Friday, September 18, 2009

ಪಶ್ವಿಮಘಟ್ಟ ಕಾರ್ಯಪಡೆಯಿಂದ ಸೆ.26ರಂದು ವರದಿ ಸಲ್ಲಿಕೆ

ಮಂಗಳೂರು,ಸೆ.18: ಪಶ್ಚಿಮಘಟ್ಟ ಕಾರ್ಯಪಡೆ ತನ್ನ ಅಧ್ಯಯನ ವರದಿ ಮತ್ತು ಶಿಫಾರಸ್ಸುಗಳನ್ನು ಸೆ.26ರಂದು ಸರಕಾರಕ್ಕೆ ಸಲ್ಲಿಸಲಿದೆ ಎಂದು ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಜೀವವೈವಿಧ್ಯ ಸಂರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆ, ತಾಲೂಕು,ಗ್ರಾ.ಪಂ.ಮಟ್ಟದಲ್ಲಿ ಜೀವವೈವಿಧ್ಯ ರಕ್ಷಣೆಯ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯತ್ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವಹಿಸಲಾಗುವುದು ಎಂದು ಹೇಳಿದರು. ಅರಣ್ಯ ಇಲಾಖೆಯಲ್ಲಿ ಶೇ.50ರಷ್ಟು ಹುದ್ದೆಗಳು ಖಾಲಿ ಇದ್ದು ಸ್ಥಳೀಯರಿಗೆ ಆದ್ಯತೆ ನೀಡಿ ಹುದ್ದೆ ಭರ್ತಿ ಮಾಡಲಾಗುವುದು ಎಂದರು. ಕರಾವಳಿಯ ಸೂಕ್ಷ್ಮ ಪ್ರದೇಶ,ಅಳಿವೆ ಪ್ರದೇಶಗಳನ್ನು ಗುರುತಿಸಿ ರಕ್ಷಿಸಲು ಸರಕಾರವನ್ನು ಒತ್ತಾಯಿಸಲಾಗುವುದು ಎಂದರು. ನೇತ್ರಾವತಿ ತಿರುವು ಯೋಜನೆ ಅವೈಜ್ಞಾನಿಕವಾಗಿರುವುದರಿಂದ ಯೋಜನೆ ಕಾರ್ಯಸಾಧುವಲ್ಲ ಎಂದರು.ಕಡಲ್ಕೊರೆತ ತಡೆಯಲು ಹಸಿರು ತಡೆಗೋಡೆ( ಗ್ರೀನ್ ವಾಲ್ ) ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದ್ದು ಈ ಸಂಬಂಧ ಸೆ.23ರಂದು ಬೆಂಗಳೂರಿನಲ್ಲಿ ಪರಿಸರ ವಿಜ್ಞಾನಿಗಳ, ಜೀವವೈವಿಧ್ಯ,ಅರಣ್ಯ, ಬಂದರು ಮತ್ತು ಇಲಾಖಾಧಿಕಾರಿಗಳ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿದೆ ಎಂದರು.