Thursday, May 17, 2012

ಪ್ರಾಕೃತಿಕ ವಿಕೋಪ: ಮುಂಜಾಗ್ರತಾ ಸಭೆ

ಮಂಗಳೂರು, ಮೇ.17 :- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಂದರ್ಭದಲ್ಲಿ ಎದುರಾಗುವ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸಮಗ್ರ ಯೋಜನೆಯನ್ನು ರೂಪಿಸಲು ಎಲ್ಲ ಅಧಿಕಾರಿಗಳ ಪೂರ್ವಸಿದ್ದತಾ ಸಭೆಯನ್ನು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ತಾಲೂಕು ಮಟ್ಟದಲ್ಲಿ ಈಗಾಗಲೇ ಸಿದ್ಧವಿರುವ ಕೈಪಿಡಿಯನ್ನು ಅಪ್ ಡೇಟ್ ಮಾಡಿ ಸೋಮವಾರ ದೊಳಗೆ ಮಾಹಿತಿ ಕೈ ಪಿಡಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲು ಎಲ್ಲ ತಹಸೀ ಲ್ದಾರ್ ರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ತಾಲೂಕು ಕೇಂದ್ರಗಳಲ್ಲಿ ಮತ್ತು ಮಹಾನಗರಪಾಲಿಕೆಯಲ್ಲಿ ಕಂಟ್ರೋಲ್ ರೂಮ್ ಸ್ಥಾಪಿಸಬೇಕು. ಕಂಟ್ರೋಲ್ ರೂಮ್ ನಲ್ಲಿ ಜನರಿಗೆ ನೀಡುವ ದೂರವಾಣ ಸಂಖ್ಯೆ  ನಿರಂತರವಾಗಿ ಎಂಗೇಜ್ ಬಾರದಿರಲು ಪ್ರತ್ಯೇಕವಾಗಿ ಒಳಬರುವ ಕರೆಗಳನ್ನು ಮಾತ್ರ ಸ್ವೀಕರಿಸುವ  ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ತುರ್ತು ಕಾರ್ಯಪಡೆ, ಸಮುದ್ರ ಕೊರೆತಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ಕುರಿತು ಹಾಗೂ ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳುವ ಕ್ರಮಗಳ ಕುರಿತು ಸಭೆ ಚರ್ಚಿಸಿತು. ಮರಗಳು ಬಿದ್ದು ಸಂಭವಿಸುವ ಅನಾಹುತಗಳ ನಿವಾರಣಾ ಕೆಲಸವನ್ನು ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ವಹಿಸಲಾಯಿತು. ಅರಣ್ಯ ಇಲಾಖೆ ಈ ಸಂದರ್ಭದಲ್ಲಿ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರಲ್ಲದೆ, ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಮೇ 25ರೊಳಗೆ ಇಂತಹ ಮರಗಳ ಬಗ್ಗೆ ಮಾಹಿತಿಯನ್ನು ಅರಣ್ಯ ಇಲಾಖೆಗೆ ಮುಂಚಿತವಾಗಿ ನೀಡಿ ಎಂದೂ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜನ, ಜಾನುವಾರು ಮೀನುಗಾರರ ರಕ್ಷಣೆಯ ಬಗ್ಗೆ ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಮಳೆಯಿಂದಾಗಿ ಮನೆಗಳಿಗೆ ಹಾನಿ ಸಂಭವಿಸಿದಾಗ ಜನರಿಗೆ ಉಪಕಾರವಾಗುವಂತೆ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳೂರು, ಬಂಟ್ವಾಳಗಳಲ್ಲಿ ಗಂಜಿಕೇಂದ್ರಗಳಿಗಾಗಿ ಶಾಲೆಯನ್ನು ಹಾಗೂ ಬಿಸಿಎಂ ಹಾಸ್ಟೆಲ್ ಗಳನ್ನು ಗುರುತಿಸಲು ತಹಸೀಲ್ದಾರ್ ಗಳಿಗೆ ಹಾಗೂ ಅನಾಹುತವನ್ನು ನಿರ್ವಹಿಸಲು ಅಗ್ನಿಶಾಮಕ ದಳದವರು ಸನ್ನದ್ದರಾಗಿರಬೇಕು ಎಂದರು.
ಕಳೆದ ಬಾರಿ ಮಳೆಗಾಲದಲ್ಲಿ ಹೊಸ್ಮಠದಲ್ಲಿ ಕೆ ಎಸ್ ಆರ್ ಟಿಸಿ ಬಸ್ ಅರ್ಧದಲ್ಲಿ ಶಾಲಾ ಮಕ್ಕಳು ಹಾಗೂ ಜನರನ್ನು ಇಳಿಸಿದ ಬಗ್ಗೆ ಸುಳ್ಯ ತಹಸೀಲ್ದಾರ್ ರು ಸಭೆಯ ಗಮನಸೆಳೆದಾಗ, ಅಲ್ಲಿನ ಬಸ್ ಚಾಲಕರ ಸಭೆ ಕರೆದು ಅಮಾನವೀಯವಾಗಿ ವರ್ತಿಸದಂತೆ ಸೂಚಿಸಲು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದರು.ಕೃಷಿ,ತೋಟಗಾರಿಕೆ ಹಾನಿ ಬಗ್ಗೆಯೂ ಅಧಿಕಾರಿಗಳು ಗಮನಹರಿಸಬೇಕು; ರಸ್ತೆ ಗುಂಡಿಗಳಿಂದಾಗಿ ಮಳೆಗಾಲದಲ್ಲಿ ಅಪಘಾತಗಳು ಸಂಭವಿಸದಂತೆ ಲೋಕೋಪಯೋಗಿ ಇಲಾಖೆ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಹಾನಗರಪಾಲಿಕೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ವಿವರಿಸಿದರೆ, ಎಲ್ಲ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಗ್ರಾಮಪಂಚಾಯತ್ ಗಳಿಗೆ ಚರಂಡಿ ಸ್ವಚ್ಛಗೊಳಿಸುವಂತೆ ಸೂಚನೆ ನೀಡಲು ಜಿಲ್ಲಾಧಿಕಾರಿಗಳು ಹೇಳಿದರು. ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಸಭೆಯನ್ನು ನಿರ್ವಹಿಸಿದರು. ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.