೋಟಿಕರ್ ಹೇಳಿದರು.
ಅವರಿಂದು ನಗರದ ಮೀನುಗಾರಿಕಾ ಅಭಿವೃದ್ದಿ ನಿಗಮದ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಗರ ಮೀನುಗಾರಿಕೆ ನೀತಿಯನ್ನು ಪರಿಷ್ಕರಿಸಿ, ಮೀನುಗಾರರಿಗೆ ಸಾಮಾಜಿಕ ಭದ್ರತೆ ಒದಗಿಸಲು ಆದ್ಯತೆ ನೀಡಲಾಗುವುದು ಎಂದರು. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮುಖಾಂತರ ಫಿಶ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಮೀನುಗಾರಿಕೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ಇಲ್ಲಿ ದೊರೆಯುವಂತೆ ಮಾಡಲಾಗುವುದು. ಕಡಲ ಮೀನು ಉತ್ಪಾದನೆಯಲ್ಲಿ 2009-10ನೇ ಸಾಲಿನಲ್ಲಿ 3 ಕೋಟಿ ರೂ. ಮೌಲ್ಯದ ಕಡಲ ಮೀನು ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ ಎಂದರು.ಕರಾವಳಿಯ ಪ್ರಮುಖ ಬಂದರುಗಳ ಅಭಿವೃದ್ಧಿಗೆ 198 ಕೋಟಿ ರೂ. ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದ ಸಚಿವರು, ಈ ಪ್ರಸ್ತಾವನೆಯಲ್ಲಿ ಮಂಗಳೂರು ಬಂದರಿನ 3ನೇ ಹಂತದ ಅಭಿವೃದ್ಧಿ ಕಾಮಗಾರಿಗೆ 65 ಕೋಟಿ ರೂ., ಮಲ್ಪೆ ಬಂದರು ಅಭಿವೃದ್ಧಿಗೆ 53 ಕೋಟಿ ರೂ., ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೀನುಗಾರಿಕಾ ಬಂದರಿನ 2ನೇ ಹಂತದ ಅಭಿವೃದ್ಧಿಗೆ 80 ಕೋಟಿ ರೂ., ವೆಚ್ಚದ ಯೋಜನೆ ರೂಪಿಸಲಾಗಿದೆ. ಬಂದರುಗಳಲ್ಲಿ ಹೂಳೆತ್ತುವ ಕಾಮಗಾರಿ ನಡೆಸಲಾಗಿದ್ದು, ಮೀನುಗಾರರ ಅನುಕೂಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿರುವುದನ್ನು ವಿವರಿಸಿದರು. ಸಾಂಪ್ರದಾಯಿಕ ಹಾಗೂ ಬಡ ಮೀನುಗಾರರಿಗೆ ರೂ.5000ಮೌಲ್ಯದ ಮೀನುಗಾರಿಕೆ ಸಲಕರಣೆಗಳ ಕಿಟ್ ಅನ್ನು ಉಚಿತವಾಗಿ ನೀಡುವ ಹೊಸ ಯೋಜನೆಯನ್ನು ಕಳೆದ ಸಾಲಿನಿಂದ ಆರಂಭಿಸಲಾಗಿದೆ ಎಂದ ಅವರು, ಮತ್ಸ್ಯ ಮಹಿಳಾ ಸ್ವಾವಲಂಬನಾ ಯೋಜನೆಯಡಿ ಪ್ರಪ್ರಥಮ ಬಾರಿಗೆ ರೂ. 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, 3 ಮಹಾ ಮಂಡಳಿಗಳ ಮೂಲಕ 2000 ಮಹಿಳಾ ಸ್ವಸಹಾಯ ಗುಂಪು ರಚಿಸಿ ತಲಾ ಗುಂಪಿಗೆ ರೂ.50,000 ದಂತೆ ಆವರ್ತಕ ನಿಧಿಯನ್ನು ಬಿಡುಗಡೆ ಮಾಡಲಾಗಿದೆ. ಮೀನುಗಾರಿಕಾ ಚಟುವಟಿಕೆಗೆ ಹಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಕ್ರಮಕೈಗೊಳ್ಳಲಾಗುವುದು ಎಂದರು. ಮಂಗಳೂರಿನಲ್ಲಿ ಮುಳುಗಿರುವ ನಾಲ್ಕು ಹಡಗುಗಳನ್ನು ತೆರವು ಗೊಳಿಸಲು ಗ್ಲೋಬಲ್ ಟೆಂಡರ್ ಕರೆದು ಸ್ಕ್ರಾಪ್ ಮಾಡಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಮುದ್ರ ಮೀನುಗಾರಿಕೆ ಜಂಟಿ ನಿರ್ದೇಶಕರಾದ ಗಂಗಾಧರ ವಿ.ಮಡಿಕೇರಿ, ಕೆಎಫ್ ಡಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ, ಮೀನುಗಾರಿಕೆ ನಿರ್ದೇಶಕರಾದ ಎಚ್.ಎಸ್.ವೀರಪ್ಪಗೌಡ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಾದ ಸುರೇಶ್ ಕುಮಾರ್, ಸಹಾಯಕ ನಿರ್ದೇಶಕ ಪಾರ್ಶ್ವನಾಥ್,ಮೀನುಗಾರಿಕಾ ನಿಗಮದ ಅಧ್ಯಕ್ಷ ರಾಮಚಂದ್ರ ಬೈಕಂಪಾಡಿ,ಕರ್ನಾಟಕ ಕರಾವಳಿ ಮೀನುಗಾರಿಕೆ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವಾಸುದೇವ ಬೋಳೂರು ಉಪಸ್ಥಿತರಿದ್ದರು.