Friday, September 13, 2013

ಆಶಾ ಕಾರ್ಯಕರ್ತೆಯರ ಸಮಸ್ಯೆಯನ್ನು ಆಲಿಸಿದ ಆರೋಗ್ಯ ಸಚಿವರು

ಮಂಗಳೂರು, ಸೆಪ್ಟೆಂಬರ್ 13 : ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಆಶಾ ಕಾರ್ಯಕರ್ತರಿಗೆ ನೀಡುವ ಸಂಭಾವನೆಯಷ್ಟೇ ಮ್ಯಾಚಿಂಗ್ ಗ್ರ್ಯಾಂಟ್ ನ್ನು ರಾಜ್ಯ ಸರ್ಕಾರದಿಂದ ನೀಡಲು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರು ಹೇಳಿದರು.
ಅವರಿಂದು ಮಂಗಳೂರು ತಾಲೂಕು ಪಂಚಾಯಿತಿಯ ಸಾಮಥ್ರ್ಯ ಸೌಧದಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಲಾದ ತರಬೇತಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ಭರವಸೆ ನೀಡಿದರು.
ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಅರಿವು ತಮಗಿದ್ದು, ಇದು ಕೇಂದ್ರ ಸರ್ಕಾರದ ನೀತಿ ನಿರೂಪಣೆಯಡಿ ಬರುವುದರಿಂದ ರಾಜ್ಯ ಸರ್ಕಾರ ಪ್ರತ್ಯೇಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ; ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಆರೋಗ್ಯ ವ್ಯವಸ್ಥೆಯಲ್ಲಿ ಉತ್ತಮವಾಗಿದೆ. ಹಾಗಾಗಿ ದುಡಿದದ್ದಕ್ಕೆ ಸಂಭಾವನೆಯಡಿ  ಇಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಕೊಡುವ ಸಂಭಾವನೆ ಕಡಿಮೆ ಎಂಬುದನ್ನು ಸಚಿವರು ಒಪ್ಪಿಕೊಂಡರು.
ಈಗ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ರೋಗಿಗಳನ್ನು ಗುರುತಿಸಿ ಆಸ್ಪತ್ರೆಗೆ ಕರೆತರುವ ಆಶಾ ಕಾರ್ಯಕರ್ತೆಯರಿಗೆ 200ರೂ. ಅದರಲ್ಲೂ ರೋಗಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದರೆ ಇನ್ನೂ 100 ರೂ. ಅಧಿಕ ನೀಡಲು ಅವಕಾಶವಿದೆ. ಈ ಯೋಜನೆಯ ಉದ್ದೇಶ ಎಲ್ಲರಿಗೂ ಆರೋಗ್ಯ ಎಂದು ಸಚಿವರು ವಿವರಿಸಿದರು. ಆಶಾ ಕಾರ್ಯಕರ್ತೆಯರು ಎಪಿಎಲ್ ಕಾರ್ಡುಗಳಿಂದಾಗುತ್ತಿರುವ ತೊಂದರೆಯನ್ನು ಸಚಿವರ ಗಮನಕ್ಕೆ ತಂದಾಗ, ಈಗಾಗಲೇ ಸಮಸ್ಯೆ ತಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ಶೀಘ್ರವೇ ಹೊಸ ನೀತಿಯನ್ನು ಜಾರಿಗೆ ತರುವುದಾಗಿ ಹೇಳಿದರು.
ಸಮಸ್ಯೆಗಳನ್ನು ಲಿಖಿತವಾಗಿ ಬರೆದು ತಮಗೆ ನೀಡುವುದರಿಂದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯಲು ತಮಗೆ ಅನಕೂಲವಾಗಲಿದೆ. ಹಾಗಾಗಿ ಎಲ್ಲ ಸಮಸ್ಯೆಗಳನ್ನು ಬರಹ ರೂಪದಲ್ಲಿ ಕೊಡಿ ಎಂದು ಸಚಿವರು ಆಶಾ ಕಾರ್ಯಕರ್ತೆಯರಲ್ಲಿ ಹೇಳಿದರು.
ಸಚಿವರ ಜೊತೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎನ್ ಎಸ್ ಕರೀಂ ಉಪಸ್ಥಿತರಿದ್ದರು.