Friday, August 7, 2009

ಎಚ್ 1 ಎನ್ 1 ಜನರು ಭಯಭೀತರಾಗುವ ಅಗತ್ಯವಿಲ್ಲ: ಜಿಲ್ಲಾಧಿಕಾರಿ

ಮಂಗಳೂರು,ಆ.7:ದಕ್ಷಿಣ ಕನ್ನಡದಲ್ಲಿ ಇದುವರೆಗೆ ಎಚ್1 ಎನ್1ನ ಹತ್ತು ಪ್ರಕರಣಗಳಲ್ಲಿ 5 ಪಾಸಿಟಿವ್ ಎಂದು ವರದಿ ಬಂದಿದ್ದು,4 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ.ಈ ರೋಗದ ಬಗ್ಗೆ ಜನರು ಭಯಭೀತರಾಗುವ ಅಗತ್ಯವಿಲ್ಲ; ಈ ಸಂಬಂಧ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ರೋಗಿಗಳ ಶುಶ್ರೂಷೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ತಿಳಿಸಿದ್ದಾರೆ.
ನಗರದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆ ವೆನ್ ಲಾಕ್ ನಲ್ಲಿ ಶುಶ್ರೂಷೆ ನೀಡಲು ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಸರ್ಕಾರವೇ ರೋಗಿಗಳ ಶುಶ್ರೂಷೆಯ ಸಂಪೂರ್ಣ ವೆಚ್ಚವನ್ನು ಭರಿಸಲಿದೆ ಎಂದು ಅವರು ಇಂದು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ರೋಗಿಗಳಿಗೆ 24 ಗಂಟೆ ಸೇವೆ ನೀಡಲು ಡಾಕ್ಟರ್ ಗಳು ಹಾಗೂ ನರ್ಸ್ ಗಳಿದ್ದು, ಸೇವೆ ನೀಡುವ ಸಂದರ್ಭದಲ್ಲಿ ಅವರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ ಎಂದು ಅವರು ನುಡಿದರು.
ಇದಕ್ಕೂ ಮುಂಚೆ ನಡೆದ ಆರೋಗ್ಯ ಇಲಾಖಾಧಿಕಾರಿಗಳ ಹಾಗೂ ವಿವಿಧ ಮೆಡಿಕಲ್ ಕಾಲೇಜುಗಳ ಡಾಕ್ಟರ್ ಗಳ ಜೊತೆ ನಡೆದ ಸಭೆಯಲ್ಲಿ ರೋಗದ ಕುರಿತು ಹಾಗೂ ಈ ಸಂಬಂಧ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ರೋಗಕ್ಕೆ ಶುಶ್ರೂಷೆ ನೀಡುವವರ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಕುರಿತು ವಿವರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಮತ್ತು ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಯಾವುದೇ ಆಸ್ಪತ್ರೆಗಳಲ್ಲಿ ರೋಗ ಲಕ್ಷಣವಿರುವವರು ಚಿಕಿತ್ಸೆಗೆ ಆಗಮಿಸಿದರೆ ತಕ್ಷಣವೇ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ರವಾನಿಸಲೂ ಸಹ ಸಭೆಯಲ್ಲಿ ಸೂಚಿಸಲಾಯಿತು.