Monday, December 21, 2009

ಮಾಹಿತಿ ಹಕ್ಕಿನ ಸದ್ಬಳಕೆಗೆ ಕರೆ

ಮಂಗಳೂರು,ಡಿ.21:ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಗ್ಗಳಿಕೆ ನಮ್ಮದು.ನಮ್ಮ ದೇಶದಲ್ಲಿ ಪ್ರಜೆಗಳು ಪ್ರಭುಗಳಾಗಲು ಮಾಹಿತಿ ಹಕ್ಕು ಕಾಯಿದೆ ಸದ್ಬಳಕೆ ಅಗತ್ಯ ಎಂದು ಕಿನ್ನಿಗೋಳಿ ಗ್ರಾಮಪಂಚಾಯತ್ ಉಪಾಧ್ಯಕ್ಷರು ಹಾಗೂ ವಕೀಲರೂ ಆಗಿರುವ ವಿಲಿಯಂ ಆಲ್ವಿನ್ ಕಾರ್ಡೊಜಾ ಹೇಳಿದರು.
ಅವರು ಭಾನುವಾರ ಪುನ ರೂರಿನ ಶ್ರೀ ವಿಶ್ವನಾಥ ದೇವ ಸ್ಥಾನದ ಸಭಾಂ ಗಣದಲ್ಲಿ ವಾರ್ತಾ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಕಿನ್ನಿಗೋಳಿ ಗ್ರಾಮಪಂಚಾಯತ್ ನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಾಹಿತಿ ಹಕ್ಕು ಕಾಯಿದೆ ಪ್ರಚಾರಾಂದೋಲನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಜಾಗತಿಕ ಮಾನವ ಹಕ್ಕುಗಳ ಘೋಷಣೆಗೆ ಸಹಿ ಮಾಡಿರುವ ರಾಷ್ಟ್ರ ಗಳಲ್ಲಿ ಭಾರತ ಒಂದಾಗಿದ್ದು, ರಾಷ್ಟ್ರ ಮಟ್ಟದ ಮಾಹಿತಿ ಹಕ್ಕು ಕಾನೂನು 2005ರ ಜೂನ್ 15ರಂದು ಜಾರಿಗೆ ಬಂತು. ಶಕ್ತಿಯುತ ಕಾಯಿದೆ ಇದಾಗಿದ್ದು,ಈ ಕಾಯಿದೆಯ ಸದ್ಬಳಕೆಯಾಗಬೇಕಾದರೆ ಜನರು ಕಾಯಿದೆಯ ಪ್ರಯೋಜನವನ್ನು ಪಡೆಯಬೇಕು ಎಂದು ಹೇಳಿದರು. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಸ್ವಹಿತಾಸಕ್ತಿ,ಅಧಿಕಾರ ದುರುಪಯೋಗ,ಅಸಮರ್ಪಕ ಕಾನೂನು ಅನುಷ್ಠಾನಗಳನ್ನು ನಿವಾರಿಸಲು ಸಾಧ್ಯ ಎಂದರು.ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಸುಜಾತ ಸದಾನಂದ ನೆರವೇರಿಸಿದರು. ಗ್ರಾಮಪಂಚಾಯತಿ ಸದಸ್ಯರಾದ ದಿನೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಮಾರಿ ಅನಿತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರೋಹಿಣಿ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೂಪರ್ ವೈಸರ್ ವೈ ಪ್ರಕಾಶ್ ವಂದಿಸಿದರು. ನಂತರ ಗಿರೀಶ್ ನಾವಡ ತಂಡದಿಂದ ಬೀದಿ ನಾಟಕ ನಡೆಯಿತು.