Tuesday, March 16, 2010

ಕನ್ನಡದ ಮುಕ್ತಮನಸ್ಕತೆ,ಉದಾರತನ ಐತಿಹಾಸಿಕ ಸತ್ಯ:ಪಾದೆಕಲ್ಲು ನರಸಿಂಹ ಭಟ್

ಮಂಗಳೂರು,ಮಾರ್ಚ್ 15:ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿರುವುದು ಇತ್ತೀಚೆಗಾದರೂ ಶಾಸ್ರ್ತೀಯ ಸ್ಥಾನವನ್ನು ಬಹಳ ಹಿಂದಿನಿಂದಲೇ ಕನ್ನಡ ಗಳಿಸಿದ್ದು ಕನ್ನಡದ ಕವಿರಾಜಮಾರ್ಗವೇ ಇದಕ್ಕೆ ಉತ್ತಮ ಉದಾಹರಣೆ ಎಂದು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷ ಪಾದೆಕಲ್ಲು ನರಸಿಂಹ ಭಟ್ ಹೇಳಿದರು.
ಇಂದು ನಗರದ ಪುರಭವನದ ರತ್ನಮ್ಮ ಹೆಗ್ಗಡೆ ವೇದಿಕೆಯಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಬಹುಭಾಷಾ ವಿದ್ವಾಂಸರಾದ ಪಾದೆಕಲ್ಲು ನರಸಿಂಹ ಭಟ್ಟರು, ಕನ್ನಡದ ಮುಕ್ತ ಮನಸ್ಕತೆ, ಉದಾರತನ ಕೊಡು-ಕೊಳ್ಳುವಿಕೆಯ ಬಗ್ಗೆ ಸವಿವರವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಸಾಮರಸ್ಯದಿಂದ ಕೂಡಿದ ಸಾಮಾಜಿಕ ಜೀವನವನ್ನು ತನ್ನ ಗುಣಲಕ್ಷಣಗಳಲ್ಲಿ ಸೇರಿಸಿಕೊಂಡಿರುವುದು ಗಮನೀಯ ಎಂದರು. ಕವಿ -ಋಷಿಗಳ ಸಮೀಕರಣ, ಕಾಳಿದಾಸನ ಶಾಕುಂತಲ ನಾಟಕದ ಅನುವಾದದ ಬಗ್ಗೆ ಸಂಸ್ಕೃತ -ಕನ್ನಡದೊಳಗಿನ ಸಂಬಂಧದ ಭಾಷಾ ಶಾಸ್ತ್ರಜ್ಞರ ವಿಶ್ಲೇಷಣೆಯ ಬಗ್ಗೆ,. ಕನ್ನಡವು ಇತರ ಭಾಷೆಗಳೊಂದಿಗೆ ಕೊಡುಕೊಳ್ಳುವಿಕೆಯ ಮೂಲಕ ಆರೋಗ್ಯಕರ ಬೆಳವಣಿಗೆ ನಡೆಸಿರುವುದನ್ನು ವಿಮರ್ಶಕರು ಒಪ್ಪಿಕೊಂಡ ಬಗ್ಗೆ ವಿವರಿಸಿದರು. ಇಂಗ್ಲಿಷ್ ಕಾರ್ಯದ ಸತ್ವವನ್ನು ಹೀರಿಕೊಂಡು ಕನ್ನಡ ಜಡಗೊಳ್ಳದಂತೆ ಮಾಡಿರುವುದು ಕನ್ನಡ ಕವಿಗಳ ಹಿರಿಮೆ ಎಂಬುದು ಸಮೀಕ್ಷೆಗಳಿಂದ ಸಾಬೀತಾಗಿದ್ದು, ಕನ್ನಡದವರು ಇತರ ಸೋದರ ಭಾಷೆಗಳವರೊಂದಿಗೆ ಆರೋಗ್ಯಕರವಾಗಿ ಬರೆಯುವುದರಲ್ಲಿಯೂ ಉತ್ತಮ ಹೆಸರು ಗಳಿಸಿರುತ್ತಾರೆ .ಪ್ರಸ್ತುತ ಯುಗವು ಗದ್ಯ,ಕಾದಂಬರಿ,ನಾಟಕ,ಸಣ್ಣಕತೆ ಇತ್ಯಾದಿ ಹೊಸ ಪ್ರಾಕಾರದ ಸಾಹಿತ್ಯ ಸೃಷ್ಟಿಯಿಂದ ಶ್ರೀಮಂತವಾಗಿದ್ದು, ದಕ್ಷಿಣ ಕನ್ನಡವನ್ನೇ ಲಕ್ಷಿಸುವುದಿದ್ದರೆ ಪಂಜೆ, ಶಿವರಾಮ ಕಾರಂತ,ಗೋವಿಂದಪೈ ಯಂತಹ ಕವಿಗಳು ಪ್ರಯೋಗಶೀಲತೆಯ ಮೂಲಕ ಸಾಹಿತ್ಯಕ್ಕೆ ಹೊಸ ಆಯಾಮವನ್ನೇ ನೀಡಿದ್ದಾರೆ ಎಂದರು.ಆಹೋರಾತ್ರಿ ನಡೆಯುವ ವಿಚಾರ ಗೋಷ್ಠಿಗಳಲ್ಲಿ ಪಂಡಿತ ಪರಂಪರೆಯ ಪುನರ್ ವ್ಯಾಖ್ಯಾನ ವಾಗಬೇಕಿದೆ ಎಂದ ಅವರು ಕನ್ನಡ ಕಾರ್ಯಕ್ಷೇತ್ರ ವಿಸ್ತಾರ ಗೊಳ್ಳಬೇಕಾದ ಅವಶ್ಯಕತೆಯ ಅರಿವು ಹೊಸ ತಲೆ ಮಾರಿನಲ್ಲಿ ಮೂಡಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷೀಯ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವಾ ಧ್ಯಕ್ಷರಾದ ಜೆ.ಕೃಷ್ಣ ಪಾಲೆಮಾರ್ ಅವರು, ರಾಜ್ಯ ಸರ್ಕಾರ ಸಾಹಿತ್ಯ,ಸಾಹಿತಿಗಳಿಗೆ ಹೆಚ್ಷಿನ ಪ್ರೋತ್ಸಾಹ ನೀಡುವ ಮೂಲಕ ಮನೆಮನೆಗಳಲ್ಲಿ ಕನ್ನಡ ಕಂಪನ್ನು ಹರಡಲು ನೆರವಾಗುತ್ತಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿದ್ದು, ಸರ್ಕಾರ 5 ಲಕ್ಷ ರೂ.ಗಳನ್ನು ನೀಡಿದೆ. ಮಂಗಳೂರು ಮಹಾನಗರಪಾಲಿಕೆ 2ಲಕ್ಷ ರೂ. ನೀಡಿದೆ ಎಂದರು. ಆಹೋರಾತ್ರಿ ಸಾಹಿತ್ಯ ಸಮ್ಮೇಳನದ ಮುಖೇನ ಕನ್ನಡವನ್ನು ಬೆಳೆಸುವ ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ಶುಭ ಹಾರೈಸಿದ ಅವರು,ಕನ್ನಡದ ಮೇಲೆ ಇತರ ಭಾಷೆಗಳ ದಾಳಿ ಜಾಸ್ತಿಯಾಗುತ್ತಿರುವ ಕ್ಲಿಷ್ಟ ಪರಿಸ್ಥಿತಿಯಲ್ಲಿ ಕನ್ನಡದ ಅಭಿವೃದ್ಧಿಗೆ, ಬೆಂಬಲಕ್ಕೆ ಸರ್ಕಾರ ನಿಂತಿದೆ ಎಂದರು.ಆಡಳಿತದಲ್ಲಿ ಕನ್ನಡ,ಎಲ್ಲೆಡೆ ಕನ್ನಡ ರಾರಾಜಿಸಲಿ, ಎಲ್ಲರಲ್ಲಿ ಈ ನಿಟ್ಟಿನಲ್ಲಿ ಜಾಗೃತಿ ಮೂಡಲಿ ಎಂದರು.ಹಿರಿಯ ಸಾಹಿತಿ ಪ್ರೊ.ಎಚ್.ಎಸ್.ವೆಂಕಟೇಶ ಮೂರ್ತಿ ಉದ್ಗಾಟನಾ ಭಾಷಣ ಮಾಡಿದರು.ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ದಿವ್ಯ ಸಾನಿಧ್ಯ ವಹಿಸಿದ್ದರು.15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಧ್ಜಜ ಹಸ್ಥಾಂತರಿಸಿ ಮಾತನಾಡಿದರು.ಶಾಸಕರಾದ ಯು ಟಿ ಖಾದರ್, ಎನ್.ಯೋಗೀಶ್ ಭಟ್ , ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪಾಲ್ಗೊಂ ಡಿದ್ದರು. ಮುಖ್ಯ ಅತಿಥಿಗಳಾಗಿ ಅಂಬಾತನಯ ಮುದ್ರಾಡಿ,ಎಸ್ ವಿ ಭಟ್ ,ಪ್ರೊ.ರಾಧಾಕೃಷ್ಣ ,ಮೇಯರ್ ರಜನಿ ದುಗ್ಗಣ್ಣ ಉಪಸ್ಥಿತರಿದ್ದರು.ಹರಿಕೃಷ್ನ ಪುನರೂರು ಪುಸ್ತಕಮಾಲೆ ಬಿಡುಗಡೆ ಮಾಡಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಸ್ವಾಗತಿಸಿ,ಆಶಯ ನುಡಿಗಳನ್ನಾಡಿದರು.ನಾಡಗೀತೆ ಮತ್ತು ರೈತಗೀತೆಯನ್ನು ಕೆನರಾ ಹೆಮ್ಮಕ್ಕಳ ಪ್ರೌಢಶಾಲಾ ವಿದ್ಯಾರ್ಥಿನಿಯರು ಹಾಡಿದರು.ಗಣೇಶ್ ಅಮೀನ್ ಸಂಕಮಾರ್ ವಂದಿಸಿದರು.ಉದ್ಘಾಟನ ಸಮಾರಂಭಕ್ಕೂ ಮುನ್ನ ನಗರದ ಬಂಟ್ಸ್ ಹಾಸ್ಟೆಲ್ ವ್ರತ್ತದಿಂದ ಸಮ್ಮೇಳನದ ನಡೆಯುವ ಪುರಭವನದ ವರೆಗೆ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಿತು.ಚೆಂಡೆ, ಕೊಂಬು- ಕಹಳೆಗಳಿದ್ದ ವಾದ್ಯ ಗೋಷ್ಟಿಗಳು ಮೆರವಣಿಗೆಯ ಉದ್ದಕ್ಕೂ ಕನ್ನಡ ಸಂಸ್ಕೃತಿಯ ಲೋಕವನ್ನು ಅನಾವರಣ ಗೊಳಿಸಿದವು. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.