Wednesday, May 4, 2011

ರಜತ ಸಂಭ್ರಮದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ: ರವಿರಾಜ ಹೆಗ್ಡೆ

ಮಂಗಳೂರು,ಮೇ.04:ಮಣಿಪಾಲ ಮತ್ತು ಉಡುಪಿ ಪಟ್ಟಣದ ನಾಗರೀಕರಿಗೆ ಹಾಲು ಪೂರೈಕೆಗಾಗಿ 1974 ರಲ್ಲಿ ಆರಂಭವಾದ ದಕ್ಷಿಣ ಕನ್ನಡ ಹಾಲು ಒಕ್ಕೂಟ ಇಂದು ಒಕ್ಕೂಟದ ವ್ಯಾಪ್ತಿಯಲ್ಲಿ 154 ಮಹಿಳಾ ಸಂಘಗಳು ಸೇರಿದಂತೆ ಒಟ್ಟು 637 ಸಂಘಗಳು ಕಾರ್ಯಾಚರಣೆಯಲ್ಲಿದ್ದು ಒಟ್ಟು 1,05,000 ಸದಸ್ಯರಲ್ಲಿ 26,362 ಮಹಿಳಾ ಸದಸ್ಯರು ಇದ್ದಾರೆ. ಇವರಲ್ಲಿ 42,000 ಸಕ್ರಿಯ ಸದಸ್ಯರಿದ್ದು ದಿನವಹಿ 1,75,000 ಲೀಟರ್ ಹಾಲು ಶೇಖರಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ತಿಳಿಸಿದ್ದಾರೆ.
ಅವರಿಂದು ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1986ರಲ್ಲಿ ಅವಿಭಜಿತ ದ. ಕ ಜಿಲ್ಲೆಯ ಕಾರ್ಯವ್ಯಾಪ್ತಿಯೊಂದಿಗೆ ದ.ಕ ಹಾಲು ಉತ್ಪಾದಕರ ಒಕ್ಕೂಟ ಸ್ಥಾಪನೆಯಾಯಿತು.ಪ್ರಸ್ತುತ ಪ್ರತಿದಿನ 1.80 ಲಕ್ಷ ಲೀಟರ್ ಪೂರೈಕೆಯಾಗುತ್ತಿದ್ದು ಬೇಡಿಕೆ 3 ಲಕ್ಷ ಲೀಟರ್ ನಷ್ಟಿದೆ ಎಂದ ಅಧ್ಯಕ್ಷರು, ಈ ಬೇಡಿಕೆ ಪೂರೈಕೆಗಾಗಿ ಹಾಸನ, ಮಂಡ್ಯ ಮತ್ತು ಮೈಸೂರು ಒಕ್ಕೂಟಗಳಿಂದ ಹಾಲು ಖರೀದಿಸಿ ಪೂರೈಸಲಾಗುತ್ತಿದೆ ಎಂದರು.ರಜತಮಹೋತ್ಸವದ ಸವಿನೆನಪಿಗೆ ಹೆಚ್ಚುತ್ತಿರುವ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಸುಮಾರು 20 ಕೋಟಿ ವೆಚ್ಚದಲ್ಲಿ ನೂತನ ಘಟಕ ನಿರ್ಮಾಣದ ಯೋಜನೆ ಹಮ್ಮಿಕೊಳ್ಳಲಾಗಿದೆ. ಗ್ರಾಹಕರಿಗೆ ಮೇ 1ರಿಂದ 31 ರವರೆಗೆ ಮೈಸೂರು ಪಾಕ್ ಹಾಗೂ ಪೇಡಾ ಖರೀದಿಗೆ (250 ಗ್ರಾಮ ಹಾಗೂ 100 ಗ್ರಾಮ್) ರಿಯಾಯ್ತಿ ನೀಡಲಾಗುವುದು. ರೂ. 25 ಲಕ್ಷ ವೆಚ್ಚದಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಸಾಕಾಣಿಕೆ ಯೋಜನೆ ಹಮ್ಮಿಕೊಳ್ಳಲಾಗಿದೆ. ರಜತ ಮಹೋತ್ಸವ ಕಾರ್ಯಕ್ರಮ ಮೇ 8ರಂದು ಬೆಳಗ್ಗೆ 10.30ಕ್ಕೆ ನೆರವೇರಲಿದೆ. ಉದ್ಘಾಟನೆಯನ್ನು ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ ವಿ ಎಸ್ ಆಚಾರ್ಯ, ಇಂಧನ ಸಚಿವ ಕು. ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೆಮಾರ್, ಸಂಸದರಾದ ಡಿ ವಿ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಮುಂತಾದವರು ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ನಿರ್ವಾಹಕ ನಿರ್ದೇಶಕ ಚಂದ್ರಶೇಖರ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.