Monday, August 24, 2009

ದಾಖಲೆ ಪತ್ರ ಕ್ರಮಬದ್ಧ ಗೊಳಿಸಲು ಕ್ರಮ: ಜಿಲ್ಲಾಧಿಕಾರಿ


ಮಂಗಳೂರು,ಆ.24:ತಾಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ದಾಖಲೆ ಪತ್ರದ ಕ್ರಮಬದ್ಧ ಜೋಡಣೆ, ವಿಷಯ ಸೂಚಿ ಮತ್ತು ವರ್ಗೀಕರಣ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದ್ದು, ಆ.24 ಮತ್ತು 25ರಂದು ಸಾರ್ವಜನಿಕರ ಸೇವೆಯಲ್ಲಿ ವ್ಯತ್ಯಯವಾಗಲಿದ್ದು,ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಕೋರಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು,180ರಷ್ಟು ಗ್ರಾಮ ಲೆಕ್ಕಿಗರು ಕೇಂದ್ರ ಸ್ಥಾನದಲ್ಲಿ ಮೇಲ್ಕಂಡ ಕರ್ತವ್ಯದಲ್ಲಿ ನಿರತರಾಗಿದ್ದು,ಉತ್ತಮ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಈಗಾಗಲೇ ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಶೇ. 40ರಷ್ಟು, ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಶೇ.20ರಷ್ಟು ಕಾರ್ಯಪ್ರಗತಿಯಲ್ಲಿದೆ. ಮಂಗಳೂರು ತಾಲೂಕಿನಲ್ಲಿ 5 ಲಕ್ಷ ದಾಖಲೆಗಳಿದ್ದು ಇದರ ಸಮಗ್ರ ಹಾಗೂ ಸಮರ್ಪಕ ಜೋಡಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಏಶಿಯನ್ ಫಾರೆಸ್ಟ್:
ಏಶಿಯನ್ ಫಾರೆಸ್ಟ್ ಹಡಗಿನಿಂದ ತೈಲ ಸೋರದಂತೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅವಘಡಗಳು ಸಂಭವಿಸದಂತೆ ಕರಾವಳಿ ಗಸ್ತುಪಡೆ ಎಚ್ಚರ ವಹಿಸಿದ್ದು, ಡಿ ಜಿ ಶಿಪ್ಪಿಂಗ್ ಕಂಪೆನಿಯೊಂದಿಗೆ ನಿರಂತರ ಸಂಪರ್ಕವನ್ನಿರಿಸಿಕೊಳ್ಳಲಾಗಿದೆ. ಅವರು ಈ ಸಂಬಂಧ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದೂ ಜಿಲ್ಲಾಧಿಕಾರಿಗಳು ತಿಳಿಸಿದರು.