Friday, September 13, 2013

ಎಪಿಎಲ್ ಕುಟುಂಬಕ್ಕೂ ಆರೋಗ್ಯ ಶ್ರೀ: ಖಾದರ್

ಮಂಗಳೂರು,ಸೆಪ್ಟೆಂಬರ್.13: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 12 ಆಸ್ಪತ್ರೆಗಳನ್ನು ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಆರೋಗ್ಯ ಸೌಲಭ್ಯಗಳನ್ನು ನೀಡಲು ಆರಿಸಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಸುವರ್ಣ ಸುರಕ್ಷಾ ಆರೋಗ್ಯ ಟ್ರಸ್ಟ್ ಮೂಲಕ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
 ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಯೋಜನೆಯ ಮೂಲಕ ಎಪಿಎಲ್ ಕುಟುಂಬದ ಸದಸ್ಯರು, ಶಿಕ್ಷಕರು, ಮಧ್ಯಮ ವರ್ಗ ಹಾಗೂ ಸರಕಾರಿ ನೌಕರ ವೃಂದಕ್ಕೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದರು. ಮೈಸೂರು, ರಾಯಚೂರು ಮತ್ತು ಮಂಗಳೂರಿನಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುವುದು. ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಮುಂದುವರಿದ ಭಾಗವಾಗಿ ಈ ಯೋಜನೆ ಜಾರಿಯಾಗುತ್ತಿದೆ ಎಂದರು.
ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ, ಅಪಘಾತ, ನವಜಾತ ಶಿಶುಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಸಂಬಂಧಿಸಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದ 147 ಆಸ್ಪತ್ರೆಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ..
ಯೋಜನೆಯ ಕುರಿತು ಮಾಹಿತಿ ನೀಡಲು ಪ್ರತಿ ಆಸ್ಪತ್ರೆಯಲ್ಲಿ `ಆರೋಗ್ಯ ಮಿತ್ರ' ಕೌಂಟರ್ ಇರಲಿದ್ದು ಅವರು ಸೇವೆಯ ಕುರಿತು ಅರ್ಹ ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ನೆರವು ನೀಡಲಿರುವರು. ಚಿಕ್ಕಮಗಳೂರು, ಮಂಗಳೂರು ಮತ್ತು ಕೊಡಗಿನಲ್ಲಿ ಈಗಾಗಲೇ 70 ಆರೋಗ್ಯ ಮಿತ್ರರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ ಸಚಿವರು, ಆರೋಗ್ಯ ಸೇವೆಯಿಂದ ಯಾರೂ ವಂಚಿತವಾಗಬಾರದು. ಆದ್ದರಿಂದ ರಾಜ್ಯದ ಪ್ರತಿಯೊಬ್ಬರೂ ಯಾವುದಾದರೊಂದು ಆರೋಗ್ಯ ಕಾರ್ಡು ಹೊಂದಿರುವಂತೆ ಆದ್ಯತೆ ನೀಡಲಾಗಿದೆ ಎಂದರು.
ಎಂಡೋ ಪಾಲನಾ ಸಮಿತಿಗೆ  ರೂ.50 ಲಕ್ಷ
ಎಂಡೋ ಪೀಡಿತರ ಸಮಸ್ಯೆಯನ್ನು ಬಗೆಹರಿಸಲು ಸರಕಾರ ಬದ್ಧವಾಗಿದೆ. ಈಗಾಗಲೇ ಎರಡು ಪಾಲನಾ ಸಮಿತಿಗಳಿಗೆ ಎಂಡೋ ಪೀಡಿತರ ವಾಷರ್ಿಕ ನಿರ್ವಹಣೆಗಾಗಿ ತಲಾ ರೂ.25 ಲಕ್ಷ ಒದಗಿಸುತ್ತಿದ್ದು, ಇನ್ನು ಮುಂದೆ ತಲಾ ರೂ.50 ಲಕ್ಷ ನೀಡಲಾಗುವುದು ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸುವರ್ಣ ಸುರಕ್ಷಾ ಆರೋಗ್ಯ ಟ್ರಸ್ಟ್ ವಾಜಪೇಯಿ ಆರೋಗ್ಯ ಶ್ರೀ ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ ಸಿ ಬೋರೇಗೌಡ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಡಾ.ಎನ್.ರಮೇಶ್ ಉಪಸ್ಥಿತರಿದ್ದರು.
ಸೇವಾ ಮನೋಭಾವ ಬೆಳೆಸಿಕೊಳ್ಳಿ: ಆರೋಗ್ಯ ಮಿತ್ರ ತರಬೇತಿ ಉದ್ಘಾಟಿಸಿ ಆರೋಗ್ಯ ಸಚಿವರು
ಮಂಗಳೂರು: ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಬರುವ ರೋಗಿಗಳ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿ ಯೋಜನೆಗಳು ತಳ ಮಟ್ಟದ ಜನತೆಗೂ ತಲುಪುವಲ್ಲಿ `ಆರೋಗ್ಯ ಮಿತ್ರರು' ನೆರವಾಗಬೇಕು. ಆರೋಗ್ಯ ಮಿತ್ರರ ಉತ್ತಮ ಸೇವೆಯಿಂದ ಇಲಾಖೆಗೂ ಉತ್ತಮ ಹೆಸರು ಬರಲು ಸಾಧ್ಯ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ಆಶ್ರಯದಲ್ಲಿ ಶುಕ್ರವಾರ ನಗರದ ಐಎಂಎ ಸಭಾಂಗಣದಲ್ಲಿ ಏರ್ಪಡಿಸಿದ್ದ ವಾಜಪೇಯಿ ಆರೋಗ್ಯ ಶ್ರೀ ಜಿಲ್ಲಾ ವ್ಯವಸ್ಥಾಪಕ ಮತ್ತು ಆರೋಗ್ಯ ಮಿತ್ರ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಕರ್ತವ್ಯದ ಮಹತ್ವವನ್ನು ಅರಿತುಕೊಂಡು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸೇವಾ ಬದ್ಧತೆಯಿಂದ ಕೆಲಸ ಮಾಡಿದ್ದಲ್ಲಿ ಇಲಾಖೆ ಕೂಡ ಹೆಚ್ಚಿನ ಸವಲತ್ತು ಒದಗಿಸಲಿದೆ. ಸೇವೆಗೆ ಸೇರ್ಪಡೆಗೊಂಡ ಬಳಿಕ ತಮಗೆ ವೇತನ ಹೆಚ್ಚಿಸಿ, ಇನ್ನಷ್ಟು ಸವಲತ್ತು ನೀಡಿ ಎಂದು ಪ್ರತಿಭಟನೆಗೆ ಮುಂದಾಗಿ ಆರೋಗ್ಯ ಸೇವೆಯ ಮಹತ್ವವನ್ನು ಮರೆಯಬಾರದು.  ಸೇವೆಗೆ ಸೇರುವ ಮುನ್ನವೇ ಈ ಬಗ್ಗೆ ಯೋಚಿಸುವುದು ಒಳಿತು ಎಂದ ಸಚಿವರು, ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಸೇವೆ ಸಲ್ಲಿಸಲು ಸೇರ್ಪಡೆಯಾಗಿರುವ `ಆರೋಗ್ಯ ಮಿತ್ರರಿಗೆ ಸೂಚನೆ ನೀಡಿದರು.
ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಕುರಿತು ಆಸ್ಪತ್ರೆಗಳ ಪ್ರತಿ ಆರೋಗ್ಯ ಮಿತ್ರ ಕೌಂಟರ್ನಲ್ಲಿ ಫಲಕಗಳನ್ನು ಅಳವಡಿಸಬೇಕು. ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಯ ಸಮರ್ಪಕ ಮಾಹಿತಿ ಲಭ್ಯವಾಗಬೇಕು. ಆರೋಗ್ಯ ಮಿತ್ರರು ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಜನಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡಬೇಕು ಎಂದು ಸಚಿವರು ತಿಳಿಸಿದರು.