Saturday, June 20, 2009

ನುಸಿರೋಗ ತಡೆಗೆ ತಾಲೂಕಿಗೊಂದು ಪೈಲಟ್ ಪ್ರಾಜೆಕ್ಟ್

ಮಂಗಳೂರು, ಜೂ. 20: ತೆಂಗು ಬೆಳೆಯನ್ನು ಕಾಡುತ್ತಿರುವ ನುಸಿರೋಗ ನಿಯಂತ್ರಣಕ್ಕೆ ತಾಲೂಕಿಗೊಂದರಂತೆ ಪೈಲೆಟ್ ಪ್ರಾಜೆಕ್ಟ್ ರೂಪಿಸಲಾಗುವುದು ಎಂದು ತೋಟಗಾರಿಕೆ ಮತ್ತು ಬಂಧೀಖಾನೆ ಸಚಿವ ಶ್ರೀ ಉಮೇಶ್ ವಿ. ಕತ್ತಿ ಹೇಳಿದರು.ಇಂದು ತೋಟಗಾರಿಕೆ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಬಳಿಕ ಇಲಾಖೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರು ಮತ್ತು ಅಧಿಕಾರಿಗಳ ಸಹಭಾಗಿತ್ವದಲ್ಲಿ ನುಸಿರೋಗ ತಡೆಗೆ ಪೈಲೆಟ್ ಪ್ರಾಜೆಕ್ಟ್ ರೂಪಿಸಲಾಗಿದ್ದು, ಇದಕ್ಕೆ ನೂರು ಶೇಕಡಾ ಆರ್ಥಿಕ ನೆರವನ್ನು ನೀಡುವ ಭರವಸೆ ನೀಡಿದರು.ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆಯನ್ನು ಕಾಪಾಡಿ ರೈತರ ಹಿತ ರಕ್ಷಿಸಲು ಅಡಿಕೆ ಬೆಳೆಗೆ 70ರಿಂದ 75 ರೂಪಾಯಿಗಳ ಬೆಂಬಲ ಬೆಲೆ ನೀಡಲಾಗುವುದು ಎಂದ ಸಚಿವರು, ರೈತರ ಹಿತರಕ್ಷಣೆ ಸರ್ಕಾರದ ಆದ್ಯತೆ ಎಂದು ಸ್ಪಷ್ಟ ಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆ ತೋಟಗಾರಿಕೆ ಪ್ರಧಾನ ಜಿಲ್ಲೆಯಾಗಿದ್ದು, 98339 ಹೆಕ್ಟೇರ್ ಗಳಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ರೈತ ಫಲಾನುಭವಿಗಳಿಗೆ 5.15 ಲಕ್ಷ ರೂ. ಸಹಾಯಧನವನ್ನು 3387 ಫಲಾನುಭವಿಗಳಿಗೆ ಒದಗಿಸಲಾಗಿದೆ.ಸಮಗ್ರ ಕೀಟ ರೋಗ ನಿಯಂತ್ರಣ ಯೋಜನೆಯಡಿ ರೂ. 0.92 ಲಕ್ಷ ಗೋನಿಯೋಜನಸ ಪರೋಪಜೀವಿಗಳನ್ನು ಉತ್ಪಾದಿಸಿ ಕಪ್ಪು ತಲೆ ಹುಳ ಬಾಧಿತ ತೋಟಗಳಿಗೆ ಬಿಡುಗಡೆ ಮಾಡಲಾಗಿದೆ. 6 ಲಕ್ಷ ರೂ.ಗಳನ್ನು ಅಡಿಕೆ ಕೊಳೆ ರೋಗ ನಿಯಂತ್ರಣ ಹಾಗೂ ಬೇರು ಹುಳ ನಿಯಂತ್ರಣಕ್ಕೆ ಸಹಾಯಧನ ನೀಡಲಾಗಿದೆ.
ಅಡಿಕೆ ಸಂಶೋಧನೆ ಅಭಿವೃದ್ಧಿಗೆ ರೂ. 1 ಕೋಟಿ ಅನುದಾನ ಒದಗಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯುಡಿ ರೈತರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.