Thursday, September 12, 2013

ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಕಲಿಕೋತ್ಸವ


ಮಂಗಳೂರು,ಸೆಪ್ಟೆಂಬರ್.12: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡಲು ಕಲಿಕೋತ್ಸವ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ಕಲಿಕೆ ಹಾಗೂ ಕಲಿಕಾ ಖಾತರಿಯನ್ನು ಆಚರಿಸುವುದೇ ಕಲಿಕೋತ್ಸವ ಎಂದು ಯುವ ಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಇಂದು ನಗರದ ಗಾಂಧಿನಗರದ ಬಿಆರ್ ಸಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸರ್ವ ಶಿಕ್ಷಣ ಅಭಿಯಾನದಡಿ ಕೇಂದ್ರ ಸರ್ಕಾರ ನೀಡಿದ ಅನುದಾನದ ಸದ್ವಿನಿಯೋಗದಲ್ಲಿ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಎಂದು ಅವರು ನುಡಿದರು.
ಪರಿಣಾಮಕಾರಿ ಬೋಧನಾ, ಸ್ಪಷ್ಟ ಓದು, ಶುದ್ಧ ಬರಹ, ಸರಳ ಗಣಿತ, ಸಾಮಥ್ರ್ಯ ವಿಕಾಸ ಅಭಿವ್ಯಕ್ತಿಗೆ ಉತ್ತಮ ವೇದಿಕೆ, ವಿಶೇಷ ಕಲಿಕೆ ಸಾಧಿಸಿದ ಮಕ್ಕಳು ಇತರ ಮಕ್ಕಳಿಗೆ ಪ್ರೇರಣೆ ನೀಡುವಂತೆ ಸಮಾಜದ ಪ್ರೋತ್ಸಾಹ ಕಲಿಕೋತ್ಸವದ ಉದ್ದೇಶವಾಗಿದ್ದು, ವಿವಿಧ ಹಂತಗಳಲ್ಲಿ 1ರಿಂದ 5 ನೇ ತರಗತಿ ಹಾಗೂ 6ರಿಂದ 8ನೇ ತರಗತಿಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು.
ಸರ್ವ ಶಿಕ್ಷಣ ಅಭಿಯಾನದಡಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಮಂಗಳೂರು ಉತ್ತರ ವಲಯದಲ್ಲಿ 2012-13ನೇ ಸಾಲಿನಲ್ಲಿ ಮಂಗಳೂರು ಉತ್ತರ ವಲಯಕ್ಕೆ ಒಟ್ಟು 2,23,86,568 ರೂ.ಬಿಡುಗಡೆ ಮಾಡಲಾಗಿದ್ದು, 2,22,59,700 ರೂ.ಗಳನ್ನು ಬಳಕೆ ಮಾಡಿರುವ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಂಗಳೂರು ಉತ್ತರ ವಲಯಕ್ಕೆ ಸಂಬಂಧಿಸಿದಂತೆ ಅನುಷ್ಠಾನಗೊಂಡ ಕಾರ್ಯಕ್ರಮಗಳ ದಾಖಲೀಕರಣದ ಪ್ರತಿಯನ್ನು ಬಿಡುಗಡೆಗೊಳಿಸಿದ ಅವರು, ಪ್ರಸಕ್ತ ಸಾಲಿನಲ್ಲಿ 26 ಕೋ.ರೂ. ಬಂದಿದೆ ಎಂದರು. 1-8-2012ರಿಂದ ಮಂಗಳೂರು ತಾಲೂಕು ಮತ್ತು ಮಂಗಳೂರು ನಗರ ವಲಯದ ಶಾಲೆಗಳನ್ನು ಸಮಾನವಾಗಿ ವಿಂಗಡಿಸಿ ಮಂಗಳೂರು ಉತ್ತರ ವಲಯ ಮತ್ತು ಮಂಗಳೂರು ದಕ್ಷಿಣ ಎಂದು ನಾಮಕರಣ ಮಾಡಲಾಗಿದೆ. ಅದರಂತೆ ಮಂಗಳೂರು ಉತ್ತರ ವಲಯಕ್ಕೆ ಈ ಹಿಂದೆ ಇದ್ದ 200 ಶಾಲೆಗಳಿಗೆ ಬದಲಾಗಿ 117 ಶಾಲೆಗಳು ಮಂಗಳೂರು ತಾಲೂಕಿನಿಂದ ಉತ್ತರ ವಲಯಕ್ಕೆ ಸೇರ್ಪಡೆಗೊಂಡಿದೆ. ಇದರಿಂದಾಗಿ ಉತ್ತರ ವಲಯದಲ್ಲಿ ಒಟ್ಟು 317 ಶಾಲೆಗಳಿವೆ. ಇವುಗಳಲ್ಲಿ 102 ಸರಕಾರಿ, 85 ಅನುದಾನಿತ ಶಾಲೆಗಳು, ಉಳಿದವರು ಅನುದಾನರಹಿತ ಶಾಲೆಗಳಾಗಿದ್ದು, 15 ಕ್ಲಸ್ಟರ್ ಗಳಿವೆ. ಪ್ರತೀ ಕ್ಲಸ್ಟರ್ ಗಳಿಗೆ 20ರಿಂದ 25 ಶಾಲೆಗಳಿವೆ. ಇದರಿಂದ ಮಕ್ಕಳ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲು ಸಾಧ್ಯವಾಗಿದೆ ಎಂದರು.
ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಮೂಲ ಸೌಕರ್ಯವನ್ನು ಒದಗಿಸುವುದರ ಮೂಲಕ ಮಕ್ಕಳನ್ನು ಶಾಲೆಯತ್ತ ಪ್ರೇರೇಪಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಕರ ನೇಮಕ, ಅಕ್ಷರ ದಾಸೋಹ, ವಿದ್ಯಾರ್ಥಿ ವೇತನ, ಉಚಿತ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅಲ್ಲದೇ ಹೆಚ್ಚುವರಿ ಕೊಠಡಿ, ಶೌಚಾಲಯಗಳ ನಿರ್ಮಾಣ, ಆವರಣ ಗೋಡೆ ನಿರ್ಮಾಣ, ಕುಡಿಯುವ ನೀರು, ವಿದ್ಯುಚ್ಛಕ್ತಿ ವ್ಯವಸ್ಥೆ, ದುರಸ್ತಿ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದರು.
ಶಾಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಲಿಕಾ ಸಾಧನೆ ಆಗುತ್ತಿದೆಯೇ ಎನ್ನುವುದನ್ನೂ ದಾಖಲೀ ಕರಣ ಗೊಳಿಸಲಾಗುತ್ತಿದೆ. ಶಾಲಾ ಹಂತ, ಕ್ಲಸ್ಟರ್ ಹಂತ, ಬ್ಲಾಕ್ ಹಂತ ಹೀಗೆ ಮೂರು ಹಂತಗಳಲ್ಲಿ ಒಟ್ಟು 18 ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಪ್ರತಿ ಬ್ಲಾಕ್ ಗೆ 50,000 ರೂ.ದಂತೆ ಕ್ಲಸ್ಟರ್ಗಳಿಗೆ 30 ಸಾವಿರ ರೂ. ಬ್ಲಾಕ್ಗಳಿಗೆ 20 ಸಾವಿರ ರೂ.ಕಲಿಕೋತ್ಸವಕ್ಕೆ ಬಳಸಲಾಗುತ್ತಿದೆ ಎಂದರು.
ಶಾಸಕ ಜೆ.ಆರ್.ಲೋಬೋ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಜಯಂತಿ ಆಚಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ, ಕ್ಷೇತ್ರ ಸಮನ್ವಯಾಧಿಕಾರಿ ಪೀತಾಂಬರ ಉಪಸ್ಥಿತರಿದ್ದರು.