
5ಸಾವಿರ ಪ್ರತಿನಿಧಿಗಳು
ಜ.12ರಿಂದ ನಡೆಯಲಿರುವ ಯುವಜನೋತ್ಸವದಲ್ಲಿ 5ಸಾವಿರದಷ್ಟು ಯುವ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ಹಲವು ಪ್ರದೇಶಗಳಿಂದ ಪ್ರತಿನಿಧಿಗಳು ದಿನಂಪ್ರತಿ ಹೆಸರು ನೋಂದಾಯಿಸುತ್ತಿದ್ದಾರೆ. 35ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಯುವಪ್ರತಿನಿಧಿಗಳು ಹಾಗೂ ಸಾರ್ಕ್ ದೇಶದಿಂದಲೂ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಮುಖ್ಯ ಉದ್ದೇಶವನ್ನಿಟ್ಟುಕೊಂಡು ಈ ಬಾರಿಯ ಯುವಜನೋತ್ಸವದಲ್ಲಿ ಸ್ಪರ್ಧಾತ್ಮಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಪದ ಮತ್ತು ಶಾಸ್ತ್ರೀಯ ನೃತ್ಯ, ಏಕಾಂಕ ನಾಟಕ, ಪ್ರದರ್ಶನ ಕಲೆಗಳ ಸಾಹಸವನ್ನು ಪ್ರದರ್ಶಿಸಲಾಗುವುದು.
ವಿವಿಧ ಕಡೆ ಸ್ಪರ್ಧೆಗಳು;
ಸ್ಪರ್ಧಾ ಕಾರ್ಯಕ್ರಮಗಳನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲು ಹಾಗೂ ಅಷ್ಟೇ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ನಗರದ ಪುರಭವನ, ಟಿ.ಎಂ.ಎ ಪೈ ಕನ್ ವೆನ್ ಶನ್ ಸೆಂಟರ್, ಮಣ್ಣಗುಡ್ಡೆಯ ದೇವಾಡಿಗರ ಭವನ, ಎಸ್.ಡಿ.ಎಂ.ಕಾನೂನು ಕಾಲೇಜು ಸಭಾಂಗಣ, ಕುದ್ರೋಳಿಯ ಕೊರಗಪ್ಪ ಕಲ್ಯಾಣ ಮಂಟಪ, ಗೋಕರ್ಣನಾಥೇಶ್ವರ ಸಭಾಂಗಣ ಕುದ್ರೋಳಿ ಇಲ್ಲಿ ವ್ಯವಸ್ಥೆಗೊಳಿಸಲಾಗಿದೆ.
ಜನಪದ ನೃತ್ಯ, ಏಕಾಂಕ ನಾಟಕ, ಶಾಸ್ತ್ರೀಯ ಗಾಯನ(ವೈಯಕ್ತಿಕ), ಶಾಸ್ತ್ರೀಯ ವಾದ್ಯ (ವೈಯಕ್ತಿಕ) ಆಶುಭಾಷಣ, ಜನಪದ ಗೀತೆ, ಶಾಸ್ತ್ರೀಯ ನೃತ್ಯ ಈ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ.
ಉದ್ಘಾಟನಾ ಸಮಾರಂಭ:
ನಗರದ ಪ್ರತಿಷ್ಠಿತ ಮಂಗಳಾ ಕ್ರೀಡಾಂಗಣದಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವದ ಚಾಲನಾ ಕಾರ್ಯಕ್ರಮ ಜ.12ರಂದು ಸಂಜೆ 5ಕ್ಕೆ ನಡೆಯಲಿದೆ. ಜನವರಿ 16ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭವೂ ಅದೇ ವೇದಿಕೆಯಲ್ಲಿ ಸಂಪನ್ನಗೊಳ್ಳಲಿದೆ. ವೈವಿಧ್ಯಮಯ ಉದ್ಘಾಟನಾ ಸಮಾರಂಭಕ್ಕೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ರಸಸಂಜೆ:
ವಿವಿದೆಡೆಗಳಿಂದ ಬಂದ ಕಲಾಸಕ್ತರಿಗಾಗಿ ಜ.13ರಿಂದ 15ರ ತನಕ ಪ್ರತಿದಿನ ಸಂಜೆ 7ರಿಂದ ಸುಮಧುರ ರಸಸಂಜೆ ಎಂಬ ವಿಭಿನ್ನ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಲಾ ವೈವಿಧ್ಯ:
ಕಾರ್ಯಕ್ರಮದಂಗವಾಗಿ ಕರಾವಳಿ ಉತ್ಸವ ಮೈದಾನದಲ್ಲಿ ಆಹಾರೋತ್ಸವ ಮತ್ತು ಯುವ ಕೃತಿ, ನೆಹರೂ ಮೈದಾನದಲ್ಲಿ ಗ್ರೌಂಡ್ಸ್ ಸ್ಪೋರ್ಟ್ಸ್ ಹಾಗೂ ಪಣಂಬೂರು ಬೀಚ್ ನಲ್ಲಿ ವಾಟರ್ ಸ್ಪೋರ್ಟ್ಸ್ ಎಂಬ ಸಾಹಸ ಮಯ ಪ್ರದರ್ಶನಗಳು, ಮಂಗಳೂರು ಕದ್ರಿ ಪಾರ್ಕ್ನಲ್ಲಿ ಯುವ ಕಲಾ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಶೇಷ ಆಕರ್ಷಣೆ:
ವಿಶೇಷ ಆಕರ್ಷಣೆಯಾಗಿ ಜ.14ರಂದು ಪಣಂಬೂರು ಬೀಚ್ ನಲ್ಲಿ ಬೋಟ್ ರೇಸ್, ಜ.15ರಂದು ಬೀಚ್ ವಾಲಿಬಾಲ್ ಹಾಗೂ ಥ್ರೋ ಬಾಲ್ , ಅದೇ ದಿನ ಬೆಳಗ್ಗೆ 8ರಿಂದ ಕಂಬಳ ಗದ್ದೆ ಓಟ, ಫ್ಲವರ್ ಷೋ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಯಶಸ್ಸಿಗೆ ಈಗಾಗಲೇ ಸ್ವಾಗತ ಸಮಿತಿ, ಉಪ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ಸಮಿತಿಗಳು ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
17ನೇ ರಾಷ್ಟ್ರೀಯ ಯುವಜನೋತ್ಸವ ಮಂಗಳೂರಿಗರ ಅದಕ್ಕೂ ಹೆಚ್ಚಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಬ್ಬವಾಗಿ ಮೂಡಿಬರಬೇಕೆಂಬುದು ನಮ್ಮ ಉದ್ದೇಶವಾಗಿದೆ. ಜನತೆಯ ಸ್ಪಂದನ, ವಿವಿಧ ಸಂಘ ಸಂಸ್ಥೆಗಳ, ಸಂಘಟನೆಗಳ ಸ್ಪಂದನ ಸಹಕಾರವನ್ನು ಮುಕ್ತವಾಗಿ ಸ್ವಾಗತಿಸುತ್ತಿದ್ದೇವೆ.