Sunday, November 1, 2009

ಸರಳ ರಾಜ್ಯೋತ್ಸವ:ಭುವನೇಶ್ವರಿಗೆ ನಮನ

ಮಂಗಳೂರು,ನ.1:ರಾಜ್ಯದ ಅಭಿವೃದ್ಧಿಗೆ ಜನಪರ ಯೋಜನೆಗಳನ್ನು ರೂಪಿಸುವಾಗ ತಾರತಮ್ಯ ಹಾಗೂ ಪಕ್ಷಪಾತಕ್ಕೆ ಅವಕಾಶವಿಲ್ಲ; ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಅವರು ಹೇಳಿದರು.
ಇಂದು ನಗರದ ನೆಹರೂ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದ ಸಚಿವರು, ಜಿಲ್ಲೆಯ ಅಭಿವೃದ್ದಿಗೆ ಕೈಗೊಂಡ ಕ್ರಮಗಳು ಹಾಗೂ ಬಿಡುಗಡೆ ಮಾಡಿದ ಅನುದಾನದ ಮಾಹಿತಿ ನೀಡಿದರು. ನೆರೆ ಪೀಡಿತರಿಗೆ ನೆರವು ನೀಡಿದ್ದಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದರು.ವಿಶ್ವತುಳು ಸಮ್ಮೇಳನಕ್ಕೆ ಹಾಗೂ ಈ ಸಂದರ್ಭದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು 21 ಕೋಟಿ ರೂ.ಅನುದಾನ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.
ಸುಂದರ, ಸಂತೃಪ್ತ ನಾಡು ಕಟ್ಟುವ ಸದಾಶಯವನ್ನು ರಾಜ್ಯೋತ್ಸವ ಸಮಾರಂಭದಂದು ವ್ಯಕ್ತಪಡಿಸಿದ ಸಚಿವರು ಕನ್ನಡ ಮಾಧ್ಯಮ ಶಿಕ್ಷಣ ಕ್ಕೆ ಇನ್ನಷ್ಟು ಕಸುವು ತುಂಬುವ ಕಾರ್ಯವಾಗಬೇಕೆಂದರು. ಸಮಾರಂಭದಲ್ಲಿ ಪಥಸಂಚಲನ,ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.