
ಕಾರ್ಯಾ ಚರಣೆಯ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ನೀಡಿದ ಅವರು,160 ಪ್ರಯಾಣಿಕರು, 6 ಜನ ಪೈಲಟ್ ಹಾಗೂ ಸಹ ಪೈಲಟ್ ಸೇರಿ ಸಿಬ್ಬಂದಿ ವರ್ಗದವರಿದ್ದು ಇವರಲ್ಲಿ 8 ಜನರು ಗಾಯಗೊಂಡಿದ್ದಾರೆ.ಗಾಯ ಗೊಂಡವರನ್ನು ಮಾಯನ್ ಕುಟ್ಟು, ಉಮ್ಮರ್ ಫಾರೂಕ್, ಡಾ. ಸಬ್ರಿನಾ, ಕೃಷ್ಣನ್, ಪ್ರದೀಪ್, ಜೋಯಲ್ ಸಂತೋಷ್, ಮಹಮ್ಮದ್ ಉಸ್ಮಾನ್, ಅಬ್ದುಲ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಪ್ರಯಾಣಿಕರಲ್ಲಿ 66 ಕೇರಳೀಯರಿದ್ದು, 38 ಮೃತದೇಹವನ್ನು ಗುರುತಿಸಲಾಗಿದೆ ಎಂದು ಡಿ ಜಿ ಪಿ ಹೇಳಿದರು.

ಮೃತ ದೇಹಗಳನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ 109, ಕೆ ಎಂಸಿಯಲ್ಲಿ 6, ಎ.ಜೆಯಲ್ಲಿ 13, ಫಾ. ಮುಲ್ಲರ್ಸ್ ನಲ್ಲಿ 9, ಎಸ್ ಸಿ ಎಸ್ ನಲ್ಲಿ 3, ಕೆ.ಎಸ್ ಹೆಗ್ಡೆಯಲ್ಲಿ 8, ಯೆನಪೋಯದಲ್ಲಿ 4, ಕುಲಾಸೊದಲ್ಲಿ 4, ಸಿಟಿ ಆಸ್ಪತ್ರೆಯಲ್ಲಿ 2 ಮೃತದೇಹಗಳನ್ನು ಇರಿಸಲಾಗಿದೆ. ಇವರಲ್ಲಿ ಕ್ರಮವಾಗಿ 40,4, 7,2,1,4, ಕುಲಾಸೋದಲ್ಲಿ 2 ಮೃತದೇಹಗಳನ್ನು ವಾರೀಸುದಾರರು ಕ್ಲೈಮ್ ಮಾಡಿಕೊಂಡಿದ್ದು, ಕಾನೂನಿನ್ವಯ ವಾರೀಸುದಾರರಿಗೆ ಮೃತ ದೇಹ ನೀಡಲು ಹಾಗೂ ಮಾಹಿತಿ ನೀಡಲು ಜಿಲ್ಲಾಡಳಿತ ಸಂಪೂರ್ಣ ಕ್ರಮಕೈಗೊಂಡಿದೆ.
ಅಗ್ನಿಶಾಮಕದಳದ ಡಿಜಿ ಜೀಜಾ ಹರಿಸಿಂಗ್ ಅವರು ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯ ವಿವರ ನೀಡಿದರು.ಪತ್ರಿಕಾ ಗೋಷ್ಠಿಯಲ್ಲಿ ರೀಜನಲ್ ಕಮಿಷನರ್ ಜಯಂತಿ, ಐಜಿ ಗೋಪಾಲ್ ಹೊಸೂರ್, ನೋಡಲ್ ಅಧಿಕಾರಿ ಯೋಗೀಂದ್ರ ತ್ರಿಪಾಠಿ, ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಪೋಲಿಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಸೇರಿದಂತೆ ಎಲ್ಲ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದು, ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಗೆ ಮುನ್ನ ಮೃತರ ಗೌರವಾರ್ಥ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸಂಜೆ ಮುಖ್ಯಮಂತ್ರಿಗಳು ವೆನ್ ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ತೆರಳಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಅವರ ನೇತೃತ್ವದಲ್ಲಿ, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸತತವಾಗಿ ವೆನ್ಲಾಕ್ ನಲ್ಲಿ,ಮೃತಪಟ್ಟವರ ಸಂಬಂಧಿಗಳೊಂದಿಗೆ ಹಾಗೂ ನಗರದ ವಿವಿಧ ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸಿ ಜನರಿಗೆ ನೆರವಾಗುತ್ತಿದ್ದರು.
ರೈಲ್ವೇ ಸಚಿವ ಮುನಿಯಪ್ಪ ಸಂತಾಪ: ರೈಲ್ವೇ ಸಚಿವರಾದ ಮುನಿಯಪ್ಪ ಅವರು ದುರ್ಘಟನೆಯ ಬಗ್ಗೆ ಅತೀವ ಆಘಾತ ವ್ಯಕ್ಪಪಡಿಸಿದರಲ್ಲದೆ, ರೈಲ್ವೇ ಪೊಲೀಸರ ನೆರವು ಮತ್ತು ಕಾರ್ಯಕ್ಷಮತೆಯನ್ನು ಗುರುತಿಸಲಾಗಿದೆ ಎಂದರು.ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಮೃತ ಕುಟುಂಬಕ್ಕೆ ಸಹಾಯ ನೀಡುವ ಭರವಸೆಯನ್ನು ಅವರು ನೀಡಿದರು.