Wednesday, March 17, 2010

ದ್ವಿತೀಯ ಪಿಯುಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇದಾಜ್ಞೆ

ಮಂಗಳೂರು, ಮಾರ್ಚ್17:(ಕರ್ನಾಟಕ ವಾರ್ತೆ)- ಮಾರ್ಚ್ 18 ರಿಂದ 31 ರವರೆಗೆ ದ್ವಿತೀಯ ಪಿಯುಸಿ ಮಕ್ಕಳಿಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಸುಲಲಿತವಾಗಿ ನಡೆಯುಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶ ನೀಡಲಾಗಿದೆ.
ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಪವಿಭಾಗ ಮಟ್ಟದ ಜಾಗೃತದಳ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ಸಹಾಯಕ ಕಮಿಷನರ್ ನೇತೃತ್ವದಲ್ಲಿ ಜಾಗೃತದಳ ರಚಿಸಲಾಗಿದೆ. ತಲಾ ಮೂರು-ನಾಲ್ಕು ಪರೀಕ್ಷಾ ಕೇಂದ್ರಗಳಿಗೆ ಓರ್ವ ಗ್ರೂಪ್-ಎ ದರ್ಜೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಪರೀಕ್ಷ ಸಂಬಂಧ ಯಾವುದೇ ರೀತಿ ಸಮಸ್ಯೆಗಳಿದ್ದರೆ ಉಪನಿರ್ದೇಶಕರು ಪ.ಪೂ. ಶಿಕ್ಷಣ ಇಲಾಖೆ- 9845097753, ವಿಶೇಷ ಜಾಗೃತ ದಳ ಅಧ್ಯಕ್ಷರು -9448215402, ಜಿಲ್ಲಾಧಿಕಾರಿ ಕಚೇರಿ - 0824- 2220590. 2220584, 1077 (ಉಚಿತ ಕರೆ) ಮಾಡಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 45 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 29,168 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ ರೆಗ್ಯುಲರ್ 23,439, ಪುನರಾವರ್ತಿತ 2301, ಖಾಸಗಿ 3428 ಅಭ್ಯರ್ಥಿಗಳಿರುತ್ತಾರೆ. ಪರೀಕ್ಷಾ ಕೇಂದ್ರದ ಪೂರ್ಣ ಸಿದ್ಧತೆಯನ್ನು ಮಾರ್ಚ್ 17 ರಂದೇ ಮಾಡಲಾಗಿದೆ.