Saturday, January 23, 2010

ವಾಹನಗಳ ಕೆಂಪು ದೀಪ ಪ್ರದರ್ಶನಕ್ಕೆ ಸರ್ಕಾರದ ಮಾರ್ಗಸೂಚಿ

ಮಂಗಳೂರು,ಜ.23: ಸರ್ಕಾರದ ನಿಯಮಾವಳಿಯ ಪ್ರಕಾರ 32 ಮಂದಿ ನಿರ್ದಿಷ್ಟ ಅತಿ ಗಣ್ಯ ಹಾಗೂ ಗಣ್ಯ ವ್ಯಕ್ತಿಗಳು ತಮ್ಮ ವಾಹನದಲ್ಲಿ ಕೆಂಪು ದೀಪ ಬಳಸಬಹುದು. ಕೆಂಪು ದೀಪ ಅಳವಡಿಸಲು ಅರ್ಹರಲ್ಲದ ಕೆಲವು ಅಧಿಕಾರಿಗಳು,ನಿಗಮ ಮಂಡಳಿಯ ಮುಖ್ಯಸ್ಥರು ತಮ್ಮ ವಾಹನಗಳ ಮೇಲೆ ಕೆಂಪು ದೀಪ ಅಳವಡಿಸುವುದರಿಂದ ರಸ್ತೆ ಸಂಚಾರ ನಿರ್ವಹಣೆಗೆ ತೊಂದರೆಯಾಗುವುದಲ್ಲದೆ, ಸಮರ್ಥವಾಗಿ ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಾದ ಕ್ರಮಕೈಗೊಂಡಿದ್ದು,ಕಡ್ಡಾಯವಾಗಿ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ.

ಅನಧಿ ಕೃತವಾಗಿ ಯಾವು ದಾದರೂ ನಿಗಮ ಮಂಡಳಿಯ ವಾಹನಗಳಿಗೆ ಅಥವಾ ಬಾಡಿಗೆ ನೆಲೆಯ ವಾಹನಗಳಿಗೆ ಇಲಾಖಾ ಅಧಿಕಾರಿಗಳು ಕೆಂಪು ದೀಪ ಅಳವಡಿಸಿಕೊಂಡಿದ್ದರೆ ಅವುಗಳನ್ನು ಕಳಚಿಡುವಂತೆ ಜಿಲ್ಲಾಡಳಿತ ಸೂಚಿಸಿದೆ. ಅನಧಿಕೃತ ವ್ಯಕ್ತಿಗಳು ಕೆಂಪು ದೀಪಗಳನ್ನು ವಾಹನಗಳ ಮೇಲೆ ಅಳವಡಿಸುವುದರಿಂದ ಭದ್ರತೆ ಒದಗಿಸಲು ಪೊಲೀಸರಿಗೆ ಹಾಗೂ ಸಾರಿಗೆ ಇಲಾಖೆಗೆ ಕಷ್ಟವಾಗುತ್ತಿದೆ.

ಆದ್ದರಿಂದ ಕ್ಯಾಬಿನೆಟ್ ಸಚಿವರು, ವಿಪಕ್ಷ ನಾಯಕರು, ರಾಜ್ಯಸಚಿವರು, ಸಂಸದರು, ಸಾರಿಗೆ ಕಮಿಷನರ್, ಸಹಾಯಕ ಕಮಿಷನರ್, ಸಹಾಯಕ ಪೊಲೀಸ್ ಅಧೀಕ್ಷಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ, ಕಸ್ಟಮ್ಸ್ ಕಮಿಷನರ್ ಇವರೆಲ್ಲ ಕೆಂಪು ದೀಪ ಅಳವಡಿಸಿದ ಕಾರಿನಲ್ಲಿ ಸಂಚರಿಸಬಹುದು. ಪೊಲೀಸ್ ಇಲಾಖೆ ಅಧಿಕೃತವಾಗಿ ಕೆಂಪು ದೀಪ ಬಳಸುವ ಕಾರುಗಳ ಪಟ್ಟಿ ಮಾಡಿದ್ದು, ಅನಧಿಕೃತ ಬಳಕೆ ಕಂಡುಬಂದರೆ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಚಾಲಕನೊಬ್ಬನೇ ಗಾಡಿಯಲ್ಲಿ ಹೋಗುವಾಗ ಕಾರಿನ ಮೇಲೆ ಕೆಂಪು ದೀಪ ಉರಿಯಬಾರದು. ಅದನ್ನು ಕಪ್ಪು ಬಟ್ಟೆಯಿಂದ ಮರೆಮಾಚಬೇಕು ಎಂದು ನಿಯಮದಲ್ಲಿ ಸ್ಪಷ್ಟ ಪಡಿಸಲಾಗಿದೆ.ನಿಯಮ ಮೀರಿದ ಚಾಲಕನಿಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಡಳಿತ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.