Thursday, June 25, 2009

ನೆಮ್ಮದಿ ಕೇಂದ್ರಕ್ಕೆ ವಿದ್ಯಾರ್ಥಿಗಳು ಬಂದರೆ ಶಾಲಾ, ಕಾಲೇಜು ಮುಖ್ಯಸ್ಥರ ಅಮಾನತು: ಡಿ ಸಿ

ಮಂಗಳೂರು, ಜೂ. 25: ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ವಿದ್ಯಾರ್ಥಿಗಳು ನೆಮ್ಮದಿ ಕೇಂದ್ರಗಳಿಗೆ ಬರುವ ಅಗತ್ಯವಿಲ್ಲ; ಈ ಸಂಬಂಧದ ಅರ್ಜಿಗಳನ್ನು ಶಾಲಾ ಕಾಲೇಜುಗಳಲ್ಲಿ ಮುಖ್ಯಸ್ಥರೇ ಸ್ವೀಕರಿಸಿ, ಸರ್ಟಿಫಿಕೇಟ್ ತರಿಸಿಕೊಳ್ಳುವ ಹೊಣೆ ಶಾಲಾ ಕಾಲೇಜುಗಳದ್ದೇ ಆಗಿರುತ್ತದೆ. ಇಲ್ಲಿಂದ ವಿದ್ಯಾರ್ಥಿಗಳನ್ನು ನೆಮ್ಮದಿ ಕೇಂದ್ರಗಳಿಗೆ ಕಳುಹಿಸಿದರೆ ಅಂತಹವರನ್ನು ಅಮಾನತ್ತಿನಲ್ಲಿ ಇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ನೆಮ್ಮದಿಕೇಂದ್ರಗಳಲ್ಲಿ ಆಗುತ್ತಿರುವ ಗೊಂದಲಗಳನ್ನು ತಡೆಯಲು ಹಲವು ಬಾರಿ ಈ ಸಂಬಂಧ ಸ್ಪಷ್ಟನೆ ನೀಡಿದರೂ ಮತ್ತೆ ಮತ್ತೆ ವಿದ್ಯಾರ್ಥಿಗಳು ನೆಮ್ಮದಿ ಕೇಂದ್ರಕ್ಕೆ ಅಲೆಯುತ್ತಿದ್ದಾರೆ; ಇದನ್ನು ತಪ್ಪಿಸಲು ಕಠಿಣ ಕ್ರಮದ ಅಗತ್ಯವನ್ನು ಅವರು ಒತ್ತಿಹೇಳಿದರು.
ಮುಂದಿನ ಒಂದು ತಿಂಗಳೊಳಗಾಗಿ ಆರ್ ಟಿ ಸಿ ಮಾದರಿಯಲ್ಲಿ ಜಾತಿ ಮತ್ತು ಆದಾಯ ಸರ್ಟಿಫಿಕೇಟ್ ಸಿಗುವ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿದ ಅವರು, ಮುಂದಿನ 5 ವರ್ಷ ಇದೇ ಕೌಂಟರ್ ಮೂಲಕ ವಿದ್ಯಾರ್ಥಿಗಳು ಸರ್ಟಿಫಿಕೇಟ್ ಪಡೆಯುವ ವ್ಯವಸ್ಥೆ ಚಾಲ್ತಿಯಲ್ಲಿರುತ್ತದೆ. ಇದಕ್ಕಾಗಿ ಅವರು ಪ್ರತಿ ವರ್ಷ ವಿ ಎ ಬಳಿ ಹೋಗುವ ಅಗತ್ಯವಿಲ್ಲ ಎಂದರು.
ಭೂಮಿ ಮತ್ತು ನೆಮ್ಮದಿ ಕೇಂದ್ರಗಳಲ್ಲಿ ಜನರು ಕುಳಿತುಕೊಳ್ಳಲು ಅನುಕೂಲವಾಗುವಂತಹ ವಿನೂತನ ವ್ಯವಸ್ಥೆಯನ್ನು ಮಂಗಳೂರು ತಾಲೂಕು ಕಚೇರಿಯಲ್ಲಿ ಆರಂಭಿಸಲಾಗುವುದು ಎಂದ ಅವರು, ಇಲ್ಲಿ ಯೋಜನೆ ಯಶಸ್ವಿಯಾದರೆ ಉಳಿದ ತಾಲೂಕುಗಳಿಗೂ ವಿಸ್ತರಿಸಲಾಗುವುದು ಎಂದರು.
ಬಿ. ಸಿ. ರೋಡ್ ಎನ್ ಎಚ್ 48 ಪೊಳಲಿ ಕ್ರಾಸ್ ವರೆಗೆ ವಾಹನ ಸಂಚಾರ ಬಂದ್: ಈ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುವಾಗುವಂತೆ ಎಲ್ಲಾ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿಗೆ ಈ ಮೂಲಕ ಹೋಗುವ ವಾಹನಗಳು ತೊಕ್ಕೊಟ್ಟು, ಕೊಣಾಜೆ, ಮೆಲ್ಕಾರ್ ಮೂಲಕ ಹೋಗಲಿದ್ದು, ಈ ರಸ್ತೆಗಳ ಅಗತ್ಯ ವಸ್ತು ಹೇರಿಕೊಂಡು ಹೋಗುವ ಲಾರಿಗಳ ಸಂಚಾರಕ್ಕೆ ಮಾತ್ರ ಅವಕಾಶವಿದ್ದು, ಎಲ್ ಪಿ ಜಿ ಟ್ಯಾಂಕರು ಗಳು ಮುಲ್ಕಿ, ಮೂಡಬಿದ್ರೆ ಮೂಲಕ, ಉಳಿದ ಲಾರಿಗಳು ಎನ್ ಎಚ್ 17 ಮೂಲಕ ಹೋಗಲು ಅವಕಾಶವಿದೆ. ಈ ಆದೇಶ ಜೂನ್ 30ರಿಂದ ಜುಲೈ 27ರವರೆಗೆ ಜಾರಿಯಲ್ಲಿರುತ್ತದೆ.
ನಗರದ ಕದ್ರಿ ಉದ್ಯಾನ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲಾಗಿದ್ದು, ಇಲ್ಲಿನ ಸಸ್ಯ ಸಂಪತ್ತನ್ನು ರಕ್ಷಿಸಿ ಅದನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಕ್ರಮಕೈಗೊಂಡಿರುವುದಾಗಿ ಹೇಳಿದರು.
ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಂಪೂರ್ಣ ಗಣಕೀಕರಣ:
ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಕಡತ ವಿಲೇವಾರಿಯನ್ನು ಗಣಕೀಕೃತಗೊಳಿಸಲು ನಾಲ್ಕು ಹಂತಗಳನ್ನು ರೂಪಿಸಲಾಗಿದ್ದು, ಮುಂದಿನ 20 ದಿನಗಳೊಳಗೆ ಪ್ರಥಮ ಹಂತದಲ್ಲಿ ಕಚೇರಿಯ ಕಡತಗಳನ್ನು ಇಂಟರ್ ನೆಟ್ ನಲ್ಲಿ ವೀಕ್ಷಿಸಬಹುದು ಎಂದರು. ಈ ಸಂಬಂಧ ಸಿಬ್ಬಂದಿಗಳಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದ್ದು, ನಮ್ಮ 203 ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 3 ಗ್ರಾ. ಪಂಗಳಲ್ಲಿ ಬ್ರಾಡ್ ಬ್ಯಾಂಡ್ ಸೌಲಭ್ಯವಿಲ್ಲ ಇದನ್ನು ಒದಗಿಸಿ ಎಲ್ಲಾ ಮಾಹಿತಿಗಳು ಜನರಿಗೆ ಸುಲಭವಾಗಿ ಮತ್ತು ನೇರವಾಗಿ ದೊರಕುವಂತೆ ಮಾಡಲಾಗುವುದು ಎಂದರು.