Friday, October 22, 2010

ಮಂಗಳೂರಿನಲ್ಲಿ ಸತತ ಮಳೆ:ವಿಕೋಪ ಎದುರಿಸಲು ತುರ್ತು ಸಭೆ

ಮಂಗಳೂರು,ಅ.22:ಜಿಲ್ಲೆಯಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ ತುರ್ತು ಕಾರ್ಯಾಚರಣೆ ನಡೆಸಲು ಇಂದು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಯೋಗೀಶ್ ಭಟ್ ಹಾಗೂ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ನೇತೃತ್ವದಲ್ಲಿ ಸಭೆ ನಡೆಯಿತು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ವಿಜಯ ಪ್ರಕಾಶ್ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ನೀರು ನುಗ್ಗಿ ಅಪಾಯದ ಸ್ಥಿತಿಯಲ್ಲಿರುವ ಪ್ರದೇಶಗಳು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಸಭೆಗೆ ವಿವರಣೆ ನೀಡಿದರು.

ಸತತ ಸುರಿಯು ತ್ತಿರುವ ಮಳೆಯಿಂದ ಮಂಗಳೂರು ನಗರ ಸೇರಿದಂತೆ ಹಲವು ಕಡೆ ಕೃತಕ ನೆರೆ ಭೀತಿ ಸೃಷ್ಟಿ ಯಾಗಿದೆ. ಇದು ವರೆಗೆ 59 ಕಡೆಗಳಲ್ಲಿ ಮಳೆ ಹಾನಿ ಹಾಗೂ ನೀರು ನುಗ್ಗಿದ ಬಗ್ಗೆ ಸಾರ್ವಜನಿ ಕರಿಂದ ದೂರು ಬಂದಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದರು. ನಗರದ ಕೋಡಿಕಲ್, ಕೊಟ್ಟಾರ ಚೌಕಿ, ಭಗವತಿ ನಗರ, ಕಟ್ಟೆಪುಣಿ, ಬಂದರು ಒಣಮೀನು ಗೋದಾಮು ಇರುವ ಕಡೆ ನೀರು ನುಗ್ಗಿ ಹಾನಿಯಾಗಿದೆ. ನದಿ, ಸಮುದ್ರ ಸೇರುವ ಅಳಿವೆ ಬಾಗಿಲಿನ ಬಳಿ ಹೂಳು ತುಂಬಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಿಲ್ಲ. ಕೋಡಿಕಲ್ ಭಗವತಿ ನಗರದ ಬಳಿ 4ರಿಂದ 5 ಅಡಿ ನೀರು ನಿಂತಿದೆ. ಇಲ್ಲಿ ಮನಪಾ ತಂಡ ಪರಿಹಾರ ಕಾರ್ಯದಲ್ಲಿ ನಿರತವಾಗಿವೆ. ಹಲವು ಕಡೆ ಚರಂಡಿ ಒತ್ತುವರಿಯಾಗಿರುವುದು ಕೃತಕ ನೆರೆಗೆ ಕಾರಣವಾಗಿದೆ.ಒತ್ತುವರಿ ತೆರವಿಗೆ ಶಾಸಕರು ನಿರ್ದೇಶನ ನೀಡಿದ್ದಾರೆ. ಜಪ್ಪಿನಮೊಗರು, ಕೂಳೂರು, ಕಣ್ಣೂರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಕೃತಕ ನೆರೆ ಉಂಟಾಗಿದೆ ಎಂದು ಮನಪಾ ಆಯುಕ್ತರು ಸಭೆಗೆ ವಿವರಿಸಿದರು.
ಮಂಗಳೂರಿನಲ್ಲಿ 1000 ಮಿ.ಮೀ. ಹೆಚ್ಚುವರಿ ಮಳೆ :
ಮಂಗಳೂರು ತಾಲೂಕಿನಲ್ಲಿ ಕಳೆದ ಬಾರಿಗೆ ಹೋಲಿಸಿ ದಾಗ ಈ ಬಾರಿ ಒಂದು ಸಾವಿರ ಮಿಲಿ ಮೀಟರ್ ಹೆಚ್ಚು ಮಳೆ ಸುರಿದಿದೆ. ಜಿಲ್ಲೆಯ ಉಳಿದ ಕಡೆಗಿಂತ ಮಂಗಳೂರು ತಾಲೂಕಿನಲ್ಲಿ ಈ ತಿಂಗಳು ಹೆಚ್ಚು ಮಳೆ ಸುರಿದಿದೆ ಎಂದು ಅಪರ ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ 24 ಗಂಟೆಯೂ ಲಭ್ಯ ಹೆಲ್ಪ್ ಲೈನ್ ಕಾರ್ಯನಿರ್ವಹಿಸಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳಿಗೆ ಸೂಚಿಸಿದರು. ಅಡ್ಯಾರ್ ಕಣ್ಣೂರಿನ ಕನ್ನಗುಡ್ಡೆ ಎಂಬಲ್ಲಿ ಕೃಷ್ಣ ನಗರದ ಬಳಿ ಗುಡ್ಡ ಕುಸಿದು ಮನೆಗೆ ಹಾನಿಯಾಗಿದೆ. ಕದ್ರಿ ಹಾಗೂ ಬೋಳೂರು ಬಳಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಅಗತ್ಯ ಬಿದ್ದರೆ ಗಂಜಿ ಕೇಂದ್ರ ಹಾಗೂ ಪುನರ್ವಸತಿ ಕೇಂದ್ರ ಆರಂಭಿಸಲು ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಹಾಯವಾಣಿ ಮಂಗಳೂರು ಮನಪಾ ವ್ಯಾಪ್ತಿಯಲ್ಲಿ 2220306, 2220344, ಬಂಟ್ವಾಳ 08255- 232120, ಬೆಳ್ತಂಗಡಿ 08256- 232047, ಮಂಗಳೂರು ತಾಲೂಕು 2220587, ಪುತ್ತೂರು 08251 230349, ಸುಳ್ಯ 08257 230330 ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ 1077 ಎಂದು ಪ್ರಭಾಕರ ಶರ್ಮಾ ತಿಳಿಸಿದರು.