Tuesday, January 26, 2010

'ನಮ್ಮ ಪಡಸಾಲೆ' ಉದ್ಘಾಟನೆ

ಮಂಗಳೂರು,ಜ.26: ವಿಶೇಷವಾಗಿ ಅಂಗವಿಕಲರು ಮತ್ತು ಹಿರಿಯ ನಾಗರೀಕರು ಸರತಿಯ ಸಾಲಿನಲ್ಲಿ ನಿಲ್ಲುವ ಬವಣೆ ನಿವಾರಿಸಲು ಹಾಗೂ ನಾಗರೀಕರ ಅನುಕೂಲಕ್ಕಾಗಿ ರಾಜ್ಯದಲ್ಲೇ ಪ್ರಥಮ ಎಂಬಂತೆ 'ನಮ್ಮ ಪಡಸಾಲೆ' ಸೌಕರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೆಮಾರ್ ಅವರು ಇಂದು ಮಂಗಳೂರು ತಾಲೂಕು ಕಚೇರಿ ಆವರಣದಲ್ಲಿ ಉದ್ಘಾಟಿಸಿದರು.

ಶಾಸಕ ಯೋಗಿಶ್ ಭಟ್,ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಅಬೂಬಕ್ಕರ್,ನಗರ ಪಾಲಿಕೆ ಆಯುಕ್ತ ಡಾ. ವಿಜಯ ಪ್ರಕಾಶ್, ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ತಾಲೂಕು ಕಚೇರಿಯಲ್ಲಿ ನೀಡಲ್ಪಡುವ ಎಲ್ಲ ದಾಖಲೆ ಗಳನ್ನು ಮತ್ತು ಸೌಕರ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಒಂದೇ ಸೂರಿನಡಿಯಲ್ಲಿ ಅವಕಾಶವನ್ನು ನಮ್ಮ ಪಡಸಾಲೆಯಲ್ಲಿ ಕಲ್ಪಿಸಲಾಗಿದೆ.ಈ ವಿನೂತನ ವ್ಯವಸ್ಥೆಯಿಂದಾಗಿ ಅರ್ಜಿದಾರರು ದಾಖಲೆಗಳೊಂದಿಗೆ ಅರ್ಜಿ ನೀಡಿದ ತಕ್ಷಣ ಆದಾಯ ಮತ್ತು ಜಾತಿ ದೃಢೀಕರಣ ಪತ್ರ ನೀಡುವ ಹೊಸ ಶಕೆ ಆರಂಭಗೊಂಡಿದೆ. ಮಂಗಳೂರಿನ 3 ಗ್ರಾಮಗಳಲ್ಲಿ ಮತ್ತು ಬಂಟ್ವಾಳ ತಾಲೂಕಿನ 11 ಗ್ರಾಮಗಳಲ್ಲಿ ಒಟಿಸಿಎಸ್ (over the counter service)ವ್ಯವಸ್ಥೆ ಜಾರಿಗೆ ಬಂದಿದೆ.

ಜಿಲ್ಲೆಯ ಉಳಿದ ಭಾಗಗಳಲ್ಲಿ ಇವತ್ತಿನಿಂದ ಒಂದು ದಿವಸದಲ್ಲಿ ಆದಾಯ ಮತ್ತು ಜಾತಿ ಪತ್ರಗಳನ್ನು ನೀಡುವಂತೆ ವ್ಯವಸ್ಥೆ ಜಾರಿಗೆ ತಂದಿದೆ. ಅರ್ಜಿ ನೀಡಿದ ತಕ್ಷಣ ಲಭ್ಯವಾಗುವ ಆದಾಯ ಮತ್ತು ಜಾತಿ ದೃಢೀಕರಣ ಪತ್ರದ ಈ ಯೋಜನೆ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಮುಂದಿನ ಒಂದು ತಿಂಗಳಲ್ಲಿ ಲಭ್ಯವಾಗಲಿದೆ ಎಂದು ಈ ಸಮಾರಂಭದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ವಿವರಿಸಿದರು.