Saturday, November 28, 2009

ಸಧೃಡ ಭಾರತ ನಿರ್ಮಾಣವೇ ಯುವಕರ ಗುರಿಯಾಗಿರಲಿ : ಸಂಸದ ಕಟೀಲ್

ಮಂಗಳೂರು,ನ 28. ನೆಹರು ಯುವ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವ ಸಮಾವೇಶ ಮತ್ತು 2008- 2009 ರ ಅತ್ಯುತ್ತಮ ಯುವ ಮಂಡಲ ಹಾಗೂ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಭವನದಲ್ಲಿ ಇಂದು ನಡೆಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲ್ ಅವರು ದೇಶದ ಆಸ್ತಿಯಾದ ಯುವಕರಿಂದ ಮಾತ್ರ ಸಧೃಡ ಭಾರತ ನಿರ್ಮಾಣ ಮಾಡಲು ಸಾಧ್ಯ.ರಾಷ್ಟ್ರ ಅಭಿವೃದ್ದಿಯೇ ಗುರಿಯಾಗಿರಿಸಿ ಯುವ ಜನತೆ ಮುಂದಡಿ ಇಡಬೇಕೆಂದು ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ಸಂತೋಷ್ ಕುಮಾರ್ ಭಂಡಾರಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಮಂಗಳೂರು ಮೇಯರ್ ಎಂ. ಶಂಕರ್ ಭಟ್ ಅವರು ಮುಖ್ಯ ಅಥಿತಿಯಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು. 2008-09 ರ ಯುವ ಪ್ರಶಸ್ತಿಯನ್ನು ಹಳೆಯಂಗಡಿ ಯುವತಿ ಮಂಡಲದ ಕುಮಾರಿ ವನಿತ ಮತ್ತು ಕಾರ್ಕಳ ಯುವಕ ಮಂಡಲದ ಯತೀಶ್ ಅವರಿಗೆ,ಹಾಗೂ ಅತ್ತ್ಯುತ್ತಮ ಯುವ ಮಂಡಲ ಪ್ರಶಸ್ತಿಯನ್ನು ಕನಕ ಮಜಲು ಯುವಕ ಮಂಡಲಕ್ಕೆ ಅತಿಥಿಗಳು ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಮ್ ದೇವ್ ಶೆಣೈ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಯುವಜನ ಸಮನ್ವಯ ಅಧಿಕಾರಿ ಅನಂತಪ್ಪ ಬಿ., ರಾ.ಸೇ. ಯೋಜನಾಧಿಕಾರಿ ಡಾ. ಶ್ರೀಧರ ಹೆಗ್ಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.