Monday, April 30, 2012

ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ವೇಳೆ ನಿಯಮ ಪಾಲಿಸಿ: ಜಿಲ್ಲಾಧಿಕಾರಿ

ಮಂಗಳೂರು, ಏಪ್ರಿಲ್. 30: ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನಕ್ಕೊಳಪಟ್ಟ ಖಾಸಗಿ ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನಡೆಯುವ ವಿದ್ಯಾರ್ಥಿ ಪ್ರವೇಶಾತಿ ಕುರಿತು ವೇಳಾಪಟ್ಟಿ ಹಾಗೂ ಇತರ ನಿಯಮಗಳ ಸಮರ್ಪಕ ಅನುಷ್ಠಾನ ಮಾಡಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಅವರು ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಎಲ್ಲ ಶಾಲೆಗಳ ಸಂಚಾಲಕರ ಮತ್ತು ಶಿಕ್ಷಣಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳ ದಾಖಲಾತಿಗೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಸುತ್ತೋಲೆಗಳನ್ನು ಎಲ್ಲಾ ಶಾಲೆಗಳ ವ್ಯವಸ್ಥಾಪಕ ಮಂಡಳಿಗಳಿಗೆ ಕಳುಹಿಸಿದ್ದು, ಗೆಜೆಟ್ ನೋಟಿಫಿಕೇಶನ್, ಶಿಕ್ಷಣ ವಾರ್ತೆಗಳಲ್ಲಿ, ಪತ್ರಿಕೆಗಳ ಮೂಲಕ ನಿಯಮ ಅಳವಡಿಸಲು ಸಾಕಷ್ಟು ಮಾಹಿತಿಗಳನ್ನು ನೀಡಲಾಗಿದೆ ಎಂದರು.
ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಸಂಬಂಧ ಸಭೆ ನಡೆಸಿ ಸರ್ಕಾರದ ನಿಯಮಗಳ ಪಾಲನೆಯಾಗಿರುವ ಬಗ್ಗೆ ಪರಿಶೀಲನೆ ನಡೆಸಬೇಕು; ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಪ್ರವೇಶ ಪ್ರಕ್ರಿಯೆಗಳು ಪೂರ್ಣವಾಗಿರಬೇಕು ಎಂದು ಸೂಚಿಸಿದರು.
ಕರ್ನಾಟಕ ಶಿಕ್ಷಣ ಕಾಯಿದೆ 1983ರ ಹಿನ್ನಲೆಯಲ್ಲಿ ರಚಿತವಾದ ಕರ್ನಾಟಕ ಎಜುಕೇಶನಲ್ ಇನ್ಸ್ಟಿಟ್ಯೂಷನ್ಸ್ (classification, regulation and prescription of curricula, etc) Rule 199 ಮತ್ತು ಸರ್ಕಾರದ ಅಧಿಸೂಚನೆ ಇವುಗಳಲ್ಲದರ ಉಲ್ಲೇಖದಡಿ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶದಲ್ಲಿ ಪಾರದರ್ಶಕತೆಯಿಲ್ಲದಿರುವುದು ಮತ್ತು ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಸಂಗ್ರಹಿಸುತ್ತಿರುವ ವಿಷಯ ವಿವಿಧ ವೇದಿಕೆಗಳಲ್ಲಿ ಸಾರ್ವಜನಿಕ ಚರ್ಚೆಯ ವಸ್ತುವಾಗಿದೆ. ಈ ಸಂಬಂಧ ಸರ್ಕಾರ/ಇಲಾಖೆ ಖಚಿತ ನಿರ್ದೇಶನವನ್ನು ನೀಡಿದೆ. ಆದಾಗ್ಯೂ ಅಲ್ಲಲ್ಲಿ ದೂರುಗಳು ಸ್ವೀಕೃತವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಪ್ರವೇಶಾತಿ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಅನುದಾನಿತ ಶಾಲೆಗಳು ಮತ್ತು ಅನುದಾನರಹಿತ ಶಾಲೆಗಳಲ್ಲಿ ವಸೂಲಿ ಮಾಡಬಹುದಾದ ಗರಿಷ್ಠ ಶುಲ್ಕ ವಿವರ ಮತ್ತು ಕ್ರಮಗಳ ಬಗ್ಗೆ ಸುತ್ತೋಲೆಯನ್ನು ಹೊರಡಿಸಿತ್ತು. ಈ ನಿಯಮಗಳನ್ನು ಅನುಷ್ಠಾನಕ್ಕೆ ತನ್ನಿ ಎಂದು ಜಿಲ್ಲಾಧಿಕಾರಿಗಳು ವ್ಯವಸ್ಥಾಪನ ಮಂಡಳಿಯ ಸಂಚಾಲಕರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ, ಸಾರ್ವಜನಿಕ ಶಿಕ್ಷಣಾಧಿಕಾರಿ ಮೋಸೆಸ್ ಜಯಶೇಖರ್ ಉಪಸ್ಥಿತರಿದ್ದರು.